ಯೋಜನೆಯ ಲಾಭ ಪಡೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಿ: ಎಂ.ಉಮೇಶ್

KannadaprabhaNewsNetwork | Published : May 9, 2025 12:39 AM
Follow Us

ಸಾರಾಂಶ

ತಾಲೂಕಿನ ಕತ್ತೆಬೆನ್ನೂರು ಗ್ರಾಪಂ ವ್ಯಾಪ್ತಿಯ ಕತ್ತೆಬೆನ್ನೂರಿನಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ದುಡಿಯೋಣ ಬಾ ಹಾಗೂ ಆರೋಗ್ಯ ತಪಾಸಣಾ ಅಭಿಯಾನಕ್ಕೆ ತಾಪಂ ಇಒ ಎಂ.ಉಮೇಶ್ ಚಾಲನೆ ನೀಡಿದರು.

ದುಡಿಯೋಣ ಬಾ ಅಭಿಯಾನಕ್ಕೆ ತಾಪಂ ಇಒ ಚಾಲನೆ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಕತ್ತೆಬೆನ್ನೂರು ಗ್ರಾಪಂ ವ್ಯಾಪ್ತಿಯ ಕತ್ತೆಬೆನ್ನೂರಿನಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ದುಡಿಯೋಣ ಬಾ ಹಾಗೂ ಆರೋಗ್ಯ ತಪಾಸಣಾ ಅಭಿಯಾನಕ್ಕೆ ತಾಪಂ ಇಒ ಎಂ.ಉಮೇಶ್ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ತಾಲೂಕಿನ 26 ಗ್ರಾಪಂಯಲ್ಲಿ ದುಡಿಯೋಣ ಬಾ ಅಭಿಯಾನ ಆಯೋಜಿಸಲಾಗಿದ್ದು, ಈ ಅಭಿಯಾನದ ಅವಧಿಯಲ್ಲಿ ಗ್ರಾಪಂಯ ಎಲ್ಲಾ ನರೇಗಾ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ರೋಜಗಾರ್ ದಿವಸ್ ಆಚರಣೆ ಮಾಡಿ ಕೂಲಿಕಾರರಿಂದ ಕೆಲಸಕ್ಕೆ ಬೇಡಿಕೆ ಪಡೆದು, ಎನ್‌ಎಂಆರ್‌ ಪತ್ರ ವಿತರಣೆ ಮಾಡಿ, ನಿರಂತರವಾಗಿ ಕೆಲಸ ಕೊಡಲಾಗುವುದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿರಂತರವಾಗಿ ಒಂದು ಕುಟುಂಬಕ್ಕೆ 100 ದಿನ ಕೆಲಸ ನೀಡಿ, ವಲಸೆ ತಡೆಗಟ್ಟಲಾಗುವುದು, ಕೂಲಿಯಿಂದ ಬಂದ ಹಣವನ್ನು ಕುಟುಂಬದ ನಿರ್ವಹಣೆಗೆ ಬಳಕೆ ಮಾಡಿಕೊಂಡು, ಯೋಜನೆಯ ಲಾಭವನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಕೂಲಿಕಾರರಿಗೆ ತಿಳಿಸಿದರು.

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನರೇಗಾ ಕೆಲಸಕ್ಕೆ ಬಂದು, ಮಹಿಳೆಯರ ಭಾಗವಹಿಸಿಕೆ ಪ್ರಮಾಣ ತಾಲೂಕಿನಲ್ಲಿ ಶೇ. 60ರಷ್ಟು ಆಗಲಿ, ಪ್ರಸ್ತುತ ಬೇಸಿಗೆ ಕಾಲ ಇರುವುದರಿಂದ ಕೆಲಸದ ಅಳತೆಯ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರು ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಇದೆ ಎಂದರು.

ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಡಿ.ವೀರಣ್ಣ ನಾಯ್ಕ ಮಾತನಾಡಿ, ಬೇಸಿಗೆಯ ಅವಧಿಯಲ್ಲಿ ಕೂಲಿಕಾರರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು, ನರೇಗಾ ಕಾಮಗಾರಿಯ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಒತ್ತಡದಲ್ಲಿ ಆಸ್ಪತ್ರೆಗಳಿಗೆ ಹೋಗಿ, ಆರೋಗ್ಯ ತಪಾಸಣೆಯನ್ನು ಮಾಡಿಸಿರುವುದಿಲ್ಲ. ಹಾಗಾಗಿ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ, ಬಿಪಿ, ಶುಗರ್, ನೆಗಡಿ, ಕೆಮ್ಮು, ಜ್ವರ ಮುಂತಾದ ರೋಗಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದು, ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.

ಆರೋಗ್ಯದ ಹಿತ ದೃಷ್ಟಿಯಿಂದ ನರೇಗಾ ಕೆಲಸಕ್ಕೆ ಬಂದು, ನಿಗದಿಪಡಿಸಿದ ಅಳತೆಯಂತೆ ಕೆಲಸ ಮಾಡಿ ಪ್ರತಿ ದಿನ ನಿಗದಿಪಡಿಸಿರುವ ₹370 ಕೂಲಿ ಮೊತ್ತವನ್ನುಪೂರ್ಣ ಪ್ರಮಾಣದಲ್ಲಿ ಪಡೆಯಬೇಕೆಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ತಿಪ್ಪಣ್ಣನವರ ಈರಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಎಸ್.ಹಾಲೇಶ್, ಎನ್.ಜೀವಪ್ಪ, ಎಚ್‌.ಮರಿಯಪ್ಪ, ಟಿ.ಯಲ್ಲಪ್ಪ, ಪಿಡಿಒ ಎಸ್.ಬಸಲಿಂಗಪ್ಪ, ರವಿಕುಮಾರ್, ಪ್ರಕಾಶ್ ನಾಯ್ಕ, ಆರೋಗ್ಯ ಇಲಾಖೆಯ ವೈದ್ಯ ಡಾ. ಕೆ. ಸಚಿನ್ ಕುಮಾರ್, ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಕಾಶ್, ಮಲ್ಲನಗೌಡ, ಪ್ರವೀಣ್ ಹಿರೇಮಠ್, ಪ್ರದೀಪ್ ಕುಮಾರ್ ಹಾಗೂ ಗ್ರಾಪಂ ಸಿಬ್ಬಂದಿ ಕಾಯಕ ಬಂಧುಗಳು, ಕೂಲಿಕಾರರಿದ್ದರು.