ಕುರುಗೋಡು: ನನ್ನ ಎದುರು ಎರಡು ಬಾರಿ ಸೋತಿರುವ ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ಹತಾಸೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ ತಿರುಗೇಟು ನೀಡಿದ್ದಾರೆ.
ಕಂಪ್ಲಿ ಮತ್ತು ಕುರುಗೋಡಿನಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಹಾಗೂ 100 ಹಾಸಿಗೆ ಆಸ್ಪತ್ರೆ ಕಟ್ಟಡಗಳು ನಾನು ಶಾಸಕನಾದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ನನ್ನ ಬಳಿ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು ಇವೆ. ಅವರ ಬಳಿ ಇದ್ದರೆ ಬಹಿರಂಗ ಪಡಿಸಲಿ ಎಂದರು.
ಮಾಜಿ ಶಾಸಕ ಸುರೇಶ್ ಬಾಬು ಪ್ರಸ್ತುತ ಹತ್ತಾರು ಕೋಟಿ ಸಂಪಾದಿಸಿದ್ದಾರೆ. ಆದರೆ ಯಾವ ಗದ್ದೆ ನಾಟಿ ಮಾಡಿ, ಜಮೀನಲ್ಲಿ ಮಣಸಿನಕಾಯಿ ಬೆಳೆದು ಹಣ ಗಳಿಸಿದ್ದಾರೆ ಎಂಬುದು ಜನರಿಗೆ ತಿಳಿಸಲಿ.ಕಾಲುವೆಗೆ ನೀರು ಒದಗಿಸುವ ವಿಚಾರದಲ್ಲಿ ನನ್ನ ಲೇವಡಿ ಮಾಡುವ ಅವರು ತಮ್ಮ ಅವಧಿಯಲ್ಲಿ ಸಿಂಧಗೇರಿ, ಕೊರ್ಲಗುಂದಿ ಸೇರಿದಂತೆ ಇತರ ಗ್ರಾಮದ ಜಮೀನಿಗೆ ನೀರು ಪೂರೈಕೆಯಾಗುತ್ತಿರಲಿಲ್ಲ ಎಂಬುವುದು ಮರೆತಿದ್ದಾರೆ.
ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಹಿರಿಯರಿದ್ದಾರೆ. ಅವರು ಮಾಡಿರುವ ಆರೋಪಗಳ ಕುರಿತು ನಾನು ಮಾತನಾಡುವುದಿಲ್ಲ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸ ನೋಡಿ ಬಿಜೆಪಿ ಬೆಂಬಲಿಸುವ ಶೇ.30ರಷ್ಟು ಜನರು ನನಗೆ ಮತ ನೀಡಲಿದ್ದಾರೆ. ಅವರ ಆರೋಪಗಳಿಗೆ 2028ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಉತ್ತರ ನೀಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.