ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಾರ್ಮಿಕರು ಕಾನೂನು ಅರಿತು ಗೌರವಿಸುವ ಮೂಲಕ ಸರ್ಕಾರ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನ್ಯಾ.ಸುನೀತಾ ಹೇಳಿದರು.ಕುಂತೂರು ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕಾರ್ಮಿಕರು ಉತ್ತಮ ಜೀವನ ನಡೆಸಲು ಬೇಕಾಗುವ ಎಲ್ಲ ಸವಲತ್ತುಗಳನ್ನು ಮಾಲೀಕ ವರ್ಗ ನೀಡಬೇಕಾಗಿರುವುದು ಅತ್ಯವಶ್ಯಕ, ಹಾಗಾಗಿ ಕಾರ್ಮಿಕರ ಹಿತಾಸಕ್ತಿಗಾಗಿ ಹಲವು ಕಾರ್ಮಿಕ ಕಾಯ್ದೆಗಳು ಜಾರಿಯಲ್ಲಿವೆ ಅವುಗಳನ್ನು ಕಾರ್ಮಿಕರಿಗೆ ನಿರಂತರವಾಗಿ ತಲುಪಿಸುವಂತೆ ಮಾಡುವಲ್ಲಿ ಮಾಲೀಕರ ವರ್ಗ ಮತ್ತು ಕಾರ್ಮಿಕ ಇಲಾಖೆ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ರವಿ ಮಾತನಾಡಿ, ಕಾರ್ಮಿಕರು ದೇಶದ ಸಂಪತ್ತು. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಕಾರ್ಮಿಕರ ಸಂಘಟನೆಗಳು, ಇಲಾಖೆ ನಿರಂತವಾಗಿ ಕಾರ್ಮಿಕರ ಹಿತ ಕಾಯುವಲ್ಲಿ ಕಟಿಬದ್ಧರಾಗಬೇಕು ಎಂದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಮಹೇಶ್ ಮಾತನಾಡಿ, ಕಾರ್ಮಿಕರಲ್ಲಿ ಎರಡು ವರ್ಗಗಳಿದ್ದು ಅವುಗಳಲ್ಲಿ ಸಂಘಟಿತ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ಎಂದು ವಿಂಗಡಿಸಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ಯಾವುದೇ ರೀತಿಯ ಭದ್ರತೆ ಸೌಲಭ್ಯಗಳು ಅಷ್ಟಾಗಿ ಸಿಗುತ್ತಿಲ್ಲ, ಸಂಘಟಿತರಾಗಿ ಎಲ್ಲರೂ ತಮಗೆ ತಲುಬೇಕಾದ ಸವಲತ್ತು ಪಡೆದುಕೊಳ್ಳಬೇಕು, ಜೊತೆಗೆ ಕಾನೂನಿನ ಬಗ್ಗೆ ಹಾಗೂ ಸವಲತ್ತುಗಳ ಬಗ್ಗೆ ಸಹ ಅರಿವು ಹೊಂದಬೇಕು ಎಂದರು. ಈ ವೇಳೆ ಕಾರ್ಮಿಕ ನಿರೀಕ್ಷಕ ಬಿ.ಎಲ್ ಪ್ರಸಾದ್, ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್, ಕಾರ್ಖಾನೆಯ ಮ್ಯಾನೇಜರ್ ಮುತ್ತುಕುಮಾರ್, ಸಹಾಯಕ ಮ್ಯಾನೇಜರ್ ಸೋಮಶೇಖರ್, ವಕೀಲ ರೋಹಿತಾಶ್ವ ಇನ್ನಿತರರಿದ್ದರು.