ಹಿರೇಕೆರೂರು: ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.
ತಹಸೀಲ್ದಾರರು, ಇಒ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳು, ಪಿಡಿಒ ಸಭೆ ನಡೆಸಿ ಸಮಸ್ಯೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಲುವಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸುವ ಪರಿಸ್ಥಿತಿ ಬರಬಾರದು ಎಂದು ಸೂಚನೆ ನೀಡಿದರು.
ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಬಡ ರೋಗಿಗಳಿಗೆ ಹೆಚ್ಚಿನ ದರದ ಔಷಧೋಪಚಾರ ಅವಶ್ಯಕತೆ ಬಂದಲ್ಲಿ ಎಬಿಆರ್ಕೆ ಮೂಲಕ ಹಣ ಪಾವತಿ ಮಾಡಿ ಅಂಥವರಿಗೆ ಔಷಧ ಒದಗಿಸುವ ಕಾರ್ಯ ಮಾಡಬೇಕು. ಪ್ರಗತಿ ಪತ್ರಿಕೆಯಲ್ಲಿ ಎಬಿಆರ್ಕೆ ಹಣಕಾಸು ವ್ಯವಹರಿಸಿದ ಹಾಗೂ ಎಲ್ಲ ಆಸ್ಪತ್ರೆಗಳಲ್ಲಿನ ಔಷಧಗಳ ದಸ್ತಾನುಗಳ ಮಾಹಿತಿ ನೀಡಬೇಕು ಎಂದು ಟಿಎಚ್ಒ ಅವರಿಗೆ ಸೂಚನೆ ನೀಡಿದರು.ತಹಸೀಲ್ದಾರರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆ ನಡೆಸುವ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ತಂತ್ರಾಂಶದಲ್ಲಿ ಅಳವಡಿಸುವ ಕುರಿತು ಜಾಗೃತಿ ಮೂಡಿಸಬೇಕು. ನೂತನವಾಗಿ ಪ್ರಾರಂಭವಾಗುವ ಕೆಪಿಎಸ್ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಅಂದಾಜು ಪತ್ರಿಕೆ ತಯಾರಿಸುವಾಗ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಖುದ್ದು ಹಾಜರಿದ್ದು, ಬೇಕಾಗುವ ಸೌಲಭ್ಯಗಳ ಮಾಹಿತಿ ನೀಡಬೇಕು ಎಂದು ಬಿಇಒ ಅವರಿಗೆ ಸೂಚನೆ ನೀಡಿದರು.