ಕುಡಿವ ನೀರು, ಮೇವು ತೊಂದರೆ ಆಗದಂತೆ ಕ್ರಮವಹಿಸಿ

KannadaprabhaNewsNetwork | Published : Apr 9, 2025 12:30 AM

ಸಾರಾಂಶ

ಗುಂಡ್ಲುಪೇಟೆ ಕೃಷಿ ಕಚೇರಿಯಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ರೈತರಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೇಸಿಗೆ ಆರಂಭವಾಗಿದ್ದು, ಮಳೆಗಾಲ ಮುಗಿಯುವ ತನಕ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ತೊಂದರೆ ಆಗದಂತೆ ಕೆಲಸ ನಿರ್ವವಹಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಜಿಪಂ ಎಇಇ ಹಾಗೂ ಪಿಡಿಒಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿಪತ್ತು ನಿರ್ವಹಣ ಸಮಿತಿ ಸಭೆಯಲ್ಲಿ ಮಾತನಾಡಿ ನೀರಿನ ಸಮಸ್ಯೆಯಾದರೆ ತುರ್ತಾಗಿ ದುರಸ್ತಿಪಡಿಸಿ ನೀರು ಒದಗಿಸುವ ಕೆಲಸ ಆಗಬೇಕು. ನನಗೆ ದೂರು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನೀರಿನ ಪೈಪ್‌ ಒಡೆದಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ದುರಸ್ತಿ ಪಡಿಸಬೇಕು. ಸಬೂಬು ಹೇಳಬೇಡಿ, ಬೇಸಿಗೆ ಮುಗಿಯುವ ತನಕ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಮೇ ತನಕ ಮೇವಿನ ಕೊರತೆ ಇಲ್ಲ:

ಬೇಸಿಗೆ ಆರಂಭವಾಗಿದ್ದು ಮೇ ತಿಂಗಳತ ತನಕ ಮೇವಿನ ಕೊರತೆಯಿಲ್ಲ. ಮಳೆ ಏನಾದರೂ ಬೀಳದಿದ್ದರೆ ಮೇವು ಖರೀದಿಸಲು ಮುಂಜಾಗ್ರತೆ ಕ್ರಮಗಳನ್ನು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಮಾಡಬೇಕು ಎಂದರು. ತಾಲೂಕಿನ ಕುಡಿಯುವ ನೀರು, ಮೇವಿನ ಸಮಸ್ಯೆಗಳಿದ್ದರೆ ನನಗೆ ಹೇಳಿ ಪರಿಹಾರ ಕೊಡಿಸುವ ಪ್ರಯತ್ನ ಮಾಡೋಣ ಎಂದು ಅಧಿಕಾರಿಗಳಿಗೆ ಹೇಳಿದರು.

ಜಿಪಂ ಎಇಇ ಮಧುಸೂದನ್‌, ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಬಗ್ಗೆ ಹಾಗೂ ಜಾನುವಾರುಗಳಿಗೆ ಮೇವಿನ ಕುರಿತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಮೋಹನ್‌ ಕುಮಾರ್‌ ಶಾಸಕರ ಗಮನಕ್ಕೆ ತಂದರು. ಸಭೆಯಲ್ಲಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ತಾಪಂ ಇಒ ಷಣ್ಮುಗಂ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಚ್.ಅಲೀಂಪಾಶ,ಕೃಷಿ ಸಹಾಯಕ ನಿರ್ದೇಶಕ ಶಶಿಧರ್‌, ಪುರಸಭೆ ಸದಸ್ಯ ರಾಜಗೋಪಾಲ್ ಹಾಗೂ ತಾಲೂಕಿನ ಎಲ್ಲ ಗ್ರಾಪಂ ಪಿಡಿಗಳು, ರಾಜಸ್ವ ನಿರೀಕ್ಷಕರು ಇದ್ದರು.ಸಹಾಯ ಧನದಲ್ಲಿ ಬಿತ್ತನೆ ‌

ಬೀಜ ವಿತರಿಸಿದ ಶಾಸಕ

ರಾಜ್ಯ ಸಹಾಯ ಧನದಲ್ಲಿ ರೈತರಿಗೆ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಿತರಿಸಿದರು. ಪಟ್ಟಣದ ಕೃಷಿ ಸಹಾಯಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸಾಂಕೇತಿಕವಾಗಿ ರೈತರಿಗೆ ಬಿತ್ತನೆ ಬೀಜ ವಿತರಿಸಿ, ಬಿತ್ತನೆ ಬೀಜಕ್ಕೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಪಡೆದುಕೊಳ್ಳಿ ಎಂದರು. ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ದೇಪಾಪುರ ಸಿದ್ದಪ್ಪ, ಹಾಪ್‌ ಕಾಮ್ಸ್‌ ಅಧ್ಯಕ್ಷ ಎಂ.ನಾಗೇಶ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಪುರಸಭೆ ಅಧ್ಯಕ್ಷ ಮಧು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹಬೀಬ್‌, ಸಹಾಯಕ ನಿರ್ದೇಶಕ ಶಶಿಧರ್‌, ಕೃಷಿಕ ಸಮಾಜದ ನಿರ್ದೇಶರು ಹಾಗೂ ಫಲಾನುಭವಿ ರೈತರು ಇದ್ದರು.

Share this article