ಉಕ ಅಭಿವೃದ್ಧಿಗೆ ಶರಣರು, ಮಹನೀಯರ ಕೊಡುಗೆ ಅನನ್ಯ

KannadaprabhaNewsNetwork | Published : Jul 28, 2024 2:03 AM

ಸಾರಾಂಶ

ಶತಮಾನದ ಹಿಂದೆ ಈ ಭಾಗದ ಶರಣರು ಮತ್ತು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಕೆ.ಎಲ್.ಇ ಸಂಸ್ಥೆಯ ಚೇರಮನ್, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶತಮಾನದ ಹಿಂದೆ ಈ ಭಾಗದ ಶರಣರು ಮತ್ತು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಕೆ.ಎಲ್.ಇ ಸಂಸ್ಥೆಯ ಚೇರಮನ್, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ (ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸಿನ್) ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 19ನೇ ಶತಮಾನದ ಪ್ರಾರಂಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದ್ದ ಮುಂಬೈ ಕರ್ನಾಟಕದ ಬಾಗಲಕೋಟೆಯಲ್ಲಿ ಬಿ.ವಿ.ವಿ ಸಂಘ, ವಿಜಯಪುರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಳಗಾವಿಯಲ್ಲಿ ಕೆ.ಎಲ್.ಇ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು. ಅಂದು ಈ ಭಾಗದ ಜನ ವೈದ್ಯರು, ನ್ಯಾಯವಾದಿಗಳಿಗಾಗಿ ಮಹಾರಾಷ್ಟ್ರದತ್ತ ಮುಖ ಮಾಡಬೇಕಾಗಿತ್ತು. ಮರಾಠಿ ಪ್ರಭಾವ ಹೆಚ್ಚಾಗಿದ್ದ ಈ ಭಾಗದಲ್ಲಿ ಆಗ ಹಾನಗಲ್ಲ ಶಿವಯೋಗಿಗಳು, ಶಿರಸಂಗಿ ಲಿಂಗರಾಜ ದೇಸಾಯಿ, ಪಂಡಿತರಾವ ಚಿಕ್ಕೋಡಿ, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲರು, ಬಂಗಾರಮ್ಮ ಸಜ್ಜನ, ಕಂಬಳಿ ಸಿದ್ದಪ್ಪ, ಅರಟಾಳು ರುದ್ರಗೌಡರಂಥ ಮೇಧಾವಿ ಮತ್ತು ದಾನಿಗಳ ಸಹಕಾರದಿಂದ ಈ ಭಾಗದಲ್ಲಿ ಎಲ್ಲ ಸಮುದಾಯಗಳಿಗೆ ಶಿಕ್ಷಣ ಸೌಲಭ್ಯ ನೀಡಲಾಯಿತು. ಇದರಿಂದ ಸಾಮಾಜಿಕವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಯಿತು. ಈ ಸಂಸ್ಥೆಗಳಲ್ಲಿ ಓದಿದ ವೈದ್ಯರು ಇಂದು ಅಂಗಾಂಗ ಕಸಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮೂಲಕ ರೋಗಿಗಳಿಗೆ ಮರುಜೀವ ನೀಡುತ್ತಿದ್ದಾರೆ. ಅಂದು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಇಂದು ಡಾ.ಎಂ.ಬಿ.ಪಾಟೀಲರು ಹೆಮ್ಮರವಾಗಿ ಬೆಳೆಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ವಜನರು ಸುಖವಾಗಿರಲಿ ಎಂಬುವುದು ಅಂದಿನ ಮಹನೀಯರ ಆಶಯವಾಗಿತ್ತು ಎಂದರು.ಹಳಕಟ್ಟಿಯವರು ಸಂಶೋಧನೆಯ ಮೂಲಕ 250 ಶರಣರು ಮತ್ತು ಅವರ ಸುಮಾರು 10 ಸಾವಿರ ವಚನಗಳನ್ನು ಬೆಳಕಿಗೆ ತಂದು ವಿಜಯಪುರಕ್ಕೆ ಗೋಳಗುಮ್ಮಟ ಮಾತ್ರವಲ್ಲ ವಚನಗುಮ್ಮಟ ಎಂಬ ಹೆಸರು ಬರುವಂತೆ ಮಾಡಿದರು. ಬಂಥನಾಳ ಶ್ರೀಗಳು ಶೈಕ್ಷಣಿಕವಾಗಿ ಒತ್ತು ನೀಡಿದರೇ ಬಂಗಾರಮ್ಮ ಸಜ್ಜನ ಬಿ.ಎಲ್.ಡಿ.ಇ ಸಂಸ್ಥೆಗೆ ತಮ್ಮ 54ಎಕರೆ ಜಮೀನು ದಾನ ಮಾಡಿದರು. ಬಿ.ಎಂ.ಪಾಟೀಲ ಅವರು ಎಂಜಿನಿಯರಿಂಗ್, ಮೆಡಿಕಲ್ ಮತ್ತು ಬಿಇಡಿ ಕಾಲೇಜು ಪ್ರಾರಂಭಿಸಿ ನಮ್ಮ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಿಗಲು ಕಾರಣರಾದರು ಎಂದು ಸ್ಮರಿಸಿದರು.ಯಡಿಯೂರು-ಗದಗ-ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಶತಮಾನದ ಹಿಂದೆ ಶಿಕ್ಷಣ ಮರಿಚಿಕೆಯಾಗಿದ್ದ ಈ ಭಾಗದಲ್ಲಿ ಬಡತನ ಮತ್ತು ದಾರಿದ್ರ್ಯ ಹೆಚ್ಚಾಗಿತ್ತು. ಆಗ ಬಿ.ವಿ.ವಿಎಸ್, ಬಿ.ಎಲ್.ಡಿ.ಇ ಮತ್ತು ಕೆ.ಎಲ್.ಇ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಅಂದಿನ ಶರಣರು ಶೈಕ್ಷಣಿಕ ಕ್ರಾಂತಿ ಮಾಡಿದರು. ನಿಂದನೆಗೆ ಹೆದರದೆ, ಟೀಕೆಗಳಿಗೆ ಕುಗ್ಗದೆ ತನು, ಮನ, ಧನದಿಂದ ಈ ಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಬೇರೂರಲು ಮತ್ತು ಈ ಮೂಲಕ ಸಾಮಾಜಿಕ, ಆರ್ಥಿಕವಾಗಿ ಇಲ್ಲಿನ ಜನ ಸ್ವಾವಲಂಬಿಯಾಗಲು ಅಮೂಲ್ಯ ಕೊಡುಗೆ ನೀಡಿದರು ಎಂದು ನುಡಿದರು.ಅಂದಿನಿಂದ ಇಂದಿನವರೆಗೂ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ಸಮಾಜದ ಸರ್ವಜನರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಹಳಕಟ್ಟಿ, ಬಂಥನಾಳ ಶ್ರೀಗಳು, ಬಂಗಾರಮ್ಮ ಸಜ್ಜನ, ಬಿ.ಎಂ.ಪಾಟೀಲ ಅವರು ಅಂದು ಈ ಕೆಲಸ ಮಾಡಿರದಿದ್ದರೇ ಇಂದು ಈ ಭಾಗ ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿರುತ್ತಿತ್ತು. ಹೀಗಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಮಹನೀಯರನ್ನು ಸ್ಮರಿಸದಿದ್ದರೇ ಸಮಾಜದ ಸ್ವಾಸ್ಥ್ಯ ಸುಧಾರಿಸುವುದು ಕಷ್ಟಸಾಧ್ಯ ಎಂದರು.ಟ್ರಾಮಾ ಸೆಂಟರ್ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ ಎಂಜಿನಿಯರ್‌ಗಳಾದ ಜಿ.ಎಂ.ದುದ್ದಗಿ, ಯು.ಎನ್.ಕರಡಿ, ರಾಜು ಪಡಗಾನೂರ, ಶಾಸ್ತ್ರಿ, ರವಿ ಹೊಸಕೋಟೆ, ರಂಗರಾಜು ಅವರನ್ನು ಗಣ್ಯರು ಸನ್ಮಾನಿಸಿ, ಗೌರವಿಸಿದರು. ಇದೇ ವೇಳೆ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿದ ನಾಲ್ವರು ಜನ ಮಹನೀಯರ ಕುರಿತ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಮಹನಿಯರ ಸ್ಮರಣೆ ಸಮಾರಂಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಸಮಕುಲಪತಿ ಡಾ.ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಟ್ರಾಮಾ ಸೆಂಟರ್ ಆಡಳಿತಾಧಿಕಾರಿ ಡಾ.ಶರಣಪ್ಪ ಕಟ್ಟಿ, ಡಾ.ರಾಜೇಶ ಹೊನ್ನುಟಗಿ, ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮೆಹರವಾಡೆ, ಡಾ.ಆರ್.ಎಸ್.ಮುಧೋಳ ವಂದಿಸಿದರು.

ಪ್ರಭಾಕರ ಕೋರೆ ಮತ್ತು ಎಂ.ಬಿ.ಪಾಟೀಲ ಅವರ ಶ್ರಮದಿಂದ ಕೆ.ಎಲ್.ಇ ಮತ್ತು ಬಿ.ಎಲ್.ಡಿ.ಇ ಸಂಸ್ಥೆಗಳು ಏಷ್ಯಾ ಖಂಡದಲ್ಲೇ ಖ್ಯಾತಿ ಗಳಿಸಲು ಕಾರಣರಾಗಿದ್ದಾರೆ. ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಬಿ.ಎಲ್.ಡಿ.ಇ ಸಂಸ್ಥೆಯ 4 ಆಧಾರ ಸ್ಥಂಭಗಳಾಗಿದ್ದಾರೆ.

-ತೋಂಟದ ಸಿದ್ಧರಾಮ ಮಹಾಸ್ವಾಮಿಗಳು,

ಯಡಿಯೂರು-ಗದಗ-ಡಂಬಳ ತೋಂಟದಾರ್ಯ ಮಠ.

--

ಸಚಿವರಾಗಿ ಈ ಭಾಗದಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಈ ಮೂಲಕ ಈ ಭಾಗದ ಸರ್.ಎಂ.ವಿಶ್ವೇಶ್ವರಯ್ಯ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭಿಸುವ ಮೂಲಕ ಎಲ್ಲ ಅತ್ಯಾಧುನಿಕ ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸಿ ಉತ್ತರ ಕರ್ನಾಟಕದಲ್ಲಿಯೇ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. ಕೆ.ಎಲ್.ಇ ವೈದ್ಯರನ್ನು ಇಲ್ಲಿಗೆ ತರಬೇತಿಗೆ ಕಳುಹಿಸುತ್ತೇನೆ. ಬಿ.ಎಲ್.ಡಿ.ಇ ಸಂಸ್ಥೆಯಿಂದ ಬೆಂಗಳೂರಿನಲ್ಲಿಯೂ ಒಂದು ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವುದನ್ನು ನೋಡುವ ಆಸೆ ನನ್ನದಾಗಿದೆ.

-ಪ್ರಭಾಕರ ಕೋರೆ, ಕೆ.ಎಲ್.ಇ ಸಂಸ್ಥೆಯ ಚೇರಮನ್.

---

ಶತಮಾನದ ಹಿಂದೆ ಮೈಸೂರು ಭಾಗದಲ್ಲಿ ಅಲ್ಲಿನ ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಮಾತ್ರ ಸೂಕ್ತ ಶೈಕ್ಷಣಿಕ ಸೌಲಭ್ಯಗಳಿಲ್ಲದ ಕಾರಣ ಈ ಭಾಗದ ಜನ ಆರ್ಥಿಕವಾಗಿಯೂ ಹಿಂದುಳಿಯುವಂತಾಗಿತ್ತು. ಇಂತಹ ಸಮಯದಲ್ಲಿ ಫ.ಗು.ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಅವರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಸಿದ್ದೇಶ್ವರ ಸಂಸ್ಥೆ, ಸಿದ್ಧೇಶ್ವರ ಬ್ಯಾಂಕ್, ಬರ ನಿರ್ವಹಣಾ ಸಂಸ್ಥೆ, ಭೂತನಾಳ ಕೆರೆ ನಿರ್ಮಾಣವಾದವು.

-ಎಂ.ಬಿ.ಪಾಟೀಲ,

ಸಚಿವ.

Share this article