೧.೫ ಲಕ್ಷ ರು.ವರೆಗೆ ನಗದುರಹಿತ ಚಿಕಿತ್ಸೆಗೆ ಕ್ರಮವಹಿಸಿ: ಡಾ.ಕುಮಾರ

KannadaprabhaNewsNetwork |  
Published : Sep 04, 2026, 01:45 AM IST
೩ಕೆಎಂಎನ್‌ಡಿ-೩ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪಘಾತ ಸಂತ್ರಸ್ತರಿಗೆ ಪಿಎಂ-ರಾಹತ್ (ಎನ್‌ಎಚ್‌ಎ) ಯೋಜನೆಯಡಿ ಚಿಕಿತ್ಸೆ ಹಾಗೂ ನೆರವು ದೊರೆಯುತ್ತಿರುವ ಕುರಿತು ಪರಿಶೀಲನೆ ಸಂಬಂಧ ಇಲಾಖೆಗಳ  ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ನಡೆಸಿದರು. | Kannada Prabha

ಸಾರಾಂಶ

ಅಪಘಾತದಲ್ಲಿ ಗಾಯಗೊಂಡವರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ದಾಖಲಾತಿ ಅಥವಾ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಗಾಯಾಳುವನ್ನು ಚಿಕಿತ್ಸೆಯಿಂದ ವಂಚಿಸಬಾರದು. ಅಗತ್ಯವಿದ್ದಲ್ಲಿ ದಾಖಲೆಗಳ ನಿರೀಕ್ಷೆಯಿಲ್ಲದೆ ತಕ್ಷಣ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತು ಚಿಕಿತ್ಸೆಯನ್ನು ಆರಂಭಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಪಿಎಂ-ರಾಹತ್ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ೧.೫ ಲಕ್ಷ ರು.ವರೆಗೆ ನಗದುರಹಿತ ತುರ್ತು ಚಿಕಿತ್ಸೆ ದೊರಕಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಆಸ್ಪತ್ರೆಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಅಪಘಾತ ಸಂತ್ರಸ್ತರಿಗೆ ಪಿಎಂ-ರಾಹತ್ (ಎನ್‌ಎಚ್‌ಎ) ಯೋಜನೆಯಡಿ ಚಿಕಿತ್ಸೆ ಹಾಗೂ ನೆರವು ದೊರೆಯುತ್ತಿರುವ ಕುರಿತು ಪರಿಶೀಲನೆ ಸಂಬಂಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಪಘಾತದಲ್ಲಿ ಗಾಯಗೊಂಡವರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ದಾಖಲಾತಿ ಅಥವಾ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಗಾಯಾಳುವನ್ನು ಚಿಕಿತ್ಸೆಯಿಂದ ವಂಚಿಸಬಾರದು. ಅಗತ್ಯವಿದ್ದಲ್ಲಿ ದಾಖಲೆಗಳ ನಿರೀಕ್ಷೆಯಿಲ್ಲದೆ ತಕ್ಷಣ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತು ಚಿಕಿತ್ಸೆಯನ್ನು ಆರಂಭಿಸಬೇಕು ಎಂದರು.

ಯೋಜನೆಯಡಿ ಅರ್ಹ ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ನಗದು ರಹಿತ ಚಿಕಿತ್ಸೆ ಹಾಗೂ ತುರ್ತು ನಿಗಾ ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅಪಘಾತದ ನಂತರದ ಅತ್ಯಂತ ನಿರ್ಣಾಯಕ ಅವಧಿಯಲ್ಲಿ ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ನೆರವು ದೊರೆಯುವಂತೆ ಆಸ್ಪತ್ರೆಗಳು ಸಿದ್ಧವಾಗಿರಬೇಕು. ಖಾಸಗಿ ಆಸ್ಪತ್ರೆಗಳು ಪಿಎಂ-ರಾಹತ್ ಯೋಜನೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯೋಜನೆಯಡಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ಅನಗತ್ಯ ವಿಳಂಬ, ಶುಲ್ಕದ ಬೇಡಿಕೆ ಅಥವಾ ಸಂತ್ರಸ್ತರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಯೋಜನೆಯಡಿ ನಿಗದಿಪಡಿಸಿರುವ ಚಿಕಿತ್ಸಾ ವಿಧಾನ, ದಾಖಲೆ ನಿರ್ವಹಣೆ ಹಾಗೂ ಆನ್‌ಲೈನ್‌ನಲ್ಲಿ ಅಗತ್ಯ ಮಾಹಿತಿಯ ನಮೂದನ್ನು ನಿಯಮಾನುಸಾರ ಕೈಗೊಳ್ಳಬೇಕು ಎಂದರು.

ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಪಿಎಂ-ರಾಹತ್ ಯೋಜನೆಯ ಮಾರ್ಗಸೂಚಿ ಮತ್ತು ನಗದುರಹಿತ ಚಿಕಿತ್ಸಾ ವ್ಯವಸ್ಥೆಯ ಕುರಿತು ಸೂಕ್ತ ಅರಿವು ಮೂಡಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಆರೋಗ್ಯ ಇಲಾಖೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದರು.

ರಸ್ತೆ ಅಪಘಾತ ಸಂತ್ರಸ್ತರ ಜೀವ ರಕ್ಷಣೆಯೇ ಮುಖ್ಯವಾಗಿದ್ದು, ಹಣ ಅಥವಾ ದಾಖಲೆಗಳ ಕೊರತೆಯಿಂದ ಚಿಕಿತ್ಸೆ ವಿಳಂಬವಾಗಬಾರದು. ಈ ಯೋಜನೆಯ ಸೌಲಭ್ಯ ಅರ್ಹರಿಗೆ ತ್ವರಿತವಾಗಿ ತಲುಪುವಂತೆ ಎಲ್ಲ ಸಂಬಂತ ಇಲಾಖೆಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್ ಹಾಗೂ ಖಾಸಗಿ ಆಸ್ಪತ್ರೆಯವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಮತಿಘಟ್ಟದಲ್ಲಿ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಜಾಗೃತಿ
ಕಿಂಗ್‌ಪಿನ್‌’ ಕನ್ನಾಳೆ ಆಪ್ತರ ಮನೆಗೆ ಸಿಐಡಿ ಲಗ್ಗೆ