ನಗರದ ಡಾ. ರಾಜಕುಮಾರ್ ರಂಗಮಂದಿರದಲ್ಲಿ ಕುಂಞ ಅವರ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನದ ವೇಳೆ ಒತ್ತಾಯ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯದ ವಿವಿಧ ಕಡೆ ರಂಗಾಯಣ ಇರುವಂತೆಯೇ ಜಾನಪದ ಕಲೆಗಳ ತವರೂರು ಎನಿಸಿದ ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಒತ್ತಾಯಿಸಿದರು.ನಗರದ ಡಾ. ರಾಜಕುಮಾರ್ ರಂಗಮಂದಿರದಲ್ಲಿ, ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗವಾಹಿನಿ, ರಾಜ್ಯ ರೈತ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಚೇತನ ಕಲಾವಾಹಿನಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೊಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿ ಆಧರಿತ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಸ್ವಾತಂತ್ರ್ಯದ ಓಟ ಅತ್ಯುತ್ತಮ ನಾಟಕವಾಗಿದ್ದು, ಅದನ್ನು ಚಾಮರಾಜನಗರದಲ್ಲೂ ಪ್ರದರ್ಶಿಸುವ ಮೂಲಕ ನಮ್ಮ ರಂಗಾಸಕ್ತರಿಗೂ ನಾಟಕ ತಲುಪಿಸಬೇಕೆಂಬ ಉದ್ದೇಶ ನಮ್ಮದಾಗಿತ್ತು. ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರಿಗೆ ಅಭಿನಂದನೆಗಳು ಎಂದರು.
ಮೂರೂವರೆ ಗಂಟೆ ಅವಧಿಯ ಸ್ವಾತಂತ್ರದ ಓಟ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಭಾರತ ಮತ್ತು ಪಾಕಿಸ್ತಾನ ವಿಭಜನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲಾಹೋರ್ನಿಂದ ಭಾರತಕ್ಕೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬರುವ ‘ಚಾಂದ್ ಆಲಿ’ ಎದುರಾಗುವ ಹಲವಾರು ತೊಡರುಗಳನ್ನು ಮೆಟ್ಟಿ ಮುತ್ತಾಪ್ಪಾಡಿ ಎಂಬ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವ ಕಥನ ನಾಟಕ ವಸ್ತು.