ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಿ: ಮಂತರ್‌ ಗೌಡ ಸೂಚನೆ

KannadaprabhaNewsNetwork |  
Published : Jul 09, 2025, 12:18 AM IST
 ಶಾಸಕರ ಉಪಸ್ಥಿತಿಯಲ್ಲಿ ನಡೆದ ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯ ಸಂದರ್ಭ | Kannada Prabha

ಸಾರಾಂಶ

ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶಾಸಕ ಡಾ.ಮಂತರ್ ಗೌಡ ಭಾಗವಹಿಸಿದ್ದರು.

ಕುಶಾಲನಗರ ಪುರಸಭೆ ಸಾಮಾನ್ಯ ಸಭೆ । ವಿವಿಧ ಸಮಸ್ಯೆಗಳ ಚರ್ಚೆ

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪಟ್ಟಣದಲ್ಲಿನ ರಾಜ ಕಾಲುವೆಗಳ ಕುರಿತು ಸರ್ವೇ ಕಾರ್ಯ ಮಾಡಿಸಿ ಕೂಡಲೇ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸೂಚನೆ ನೀಡಿದರು.

ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಶಾಸಕರು ಮಾತನಾಡಿ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯ ಕಲಿಮುಲ್ಲಾ ಮಾತನಾಡಿ, ಸಾಯಿ ಬಡಾವಣೆಗೆ ಹೋಗುವ ರಸ್ತೆ ಬಳಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಖಾಸಗಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.ಪಟ್ಟಣದ ಒಳಚರಂಡಿ ಕಾಮಗಾರಿಯ ಲೋಪದೋಷ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯುಜಿಡಿ ಕಾಮಗಾರಿ ವಸ್ತುಸ್ಥಿತಿ ಏನು ಯಾವಾಗ ನೀವು ಪೂರ್ಣಗೊಳಿಸುತ್ತಿರಿ ಎಂದು ಶಾಸಕರು ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಈಗಾಗಲೇ ಬಹುತೇಕ ಕಾಮಗಾರಿ ಮುಗಿದಿದೆ, ಪ್ರತಿ ಮನೆಗಳಿಗೆ ಸಂಪರ್ಕ ಹಾಗೂ ‌ನಿರ್ವಹಣೆ ಮಾಡಬೇಕಾಗಿದೆ. ಇದಕ್ಕಾಗಿ ಮೂರು ತಿಂಗಳಿಗೆ 12 ಲಕ್ಷ ರು. ಹಣವನ್ನು ಪುರಸಭೆ ಒದಗಿಸಿಕೊಡಬೇಕು ಎಂದರು.

ಇನ್ನೂ ಕಾಮಗಾರಿಯೇ ಮುಗಿಯದೆ ನಿರ್ವಹಣೆ ಬಗ್ಗೆ ಚರ್ಚೆ ಅಗತ್ಯವಿಲ್ಲ. ಮೊದಲು ಒಳಚರಂಡಿ ಯೋಜನೆಗೆ ಚಾಲನೆ ನೀಡಿ, ಸದಸ್ಯರನ್ನು ದಾರಿ ತಪ್ಪಿಸುವ‌ ಕೆಲಸ ಮಾಡಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಸರ್ಕಾರದ ಹಣ ಪೋಲು: ಆರೋಪ

ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಯೋಜನೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಸರ್ಕಾರದ ಹಣ ಪೋಲು ಅಗಿದೆ. ಈಗ ಆಗಿರುವ‌‌ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಈ‌ ಹಿಂದೆಯೇ ನಿರ್ಣಯ ಕೂಡ ಮಾಡಲಾಗಿದೆ ಎಂದು ಹೇಳಿದರು.

ಯುಜಿಡಿ ಕಾಮಗಾರಿ ಮತ್ತು ಅಧಿಕಾರಿಗಳ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ಗುರಿ ಇಟ್ಟುಕೊಂಡು ಸರ್ಕಾರ ನೀಡಿರುವ ಯೋಜನೆಯ ದುರುಪಯೋಗ ಆಗಿರೋ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕೋಟ್ಯಂತರ ರುಪಾಯಿ ಅನುದಾನ ಅನಾವಶ್ಯಕ ದುರುಪಯೋಗ ಆಗಬಾರದು. ಮುಂದಿನ ಅಕ್ಟೋಬರ್ ಒಳಗೆ ತ್ಯಾಜ್ಯ ವಿಲೇವಾರಿ ಘಟಕ ಮತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ಎಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಕ್ತಾಯದ ವರದಿ ಸಲ್ಲಿಸುವಂತೆ ಶಾಸಕರು ಸೂಚನೆ ನೀಡಿದರು.

ಉದ್ಯಾನವನಗಳ ಅಭಿವೃದ್ಧಿ, ಕುಶಾಲನಗರ -ಕೊಪ್ಪ ಹಳೆಯ ಸೇತುವೆ ಹಾಗೂ ಹೊಸ ಸೇತುವೆ ದುರಸ್ತಿ ಪಡಿಸುವಂತೆ ಸದಸ್ಯರು ಶಾಸಕರಿಗೆ ಮನವಿ ಮಾಡಿದರು.ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಸೇತುವೆ ದುರಸ್ತಿ ಕ್ರಮ ಕೈಗೊಳ್ಳಬೇಕು. ಶಾಸಕರ 5 ಲಕ್ಷ ರು. ಅನುದಾನದಲ್ಲಿ ಹಳೆಯ ಸೇತುವೆಯ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು. ಕೊಪ್ಪ ಗೇಟ್‌ನಿಂದ ತಾವರೆಕೆರೆ ವರೆಗೆ ಪಾದಚಾರಿ ಮಾರ್ಗ ಸ್ಥಾಪನೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.ಪೌರಕಾರ್ಮಿಕರಿಗೆ ನಿವೇಶನಕ್ಕೆ ಮನವಿ:

ಸದಸ್ಯ ಜಯವರ್ಧನ್, ಶಿವಶಂಕರ್ ಮಾತನಾಡಿ, ಪೌರಕಾರ್ಮಿಕರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಪ್ರಥಮ ದರ್ಜೆ ಕಾಲೇಜು ಹಿಂಭಾಗ ಇರುವ ಎರಡು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ 12 ಮಂದಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶಿಸಿದರು.ಉಳಿದ ಒಂದು ಎಕರೆ ವಿಸ್ತೀರ್ಣದ ಪ್ರದೇಶವನ್ನು ಮುಳ್ಳುಸೋಗೆ ಗ್ರಾಮಕ್ಕೆ ಸ್ಮಶಾನ ಕಾಯ್ದಿರಿಸಬೇಕು ಎಂದು ಕಂದಾಯ ಅಧಿಕಾರಿ ಸಂತೋಷ್ ಅವರಿಗೆ ಸೂಚನೆ ನೀಡಿದರು.ಪ್ಲಾಸ್ಟಿಕ್‌ ಬಾಟಲ್‌ ನಿಷೇಧಕ್ಕೆ ಸಲಹೆ:

ಮೈಸೂರು ಕೊಡಗು ಗಡಿಭಾಗದ ಪ್ರವೇಶದ್ವಾರ ಬಳಿ ಡಿಜಿಟಲ್ ಶೈನ್ ಬೋರ್ಡ್ ಅಳವಡಿಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಒಂದು ಲೀಟರ್ ಬಾಟಲ್‌ಗಿಂತ ಕಡಿಮೆ‌ ಗಾತ್ರದ ಪ್ಲಾಸ್ಟಿಕ್ ಬಾಟಲ್ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂತರ್ ಗೌಡ ಸಲಹೆ ನೀಡಿದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕಂದಾಯ ಅಧಿಕಾರಿ ರಾಮು, ಆರೋಗ್ಯ ಅಧಿಕಾರಿ ಉದಯಕುಮಾರ್, ವಿವಿಧ ಇಲಾಖೆ‌ಗಳ ಅಧಿಕಾರಿಗಳು ಪುರಸಭೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

PREV