ಹುಬ್ಬಳ್ಳಿ:
ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರನ ಮೃತದೇಹವು ಇಲ್ಲಿಯ ಲೋಹಿಯಾ ನಗರದಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಮದ್ಯದ ಅಮಲಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ಹೊರಬರಬೇಕಿದೆ.ಆಕಾಶ ಮಠಪತಿ (30) ಯುವಕನ ಮೃತ ದೇಹವು ಇಲ್ಲಿನ ಲೋಹಿಯಾನಗರದಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ಯಾರೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಕಿಮ್ಸ್ಗೆ ರವಾನಿಸಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಡಿಸಿಪಿ ಕುಶಲ್ ಚೌಕ್ಸೆ, ಪಿಐ ಸುರೇಶ ಯಳ್ಳೂರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.
ನನ್ನ ಮಗನನ್ನು ಮದ್ಯ ಕುಡಿಸಿ ಹತ್ಯೆ ಮಾಡಿರಬಹುದು ಎಂದು ಶಂಕಿಸಿರುವ ಆಕಾಶ ತಂದೆ ಶೇಖರಯ್ಯ ಮಠಪತಿ, ಶಂಕಿತ 6 ಜನರ ವಿರುದ್ಧ ದೂರು ನೀಡಿದ್ದಾರೆ. ದೂರು ಪಡೆದಿರುವ ಪೊಲೀಸರು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಮಧ್ಯಾಹ್ನ 2 ಗಂಟೆಯ ನಂತರ ನನ್ನ ಮಗನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಕತ್ತಲಲ್ಲಿ ಕರೆದುಕೊಂಡು ಹೋಗಿ ಅವನನ್ನು ಹತ್ಯೆ ಮಾಡಿದ್ದಾರೆ. ಅವನ ಹಣೆಗೆ ಕಚ್ಚು ಬಿದ್ದಿದೆ. ಸಂಶಯಾಸ್ಪದ ವ್ಯಕ್ತಿಗಳ ಕುರಿತು ಪೊಲೀಸರ ಮುಂದೆ ಹೆಸರು ಹೇಳಿದ್ದೇವೆ ಎಂದು ಮೃತನ ತಾಯಿ ಅನ್ನಪೂರ್ಣ ಮಠಪತಿ ಹೇಳಿದ್ದಾರೆ.ಈಗಾಗಲೇ ಮೃತ ಆಕಾಶನ ತಂದೆ ಶಂಕಿತ 6 ಜನರ ವಿರುದ್ಧ ದೂರು ನೀಡಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಮೃತನ ಹಣೆಯ ಮೇಲೆ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಕುರಿತು ಮತ್ತಷ್ಟು ತನಿಖೆ ಚುರುಕುಗೊಳಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ.