ಸುತ್ತೂರು ಮಠಕ್ಕೂ ಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧ: ಎಚ್ಡಿಕೆ

KannadaprabhaNewsNetwork |  
Published : Dec 17, 2025, 01:30 AM IST
 ಸ್ಮರಣ ಸಂಚಿಕೆ ಲೋಕಾರ್ಪಣೆ | Kannada Prabha

ಸಾರಾಂಶ

ಸುತ್ತೂರು ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ೧೯೬೨ರಿಂದಲೂ ಅವಿನಾಭಾವ ಸಂಬಂಧವಿದೆ. ಈಗಿರುವ ಪೂಜ್ಯರ ಜತೆಗೆ ಹಿಂದಿನ ಪೂಜ್ಯರ ದಿವ್ಯಾಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಅದಕ್ಕಾಗಿಯೇ ನಮ್ಮ ತಂದೆಯವರು ಸುತ್ತೂರು ಕ್ಷೇತ್ರವನ್ನು ಯಾವತ್ತೂ ಮರೆಬಾರದು ಎಂದು ನನಗೆ ನೂರಾರು ಬಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ

ಸುತ್ತೂರು ಮಠಕ್ಕೂ ದೇವೇಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದಿನ ಪೂಜ್ಯರ ಕೃಪೆಯೂ ನಮ್ಮ ಕುಟುಂಬದ ಮೇಲೆ ಅಪಾರವಾಗಿದೆ. ದೇವೇಗೌಡರ ಆರಂಭಿಕ ರಾಜಕೀಯ ಬೆಳವಣಿಗೆಯಲ್ಲಿ ಹಿರಿಯ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಮರಿಸಿದರು.

ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ನಡೆದ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, ಸುತ್ತೂರು ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ೧೯೬೨ರಿಂದಲೂ ಅವಿನಾಭಾವ ಸಂಬಂಧವಿದೆ. ಈಗಿರುವ ಪೂಜ್ಯರ ಜತೆಗೆ ಹಿಂದಿನ ಪೂಜ್ಯರ ದಿವ್ಯಾಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಅದಕ್ಕಾಗಿಯೇ ನಮ್ಮ ತಂದೆಯವರು ಸುತ್ತೂರು ಕ್ಷೇತ್ರವನ್ನು ಯಾವತ್ತೂ ಮರೆಬಾರದು ಎಂದು ನನಗೆ ನೂರಾರು ಬಾರಿ ಹೇಳಿದ್ದಾರೆ. ಈ ಮಾತನ್ನು ನನ್ನ ಹೃದಯದಿಂದ ಹೇಳುತ್ತಿದ್ದೇನೆ ಎಂದು ನುಡಿದರು.

ಸುತ್ತೂರು ಕ್ಷೇತ್ರವು ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡಮಕ್ಕಳಿಗೆ ಬೆಳಕಾಗಿದೆ. ಇವತ್ತು ಶ್ರೀಮಠವು ರಾಜ್ಯ, ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಅಗಾಧವಾಗಿ ಬೆಳೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾಗಿ ಸೇವೆ ಮಾಡುತ್ತಿದೆ. ಈಗಿರುವ ಪೂಜ್ಯರು ಮಠದ ಪರಂಪರೆಯನ್ನು ಮುಂದುವರೆಸುತ್ತಾ ನಾಡಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಕೆಲ ತಿಂಗಳ ಹಿಂದೆ ಸುತ್ತೂರು ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ನಾನು ಭಾಗಿಯಾಗಿದ್ದೆ. ಆ ಸಮಯದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಲ್ಲಿ ಮನವಿ ಮಾಡಿ ಈ ಬಾರಿ ಮಳವಳ್ಳಿಯಲ್ಲೇ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ನೆರೆವೇರಿಸಲು ಅನುಮತಿ ನೀಡಬೇಕು ಎಂದು ವಿನಂತಿಸಿದ್ದೆ. ಅದಕ್ಕೆ ಪೂಜ್ಯರು ಒಪ್ಪಿಗೆ ನೀಡಿದ್ದರು. ಆ ನಂತರ ಪೂಜ್ಯರು ಮತ್ತು ನಾನು ಸೇರಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ನಮ್ಮ ಆಹ್ವಾನವನ್ನು ಒಪ್ಪಿ ಇಂದು ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಆಭಾರಿ ಆಗಿದ್ದೇನೆ ಎಂದರು.

ಮಳವಳ್ಳಿ ಪ್ರಕೃತಿಯ ಮಡಿಲಲ್ಲಿ ಇರುವ ಪುಣ್ಯಭೂಮಿ. ಇಲ್ಲಿನ ಜನರು ಕಾವೇರಿ ತಾಯಿಯ ಮಡಿಲಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ಜಾಗದಲ್ಲಿ ಮೈಸೂರು ಮಹಾರಾಜರು ಹಾಗೂ ಶೇಷಾದ್ರಿ ಅಯ್ಯರ್ ಅವರ ದೂರದೃಷ್ಟಿ ಫಲವಾಗಿ ರಾಷ್ಟ್ರದಲ್ಲಿ ಮೊಟ್ಟಮೊದಲ ಜಲ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾಯಿತು. ಪೂಜ್ಯರ ಜಯಂತಿ ಮಹೋತ್ಸವದಲ್ಲಿ ರಾಷ್ಟ್ರಪತಿಗಳು ಭಾಗಿಯಾಗುವ ಮೂಲಕ ಮಳವಳ್ಳಿ ಪಟ್ಟಣವು ಇತಿಹಾಸದಲ್ಲಿ ಚಿರಸ್ಥಾಯಿ ಆಗಲಿದೆ ಎಂದರು.ಜನ್ಮದಿನದ ಶುಭ ಕೋರಿದ ರಾಷ್ಟ್ರಪತಿಗಳಿಗೆ ಧನ್ಯವಾದ ಹೇಳಿದ ಎಚ್‌ಡಿಕೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೇದಿಕೆ ಮೇಲೆ ಭಾಷಣ ಮಾಡುವಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ‘ನಿಮಗೆ ಭಗವಂತ ಒಳ್ಳೆಯದನ್ನು ಉಂಟು ಮಾಡಿ ಉತ್ತಮ ಆರೋಗ್ಯವನ್ನು ನೀಡಲಿ’ ಎಂದು ಹಾರೈಸಿದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವರು ರಾಷ್ಟ್ರಪತಿಗಳಿಗೆ ಧನ್ಯವಾದ ಅರ್ಪಿಸಿದರು. ಹಾಗೇ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಕೂಡ ಸಚಿವರಿಗೆ ಜನ್ಮದಿನ ಶುಭ ಕೋರಿದರು. ಸುತ್ತೂರು ಕ್ಷೇತ್ರದ ಪೀಠಾಧಿಪತಿ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರೂ ಸಹ ತಮ್ಮ ಭಾಷಣದಲ್ಲಿ ಸಚಿವರಿಗೆ ಹುಟ್ಟುಹಬ್ಬದ ಶುಭ ಕೋರಿ ಆಶೀರ್ವದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌