ಕಲಸಿಂದ ಪಿಎಸಿಸಿಎಸ್ ಅಧ್ಯಕ್ಷರಾಗಿ ಸ್ವಾಮಿ ಅವಿರೋಧ ಆಯ್ಕೆ

KannadaprabhaNewsNetwork | Published : Dec 27, 2024 12:48 AM

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕ ಬೆಲಸಿಂದ ಗ್ರಾಮದ ಬಿ.ಎನ್. ಸ್ವಾಮಿ ರವರು ಅವಿರೋಧವಾಗಿ ಆಯ್ಕೆಗೊಂಡರು. . ಇವರನ್ನು ಹೊರತುಪಡಿಸಿ ಬೇರ್‍ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ. ವಿಜಯೇಂದ್ರ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಕಸಬಾ ಹೋಬಳಿ ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕ ಬೆಲಸಿಂದ ಗ್ರಾಮದ ಬಿ.ಎನ್. ಸ್ವಾಮಿ ರವರು ಅವಿರೋಧವಾಗಿ ಆಯ್ಕೆಗೊಂಡರು.

ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಗುಳಸಿಂದ ಗ್ರಾಮದ ಜಿ.ಆರ್‌.ಉಮೇಶ್‌ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬೆಲಸಿಂದ ಗ್ರಾಮದ ಬಿ.ಎನ್. ಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಬೇರ್‍ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ. ವಿಜಯೇಂದ್ರ ಘೋಷಿಸಿದರು.

ನೂತನ ಅಧ್ಯಕ್ಷರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎನ್. ಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಕಲಸಿಂದ ಸೊಸೈಟಿ ಮೂಲಕ ಈ ಭಾಗದ ೮೦೦ ಮಂದಿಗೆ ೩ಕೋಟಿ ೨೬ ಲಕ್ಷ ರು.ಗಳ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಣೆ ಮಾಡಲಾಗಿದೆ. ಜಿಲ್ಲಾ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ ಜಿಲ್ಲೆಯ ೧ಲಕ್ಷ ೬೦ ಸಾವಿರ ಮಂದಿಗೆ ಸಾಲ ನೀಡುವ ಮೂಲಕ ರೈತರ ನೆರವಿಗೆ ಮುಂದಾಗಿದೆ. ಇದಕ್ಕೆ ಕಾರಣೀಕರ್ತರು ಮಾಜಿ ಪ್ರಧಾನಿ ದೇವೇಗೌಡರು. ಪೈಲಟ್ ಯೋಜನೆ ಮೂಲಕ ೨ ಕೋಟಿ ಪ್ರೋತ್ಸಾಹ ನಿಧಿ ನೀಡಿ ಬ್ಯಾಂಕ್‌ನ ಪುನಶ್ಚೇತನಕ್ಕೆ ಮುಂದಾದರು. ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ೨ ಬಾರಿ ರೈತರ ಸಾಲಮನ್ನಾ ಮಾಡಿದರು. ರಾಜ್ಯದ ೩೮೦೦ ಕೋಟಿ ಹಣವನ್ನು ಏಕಕಾಲಕ್ಕೆ ತುಂಬಿದ ಹಿನ್ನೆಲೆಯಲ್ಲಿ ೧೩ ಜಿಲ್ಲಾ ಬ್ಯಾಂಕ್‌ಗಳು ಲಾಭ ಗಳಿಸಲು ಕಾರಣವಾಯಿತು ಎಂದರು.ಜಿಲ್ಲಾ ಬ್ಯಾಂಕ್‌ನ ಅಧ್ಯಕ್ಷನಾಗಿ, ನಿರ್ದೇಶಕನಾಗಿ ತಾಲೂಕಿನಲ್ಲಿ ೩೮೫ ಕೋಟಿ ಸಾಲ ನೀಡಲಾಗಿದೆ, ಇದರಿಂದ ೫೦ ಸಾವಿರ ರೈತರ ಇದರ ಉಪಯೋಗ ಪಡೆದಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದ ಅವರು, ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಹೆಚ್ಚು ಲಾಭಗಳಿಸಲು ಹೆಚ್ಚು ಶ್ರಮಿಸುವಂತೆ ಸಲಹೆ ನೀಡಿದರು.

ನೂತನ ಅಧ್ಯಕ್ಷ ಬಿ.ಎನ್. ಸ್ವಾಮಿ ಮಾತನಾಡಿ, ಶಾಸಕರ ಸಹಕಾರದಿಂದ ಕೃಷಿ ಪತ್ತಿನ ಷೇರುದಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅವರ ಸಲಹೆ ಸಹಕಾರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರ ಒಮ್ಮತದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಈ ಭಾಗದ ಇನ್ನು ಹೆಚ್ಚಿನ ರೈತರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಸಾಲ ಕೊಡಲು ಶಾಸಕರ ಸಹಕಾರ ಕೋರುವುದಾಗಿ ಮತ್ತು ನನ್ನ ಆಯ್ಕೆಗೆ ಸಹಕಾರ ನೀಡಿದ ಸಂಘದ ಎಲ್ಲ ನಿರ್ದೇಶಕರು ಮತ್ತು ಈ ಭಾಗದ ಮುಖಂಡರು, ಸ್ನೇಹಿತರಿಗೆ ಅಭಾರಿಯಾಗಿದ್ದೇನೆ ಎಂದರು.

ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಜಯಲಕ್ಷ್ಮಿ, ನಿರ್ದೇಶಕರಾದ ಶಿವರಾಜ್, ಕೃಷ್ಣಮೂರ್ತಿ, ತಿಮ್ಮೇಗೌಡ, ಜಿ.ಆರ್‌.ಉಮೇಶ್, ಮೋಹನ್‌ ಕುಮಾರ್, ಜಿ.ಎಲ್.ನಾಗೇಶ್, ರತ್ನ, ಹರೀಶ್, ಮುನಿಸ್ವಾಮಿ, ನಾಗಯ್ಯ, ಮುಖಂಡರಾದ ದಿಂಡಗೂರು ಗೋವಿಂದರಾಜ್, ಅಣ್ಣೇಗೌಡರು, ಕೆರೆಚಿಕ್ಕೇನಹಳ್ಳಿ ಸ್ವಾಮಿ, ರಾಜು, ಸೇರಿ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಮಂಜೇಗೌಡ, ಗುಮಾಸ್ತ ರಂಗಸ್ವಾಮಿ, ಸ್ಥಳೀಯ ಮುಖಂಡರು, ಸ್ನೇಹಿತರು, ಪಕ್ಷದ ಕಾರ್ಯಕರ್ತರು ಇದ್ದರು.

===========================

26ಎಚ್ಎಸ್ಎನ್13 : ಚನ್ನರಾಯಪಟ್ಟಣ ತಾಲೂಕು, ಕಲಸಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿ.ಎನ್.ಸ್ವಾಮಿ ಅವರನ್ನು ಶಾಸಕ ಸಿ ಎನ್ ಬಾಲಕೃಷ್ಣ ಅಭಿನಂದಿಸಿದರು.

Share this article