ಕನಕಪುರ: ಮಕ್ಕಳ ಪ್ರಜ್ವಲ ಭವಿಷ್ಯಕ್ಕಾಗಿ ಉತ್ತಮ ವ್ಯಕ್ತಿಯನ್ನು ಕ್ಷೇತ್ರದ ಜನತೆ ಬೆಂಬಲಿಸಲಿದ್ಜಾರೆ ಎಂಬ ವಿಶ್ವಾಸವಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಪತ್ನಿ ಅನುಸೂಯ ಅವರು ಹೇಳಿದರು.
ಕನಕಪುರ: ಮಕ್ಕಳ ಪ್ರಜ್ವಲ ಭವಿಷ್ಯಕ್ಕಾಗಿ ಉತ್ತಮ ವ್ಯಕ್ತಿಯನ್ನು ಕ್ಷೇತ್ರದ ಜನತೆ ಬೆಂಬಲಿಸಲಿದ್ಜಾರೆ ಎಂಬ ವಿಶ್ವಾಸವಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಪತ್ನಿ ಅನುಸೂಯ ಅವರು ಹೇಳಿದರು.
ತಾಲೂಕಿನ ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಕಚುವನಹಳ್ಳಿ, ಕಂಚನಹಳ್ಳಿ, ಗುರುವಿನಪುರದ ಶ್ರೀ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದು ಪತಿಯ ಪರ ಚುನಾವಣಾ ಪ್ರಚಾರ ಮಾಡಿದರು. ಹಳ್ಳಿಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಉತ್ಸಾಹ ಹಾಗೂ ಸಂಭ್ರಮದಿಂದ ಪಟಾಕಿ ಸಿಡಿಸಿ ಅನುಸೂಯ ಅವರನ್ನು ಮಂಗಳ ವಾದ್ಯಗಳೊಂದಿಗೆ ಬರಮಾಡಿಕೊಂಡು ಹೆಂಗಳೆಯರು ಆರತಿ ಬೆಳಗಿ ಹಾರೈಸಿದರು. ನನ್ನ ಪತಿ ಮಂಜುನಾಥ್ ತಮ್ಮ ಸೇವಾ ಕ್ಷೇತ್ರದಲ್ಲಿ ಬಿಡುವಿಲ್ಲದೆ ಬಡವ, ಶ್ರೀಮಂತರೆನ್ನದೆ ಸೇವೆ ಸಲ್ಲಿಸಿದ್ದಾರೆ. ಹಣವಿಲ್ಲದೆ ಬಂದ ಬಡವರಿಗೂ ಆರೋಗ್ಯ ಮೊದಲು ಹಣ ನಂತರ ಎಂಬ ಧ್ಯೇಯದೊಂದಿಗೆ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ದೇಶದ ಸಮಸ್ತ ಜನರ ಆರೋಗ್ಯ ಸುಧಾರಣೆ ಮತ್ತು ಗ್ರಾಮೀಣರಿಗೆ ಏನಾದರೂ ಸೇವೆ ಮಾಡಬೇಕೆಂಬ ಹಂಬಲದಿಂದ ಪ್ರಧಾನ ಮಂತ್ರಿ ನರೇಂದ್ರಮೋದಿ ಮತ್ತು ಅಪ್ಪಾಜಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಮನವಿ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ನಮ್ಮಿಂದಲೇ ಹಣ ತೆಗೆದುಕೊಂಡು ನೀಡುವಂತಹ ತಾತ್ಕಾಲಿಕ ಯೋಜನೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಹತ್ತು ವರ್ಷಗಳಿಂದ ಗ್ರಾಮೀಣರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮತ್ತಷ್ಟು ಅನುಕೂಲವಾಗಲು ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಬೇಕು. ದೇಶದ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಈ ಚುನಾವಣೆ ಜನತೆಗೆ ಒಂದು ರೀತಿಯಲ್ಲಿ ಸ್ವಾಭಿಮಾನದ ಚುನಾವಣೆಯಾಗಿದ್ದು ದೇವೇಗೌಡ ಅಪ್ಪಾಜಿ, ಕುಮಾರಣ್ಣನವರಿಗೆ ಶಕ್ತಿ ನೀಡಿ ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ನನ್ನ ಪತಿ ಡಾ. ಮಂಜುನಾಥ್ ರವರ ಹೆಸರನ್ನು ಉಳಿಸುವ ಜವಾಬ್ದಾರಿ ಈ ಕ್ಷೇತ್ರದ ಮತದಾರರ ಮೇಲಿದೆ. ಈ ಕ್ಷೇತ್ರದ ಜನರ ಋಣ ನಮ್ಮ ಮೇಲಿದ್ದು, ನಿಮ್ಮ ಕಷ್ಟಕ್ಕೆ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.
ಹಿಂದೆ ಆಗಿರುವ ಕಹಿ ಘಟನೆಗಳನ್ನು ಮರೆತು ನನ್ನೆಲ್ಲಾ ತಾಯಂದಿರು, ಸಹೋದರ, ಸಹೋದರಿಯರು ಹಾಗೂ ಎರಡು ಪಕ್ಷದ ಕಾರ್ಯಕರ್ತರು ಒಗ್ಗಟಿನಿಂದ ಕೆಲಸ ಮಾಡಿ ಅತಿ ಹೆಚ್ಚು ಮತಗಳನ್ನು ಈ ಕ್ಷೇತ್ರದಲ್ಲಿ ನೀಡುವ ಮೂಲಕ ದೇಶಕ್ಕೆ ಒಂದು ಸ್ಪಷ್ಟ ಸಂದೇಶ ಕಳಿಸುವಂತೆ ಮನವಿ ಮಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಕಬ್ಬಾಳೇಗೌಡ, ಪಂಚಲಿಂಗೇಗೌಡ, ಗೇರಹಳ್ಳಿ ಸಣ್ಣಪ್ಪ, ಮಂಚೇಗೌಡ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶೋಭಾ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಗ್ರಾಪಂ ಸದಸ್ಯ ಕೃಷ್ಣೇಗೌಡ, ಸಣ್ಣಪ್ಪ, ಯುವ ಮೋರ್ಚಾ ಅಧ್ಯಕ್ಷ ಸುನೀಲ್, ಕುರುಬಳ್ಳಿ ವೆಂಕಟೇಶ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.