ಕನ್ನಡಪ್ರಭ ವಾರ್ತೆ ಸುರಪುರ
ಹುಣಸಗಿ ಮತ್ತು ಸುರಪುರ ತಾಲೂಕಿನ ಗ್ರಾಮಗಳಿಂದ ನೂರಾರು ವಾಹನಗಳಲ್ಲಿ ಕಾರ್ಯಕರ್ತರ ಹಾಗೂ ಬೆಂಬಲಿಗರ ಜನಸಮೂಹ ಸುರಪುರ ನಗರಕ್ಕೆ ಆಗಮಿಸಿತ್ತು. ನಗರದಲ್ಲಿ ಎಲ್ಲಿ ನೋಡಿದರಲ್ಲಿ ಬಿಜೆಪಿ ಕಾರ್ಯಕರ್ತರೇ ಕಾಣಿಸುತ್ತಿದ್ದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರಸಭೆಗೆ ಮುಖಂಡರೊಂದಿಗೆ ಆಗಮಿಸಿದ ರಾಜೂಗೌಡ, ತೆರೆದ ವಾಹನದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ, ಕೊಪ್ಪಳ ಎಂಎನ್ಸಿ ಹೇಮಲತಾ ನಾಯ್ಕ್, ದಯಾನಂದ ಮ್ಯಾಕ್ಸ್, ರಾಜಾ ಹನುಮಪ್ಪ ನಾಯಕ ತಾತಾ, ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ ಸೇರಿದಂತೆ ಇತರರು ಕಾರ್ಯಕರ್ತರ ಜೊತೆಗೂಡಿದರು.ತೆರೆದ ವಾಹನದಲ್ಲಿ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿದ ಮುಖಂಡರು ಪ್ರಚಾರ ವೇಳೆ ಮಾತನಾಡಿದರು. ಬಿರು ಬಿಸಿಲಿಗೆ ಜಗ್ಗದ ಕಾರ್ಯಕರ್ತರು ತಮ್ಮ ನಾಯಕನಿಗಾಗಿ ನಿಂತಲ್ಲೇ ನಿಂತು ಭಾಷಣ ಆಲಿಸಿದರು.
ಬಿಜೆಪಿ ಅಭ್ಯರ್ಥಿ ರಾಜೂಗೌಡ ಮಾತನಾಡಿ, ಹಿರಿಯರು, ಶಾಸಕರು ನಮ್ಮನ್ನು ಅಗಲಿ ಸ್ವರ್ಗದಲ್ಲಿದ್ದಾರೆ. ಅವರೊಂದಿಗೆ ನಮ್ಮ ಹೋರಾಟವಿತ್ತೇ ಹೊರತು ಈಗಿನ ಅಭ್ಯರ್ಥಿಯೊಂದಿಗಲ್ಲ. ಈಗಿನ ಕಾಂಗ್ರೆಸ್ ಅಭ್ಯರ್ಥಿ ಸುರಪುರಕ್ಕೆ ಕೊಟ್ಟ ಅಭಿವೃದ್ಧಿ ಕೊಡುಗೆಗಳು ಏನು ಎಂಬುದನ್ನು ತೋರಿಸಲಿ. ಅವರೊಂದಿಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಪರ ಚಾಟಿ ಬೀಸಿದರು.
ಚುನಾವಣೆಯಲ್ಲಿ ಯಾವುದೋ ಒಂದು ಗಾಳಿಯಿಂದ ನಾನು ಸೋತಿರುವೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿಯಿಂದಾಗಿ ನನ್ನ ಗೆಲುವು ನಿಶ್ಚಿತವಾಗಿದೆ. ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯಸಭಾ ಸದಸ್ಯೆ ಹೇಮಲತಾ ನಾಯ್ಕ ಮಾತನಾಡಿ, ರಾಜೂಗೌಡರು ಅಪಾರ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.