ಅನಧಿಕೃತ ವೈದ್ಯರ, ಚಿಕಿತ್ಸಾಲಯ ವಿರುದ್ಧ ಕ್ರಮಕೈಗೊಳ್ಳಿ

KannadaprabhaNewsNetwork | Published : Mar 18, 2025 12:32 AM

ಸಾರಾಂಶ

ಸರ್ಕಾರವು ಅನಧಿಕೃತ ವೈದ್ಯರು ಮತ್ತು ಚಿಕಿತ್ಸಾಲಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ನಕಲಿ ವೈದ್ಯರು ಮತ್ತು ತರಬೇತಿ ಪಡೆಯದ ವೈದ್ಯಕೀಯ ವೃತ್ತಿಪರರು ಯಾವುದೇ ಅರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಾರಣ ಅವರ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದ್ದಾರೆ. ಸಮಸ್ಯೆ ಗಂಭೀರತೆ ಗಮನದಲ್ಲಿಟ್ಟುಕೊಂಡು, ಸರ್ಕಾರವು ಅನಧಿಕೃತ ವೈದ್ಯರು ಮತ್ತು ಚಿಕಿತ್ಸಾಲಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಚಿಕಿತ್ಸಾ ಪ್ರಕರಣಗಳ ಕುರಿತು ಸರ್ಕಾರದ ಗಮನ ಸೆಳೆದು ಮಾತನಾಡಿದ ಅವರು, ನಕಲಿ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಲು ಆಸ್ಪತ್ರೆಗಳ ನಿಯಮಿತ ಲೆಕ್ಕಪರಿಶೋಧನೆ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ಶತಮಾನಗಳಿಂದ ಜನ ಸಾಮಾನ್ಯರು ವೈದ್ಯರಿಗೆ ದೇವರ ಸ್ಥಾನಮಾನ ನೀಡಿದ್ದಾರೆ. ಆದರೆ ಇಂದು ವೈದ್ಯಕೀಯ ಕ್ಷೇತ್ರದಲ್ಲಿನ ಅತಿಯಾದ ವಾಣಿಜ್ಯೀಕರಣವು ಈ ವೃತ್ತಿಯ ಘನತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಮೊದಲು ವೈದ್ಯ ವೃತ್ತಿ ಸೇವೆಯಾಗಿತ್ತು. ಆದರೆ ಈಗ ಅದು ಲಾಭ- ಆಧಾರಿತ ಉದ್ಯಮವಾಗಿದೆ. ವೈದ್ಯಕೀಯ ಕಾಲೇಜುಗಳ ಹೆಚ್ಚಿನ ಶುಲ್ಕಗಳು, ಖಾಸಗಿ ಆಸ್ಪತ್ರೆಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣ ಅದನ್ನು ಮಾರುಕಟ್ಟೆ ಆಧಾರಿತ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ ಎಂದರು.

ವಿಮಾ ಮೊತ್ತದ ಲಾಭ ಪಡೆಯಲು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪಿತ್ತಕೋಶ ತೆಗೆಯುವಿಕೆ, ಆಂಜಿಯೋಪ್ಲ್ಯಾಸ್ಟಿ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಂತಹ ವಿಧಾನಗಳನ್ನು ಈಗ ಅನೇಕ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ, ವೈದ್ಯರ ಆದಾಯವು ಅವರು ಮಾಡುವ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಅವಲಂಬಿಸಿದೆ. ಜತೆಗೆ ಅವರಿಗೆ ಗುರಿಗಳನ್ನು ನೀಡಲಾಗುತ್ತದೆ. ಇದರಿಂದಾಗಿ ರೋಗಿಗಳು ಅನಗತ್ಯ ಶಸ್ತ್ರಚಿಕಿತ್ಸೆಗಳಿಗೆ ತಳ್ಳಲ್ಪಡುತ್ತಾರೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಸರ್ಕಾರ ಬಡವರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ ಈಗ ನಕಲಿ ಶಸ್ತ್ರಚಿಕಿತ್ಸೆಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ರೋಗಿಗಳ ಸುರಕ್ಷತೆ ಮತ್ತು ಸರ್ಕಾರಿ ಯೋಜನೆಗಳ ವಿಶ್ವಾಸಾರ್ಹತೆ ಮೇಲೆ ಪರಿಣಾಮ ಬೀರುತ್ತಿದೆ. ರೋಗಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮತ್ತು ವೈದ್ಯಕೀಯ ವೃತ್ತಿಯ ಘನತೆ ಕಾಪಾಡಿಕೊಳ್ಳಲು ಸರ್ಕಾರಿ ಆರೋಗ್ಯ ಯೋಜನೆಗಳಲ್ಲಿ ವಂಚನೆ ತಡೆಗಟ್ಟಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Share this article