ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಈ ಸಂದರ್ಭದಲ್ಲಿ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ತುಳಸಿ ಮಾತನಾಡಿ, ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಮುಚ್ಚುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡದಿಬ್ಬೂರಿನ ಬಡ ರೈತ ಕಾರ್ಮಿಕರ ಮಕ್ಕಳ ಆಶ್ರಯ ತಾಣವಾಗಿರುವ ಈ ಸರ್ಕಾರಿ ಶಾಲೆಯನ್ನು ಮುಚ್ಚುತ್ತಿರುವುದು ನಾಚಿಕೆಯ ವಿಷಯ. ಸುಮಾರು 35 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಯಾವುದೇ ಕಾರಣಕ್ಕೂ ದಿಬ್ಬೂರು ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸಬಾರದೆಂದು ಆಗ್ರಹಿಸಿದರು,
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಬಿ.ವಿ. ಆನಂದ್ ಮಾತನಾಡಿ, ಎಐಡಿಎಸ್ಓ ಕಳೆದ 6 ತಿಂಗಳಿಂದ ಹಳ್ಳಿ ಜನರನ್ನು ಸಂಘಟಿಸಿ ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಏಪ್ರಿಲ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ರಾಜ್ಯದ ಖ್ಯಾತ ಸಾಹಿತಿಗಳು, ಶಿಕ್ಷಣ ತಜ್ಞರು ಭಾಗವಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇಷ್ಟಾದರೂ ದಿಬ್ಬೂರಿನ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಕಾಡದಿಬ್ಬೂರು ಸೇರಿದಂತೆ ಕತ್ರಿಗುಪ್ಪೆ, ಮರಳುಕುಂಟೆ ಮತ್ತು ನೆಲ್ಲಿಮರದಹಳ್ಳಿ ಶಾಲೆಗಳನ್ನು ವಿಲೀನಗೊಳಿಸುತ್ತಿರುವುದು ಖಂಡನೀಯ. ಜನರ ಆಶೋತ್ತರಗಳಿಗೆ ಬೆಲೆ ನೀಡದೆ ಈ ಯೋಜನೆ ಮುಂದುವರಿಸಿದರೆ ಪ್ರತಿರೋಧ ಚಳವಳಿ ಹಳ್ಳಿ ಹಳ್ಳಿಯಲ್ಲಿ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನಾಯಕ ಮುನಿರಾಜು ಮಾತನಾಡಿ, ಶಾಲೆಯಲ್ಲಿ 35 ಮಕ್ಕಳಿದ್ದಾರೆ. ಪೋಷಕರು ದಿನವಿಡೀ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 3 ರಿಂದ 5 ಕಿಲೋಮೀಟರ್ ದೂರವಿರುವ ಶಾಲೆಗೆ ಮಕ್ಕಳನ್ನು ಪ್ರತಿದಿನ ಕರೆದುಕೊಂಡು ಹೋಗಿ ಬಿಡುವುದು ಅಸಾಧ್ಯದ ಮಾತು. ಯಾವುದೇ ಕಾರಣಕ್ಕೂ ನಮ್ಮೂರ ಶಾಲೆಯನ್ನು ಮುಚ್ಚಬಾರದು. ಪೋಷಕರಿಗೂ ಸಹ ದೂರದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಇರುವ ಸುರಕ್ಷತೆ ಮತ್ತು ಸಾರಿಗೆ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಡದಿಬ್ಬೂರು ಗ್ರಾಮದ ಶಾಲೆಯನ್ನು ಉಳಿಸಲು ಒತ್ತಾಯಿಸಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಬಿಇಒಗೆ ಮನವಿ ಪತ್ರ ಸಲ್ಲಿಸಲಾಯಿತು.