ಕನ್ನಡಪ್ರಭ ವಾರ್ತೆ ಮೂಲ್ಕಿ
ಕೃಷಿಯಿಂದ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದ್ದು, ಯುವ ಸಮುದಾಯಕ್ಕೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಭಂಡಾರಮನೆ ಹೇಳಿದರು.ಸುರಗಿರಿ ದೇವಸ್ಥಾನ, ಸುರಗಿರಿ ಯುವಕ ಮಂಡಲ ಮತ್ತು ಸುರಗಿರಿ ಮಹಿಳಾ ಮಂಡಲದ ಸಹಯೋಗದಲ್ಲಿ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಸುರಗಿರಿ ಕೆಸರ್ದ ಗೊಬ್ಬು ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಂಬಳದ ಕೋಣಗಳೊಂದಿಗೆ, ಮಡಕೆ, ಸಾಂಬಾರಿನ ಮರಾಯಿ, ಸೇವಿಗೆ ಮಣೆ, ರಾಟೆ, ಕುರ್ಕಿಲ್, ಮಣೆ, ಅಕ್ಕಿ ಮುಡಿ, ಹಾರೆ ಪಿಕ್ಕಾಸು, ನೇಜಿ ಇರುವ ಬುಟ್ಟಿ, ರಾಟೆ, ಮಡಿಮಂಚ, ಕೊಡಂಟಿ, ಪಲಾಯಿ, ಭರಣಿ, ಹೀಗೆ ಅನೇಕ ಕೃಷಿಯ ಉಪಕರಣಗಳನ್ನು ಹಿಡಿದುಕೊಂಡು, ಮುಟ್ಟಾಲೆ ಹಾಕಿಕೊಂಡ ಅತ್ತೂರು ಕೆಮ್ರಾಲ್ ಕಿಲೆಂಜೂರಿನ ಮಹಿಳೆಯರು, ಯುವಕರು, ಮಕ್ಕಳು ಗದ್ದೆಗಿಳಿಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಸಾಧಕ ಕಟೀಲು ಕಿನ್ಲಚ್ಚಿಲ್ ಲತಾಪ್ರಸಾದ್ ಶೆಟ್ಟಿ ಅವರ ಕೋಣ ಕುಟ್ಟಿಯನ್ನು ಸನ್ಮಾನಿಸಲಾಯಿತು. ಕೆಸರುಗದ್ದೆ ಓಟ, ಪಿರಾಮಿಡ್ ರಚನೆ, ಹಗ್ಗ ಜಗ್ಗಾಟ ಹೀಗೆ ಹಲವು ಕ್ರೀಡೆಗಳು ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸುರಗಿರಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಅರ್ಚಕ ವಿಶ್ವೇಶ ಭಟ್, ಅತ್ತೂರುಬೈಲು ವೆಂಕಟರಾಜ ಉಡುಪ, ಹಿಂದೂ ಧಾರ್ಮಿಕ ದತ್ತಿ ಜಿಲ್ಲಾ ಸದಸ್ಯ ಸುಬ್ರಹ್ಮಣ್ಯಪ್ರಸಾದ್, ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಪೃಥ್ವಿರಾಜ್ ಆಚಾರ್ಯ, ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಗುತ್ತಿನಾರ್ ಸುಧಾಕರ ಶೆಟ್ಟಿ, ಮಲ್ಲಿಕಾ ಶೆಟ್ಟಿ ಬಳ್ಕುಂಜೆಗುತ್ತು, ಪುರುಷೋತ್ತಮ ಶೆಟ್ಟಿ, ಧನಂಜಯ ಶೆಟ್ಟಿಗಾರ್, ಜಗನ್ನಾಥ ಶೆಟ್ಟಿ ಮಮ್ಮೆಟ್ಟು, ಪ್ರಕಾಶ್ ಎನ್. ಶೆಟ್ಟಿ ಸುರಗಿರಿ, ಯುವಕ ಮಂಡಲ ಅಧ್ಯಕ್ಷ ಅಶ್ವಿನ್ ಆಳ್ವ, ಮಹಿಳಾ ಮತ್ತು ಯುವತಿ ಮಂಡಲ ಅಧ್ಯಕ್ಷೆ ಅಮಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಜಾನಪದ, ಕೃಷಿ ಸಂಬಂಧಿಸಿದ ರಸಪ್ರಶ್ನೆಗಳನ್ನು ಆವಾಗಾವಾಗ ಕೇಳಲಾಗುತ್ತಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಅಶ್ವಿನ್ ಆಳ್ವ ಸ್ವಾಗತಿಸಿದರು. ಅರ್ಪಿತಾ ಶೆಟ್ಟಿ, ಶ್ರೀಶ ಸರಾಫ್ ಐಕಳ ನಿರೂಪಿಸಿದರು.