ರಾಮನಗರ: ಅಲೆಮಾರಿ ಬುಡಕಟ್ಟು ಸಮುದಾಯದ ಬುಡ್ಗಜಂಗಮ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ ಶಾಸಕನನ್ನಾಗಿ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಜನರು ಬೆಂಬಲಿಸಬೇಕು ಎಂದು ಕೋಲಾರ ಕ್ಷೇತ್ರದ ಶಾಸಕ ಕೊತ್ತನೂರು ಮಂಜು ಮನವಿ ಮಾಡಿದರು.
ಹಣಬಲ, ತೋಳ್ಬಲ ಹಾಗೂ ಜಾತಿಬಲದ ಜಟಾಪಟಿ ನಡುವೆ ನಿಷ್ಠಾವಂತ ಕಾರ್ಯಕರ್ತನಾದ ನನ್ನ ಮೇಲೆ ಭರವಸೆಯಿಟ್ಟು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚುನಾವಣೆಯಲ್ಲಿ ಟಿಕೆಟ್ ನೀಡಿದರು. ಅಧಿಕಾರ ಕಷ್ಟದ ಹಾದಿಯಲ್ಲಿದ್ದವನಿಗೆ ಬೆನ್ನುತಟ್ಟಿ ಮುಂದೆ ತಂದವರನ್ನು ನೆನೆಯಬೇಕಾಗಿದೆ. ಅಲೆಮಾರಿ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿರುವುದಾಗಿ ಹಾಗೂ ರಾಜ್ಯದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯ ನೆಲೆಸಿರುವ ಕಡೆಗೆ ಹೋಗಿ ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸುತ್ತಿರುವುದಾಗಿ ತಿಳಿಸಿದರು.
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರ ಕೆಲಸಗಳು ಮಾತಾಡುತ್ತಿವೆ. ಅವರನ್ನು ಚುನಾವಣೆಯಲ್ಲಿ ಕಟ್ಟಿಹಾಕಲು ಮೈತ್ರಿ ನಾಯಕರಿಂದ ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಯಾರು ಬಂದರೂ ನಾವು ಸಿದ್ಧರಿದ್ದೇವೆ ಎನ್ನುವ ಮೂಲಕ ಜನರ ಬಾಯಲ್ಲಿ ನಾವು ಮಾಡಿರುವ ಕೆಲಸಗಳು ಮಾತನಾಡಬೇಕೆಂಬ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿಕೆಗೆ ತಿರುಗೇಟು ನೀಡಿದರು.ಈ ವೇಳೆ ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಪುರಸಭೆ ಸದಸ್ಯ ಸಿ.ಉಮೇಶ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ನರಸಿಂಹಯ್ಯ, ರಮೇಶ್ ಅಬ್ಬನಕುಪ್ಪೆ, ಸಿ.ಎಚ್.ಪುಟ್ಟಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯು.ನರಸಿಂಹಯ್ಯ, ಬಿಡದಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಮಹೇಶ್, ತಾಪಂ ಮಾಜಿ ಅಧ್ಯಕ್ಷರಾದ ಶೋಭಾ, ಆರ್.ಜಯಚಂದ್ರ, ಹಿರಿಯ ಮುಖಂಡರಾದ ಗೋವಿಂದಪ್ಪ ಹೆಜ್ಜಾಲ ರಂಗಸ್ವಾಮಿ, ಎಸ್ಆರ್ ಎಸ್ ರಾಜಣ್ಣ, ಶಿವಣ್ಣ ಇತರರಿದ್ದರು.
ರಾಮನಗರ ತಾಲೂಕು ಹೊಸದೊಡ್ಡಿ ಗ್ರಾಮದಲ್ಲಿ ಶಾಸಕ ಕೊತ್ತನೂರು ಮಂಜು ಮತ್ತು ಬಾಲಕೃಷ್ಣ ಅವರನ್ನು ಅಲೆಮಾರಿ ಸಮುದಾಯದ ಮುಖಂಡರು ಅಭಿನಂದಿಸಿದರು.