ಕಾರವಾರ: ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಪ್ರಮೋದ ಹರಿಕಾಂತ, ನವೀನ ಸಾಗರ, ವಾಸುದೇವ ಗೌಡ ಹಾಗೂ ಸಾಯಿಕಿರಣ ಬಾಬ್ರೇಕರ ಅವರಿಗೆ ರವೀಂದ್ರನಾಥ ಟಾಗೋರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕೆಎಸ್ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್, ತಾವು ರಾಜಕಾರಣಿ ಅಲ್ಲ. ಸಮಾಜಸೇವಕ ಎಂದು ತಿಳಿಸಿ, ಶಿರೂರು ಗುಡ್ಡ ಕುಸಿತ ದುರಂತ, ಶೋಧ ಕಾರ್ಯಾಚರಣೆ ಬಗ್ಗೆ ವಿವರಿಸಿ, ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ದೇಹ ಪತ್ತೆಯಾಗುವ ತನಕ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಪತ್ರಕರ್ತರಿಗೆ ಸದಾ ಸಹಕಾರ ನೀಡುತ್ತೇನೆ ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ತಾವು ಉತ್ತರ ಕನ್ನಡ ಜಿಲ್ಲೆಗೆ ಬಂದ ಕೆಲವೇ ದಿನಗಳಲ್ಲಿ ಶಿರೂರು ಗುಡ್ಡ ಕುಸಿತ, ಕಾಳಿ ಸೇತುವೆ ಕುಸಿತದಂತಹ ಘಟನೆಗಳು ನಡೆದವು. ಪತ್ರಕರ್ತರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಟಿ.ಬಿ. ಹರಿಕಾಂತ ಸ್ವಾಗತಿಸಿ, ಶಿರೂರು ಗುಡ್ಡ ದುರಂತದಿಂದಾಗಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ವಿಳಂಬವಾಗಿ ಆಚರಿಸುವಂತಾಯಿತು ಎಂದರು.ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್, ದರ್ಶನ್ ನಾಯ್ಕ ಇದ್ದರು. ವಿನುತಾ ಅಂಬೇಕರ ಪ್ರಾರ್ಥನಾ ಗೀತೆ ಹಾಡಿದರು. ಗಣೇಶ ಹೆಗಡೆ ವಂದಿಸಿದರು. ಸುಭಾಸ ಹೆಗಡೆ ಧೂಪದಹೊಂಡ ಹಾಗೂ ಶೇಷಗಿರಿ ಮುಂಡಳ್ಳಿ ಸನ್ಮಾನಿತರ ಪರಿಚಯ ಮಾಡಿದರು. ಸುನೀಲ ಹಣಕೋಣ ಕಾರ್ಯಕ್ರಮ ನಿರ್ವಹಿಸಿದರು.
ಎಂಎಲ್ಸಿ ಅವಧಿ ನಂತರ ರಾಜಕೀಯದಿಂದ ದೂರ: ಉಳ್ವೇಕರನನಗೆ ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಇಲ್ಲ. ಮತ್ತೇನೋ ಆಗಬೇಕು ಎಂಬ ಆಸೆಯೂ ಇಲ್ಲ. ವಿಧಾನಪರಿಷತ್ ಸದಸ್ಯತ್ವದ ಅವಧಿ ಮುಗಿದ ತರುವಾಯ ರಾಜಕೀಯದಿಂದ ದೂರವಾಗುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಘೋಷಿಸಿದರು.ಕಾರವಾರದಲ್ಲಿ ಸುರಂಗ ಸಂಚಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ತೊಂದರೆಗೊಳಗಾದರು. ಬೈತಖೋಲ ರಸ್ತೆಯಲ್ಲಿ ಅಪಘಾತ ಉಂಟಾಯಿತು. ಇದಕ್ಕಾಗಿಯೇ ಸುರಂಗದಲ್ಲಿ ಸಂಚಾರ ಆರಂಭಿಸುವಂತೆ ಪ್ರತಿಭಟನೆ ನಡೆಸಬೇಕಾಯಿತು. ಹೊರತೂ ಇದರ ಹಿಂದೆ ಯಾವುದೆ ರಾಜಕೀಯ ಉದ್ದೇಶ ಇರಲಿಲ್ಲ. ಮುಂದೆ ಚುನಾವಣಾ ರಾಜಕೀಯಕ್ಕೆ ಬರುವುದೂ ಇಲ್ಲ ಎಂದರು.ಸುರಕ್ಷತೆ ಹಿನ್ನೆಲೆಯಲ್ಲಿ ಟನಲ್ ಬಂದ್ ಮಾಡಿದ ಮೇಲೆ ಉಳ್ವೇಕರ್ ಟನಲ್ ಆರಂಭಿಸುವಂತೆ ಪ್ರತಿಭಟನೆ ನಡೆಸಿದರು. ಉಳ್ವೇಕರ್ ಅವರನ್ನು ನೋಡಿ ಸುಮ್ಮನಿರಬೇಕಾಯಿತು ಎಂದು ಶಾಸಕ ಸೈಲ್ ಹೇಳಿದ್ದಕ್ಕೆ ಪ್ರತಿಯಾಗಿ ಉಳ್ವೇಕರ ಸಮಜಾಯಿಷಿ ನೀಡಿದರು.