ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ಹೆಚ್ಚಿಸಲು ಕಾಳಜಿ ವಹಿಸಿ-ಶಾಸಕ ಮಾನೆ

KannadaprabhaNewsNetwork | Published : Jul 18, 2024 1:37 AM

ಸಾರಾಂಶ

ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ನೀಡಲು ಗಮನ ಹರಿಸಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ಹೆಚ್ಚಿಸಲು ಕಾಳಜಿ ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.

ಹಾನಗಲ್ಲ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ನೀಡಲು ಗಮನ ಹರಿಸಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ಹೆಚ್ಚಿಸಲು ಕಾಳಜಿ ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.ತಾಲೂಕಿನ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲೇಜಿನಲ್ಲಿ ಅಧಿಕ ಸಂಖ್ಯೆಯ ದಾಖಲಾತಿ ಇದೆ. ದಾಖಲಾತಿಗೆ ಅನುಗುಣವಾಗಿ ಹಂತ ಹಂತವಾಗಿ ಮೂಲಸೌಲಭ್ಯ ಕಲ್ಪಿಸುವ ಹೊಣೆಗಾರಿಕೆಯೂ ಇದೆ. ಶಿಸ್ತು, ಸಮಯಪಾಲನೆ ರೂಢಿಸಿಕೊಳ್ಳಬೇಕು. ತಿಳಿದಾಗ ಕಾಲೇಜಿಗೆ ಬಂದು, ಹೋಗುವ ಪರಿಪಾಠಕ್ಕೆ ಕೊನೆ ಹಾಡಿ. ಅಧಿಕ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಕಾಲೇಜಿಗೆ ಆಗಮಿಸುವುದರಿಂದ ಗುಣಮಟ್ಟದ ಶಿಕ್ಷಣ ನೀಡಿ, ಉಜ್ವಲ ಭವಿಷ್ಯ ರೂಪಿಸಲು ಒತ್ತು ನೀಡುವಂತೆ ಸಲಹೆ ಮಾಡಿದರು. ಕಾಲೇಜಿನಲ್ಲಿ ಅಧ್ಯಯನ ಗೈಯ್ದು ಹೋದ ಹಳೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಅಂಥವರನ್ನು ಸಂಪರ್ಕಿಸಿ, ಸಮುದಾಯದ ಸಹಭಾಗಿತ್ವದೊಂದಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಗಮನ ಹರಿಸಿ. ತಾವೂ ಸಹ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಲು ಪ್ರಯತ್ನಿಸುವುದಾಗಿ ಶಾಸಕ ಮಾನೆ ಭರವಸೆ ನೀಡಿ, ಪ್ರತಿ ತಿಂಗಳು ಕಡ್ಡಾಯವಾಗಿ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆ ನಡೆಸಿ, ಆಗು-ಹೋಗು, ಸಮಸ್ಯೆಗಳ ಬಗ್ಗೆ ಗಮನ ನೀಡುವಂತೆ ಸೂಚಿಸಿದರು. ಪ್ರಾಚಾರ್ಯ ಡಾ.ವಿ.ಎಂ. ಕುಮ್ಮೂರ, ಸಮಿತಿಯ ಸದಸ್ಯರಾದ ಎಲ್.ಕೆ. ಶೇಷಗಿರಿ, ಸದಾಶಿವ ಬೆಲ್ಲದ, ಮೆಹಬೂಬಅಲಿ ಬ್ಯಾಡಗಿ, ಗುತ್ತೆಪ್ಪ ಸೈದಣ್ಣನವರ, ಅಲ್ತಾಫ್ ಶಿರಹಟ್ಟಿ, ಉಡುಚಪ್ಪ ಕರಬಣ್ಣನವರ, ಇಸಾಕಸಾಬ ಮಕಾನದಾರ, ಎ.ಆರ್.ಶೇಖಜಿ, ಉಪನ್ಯಾಸಕರಾದ ರಾಜಕುಮಾರ ಬಾಳಿಗಿಡದ, ದಿಲೀಪ್ ಕಂಬಳಿ, ಡಾ.ಯಮುನಾ ಕೋಣೆಸರ, ಬಸವಣ್ಣ, ಅಯ್ಯಪ್ಪ, ರಾಘವೇಂದ್ರ ಹರಿಗೋಲ, ಸಂತೋಷ ಟಿ.ಡಿ. ಇದ್ದರು.

Share this article