ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಮೂಡುಬಿದಿರೆ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಪವಿತ್ರ ಶಿಲುಬೆಯ ದೇವಾಲಯ ತಾಕೊಡೆ ಹಾಗೂ ಸ್ತ್ರೀ ಸಂಘಟನೆ ತಾಕೊಡೆ ಘಟಕ ಆಶ್ರಯದಲ್ಲಿ 5 ದಿನ ನಡೆದ ಸೀರೆ ಗೊಂಡೆ ಹಾಕುವ ಕೌಶಲ್ಯ ಉಚಿತ ತರಬೇತಿಯ ಸಮಾರೋಪ ಸಮಾರಂಭ ತಾಕೊಡೆ ಶಾಲಾ ಸಭಾಂಗಣದಲ್ಲಿ ನಡೆಯಿತು.ತರಬೇತಿ ಪಡೆದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ತರಬೇತಿ ನೀಡಿದ ಶುಭಲಕ್ಷ್ಮೀ ಮಾತಾನಾಡಿ, ತರಬೇತಿಯಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಕೊಡೆ ಚರ್ಚಿನ ಧರ್ಮಗುರು ರೋಹನ್ ಲೋಬೊ, ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ತರಬೇತಿಯಿಂದ ಮಹಿಳೆಯರಲ್ಲಿ ಸಕಾರಾತ್ಮಕ ಬದಲಾವಣೆ ಬಂದಿದೆ. ಇನ್ನೂ ಹೆಚ್ಚಿನ ತರಬೇತಿ ತಾಕೊಡೆಯಲ್ಲಿ ನಡೆದು ಹೆಚ್ಚಿನ ಮಹಿಳೆಯರಿಗೆ ಪ್ರಯೋಜನ ಸಿಗಲಿ ಎಂದು ಹಾರೈಸಿದರು.ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಮಾತಾನಾಡಿ, ಮಹಿಳೆಯರು ಸ್ವ-ಉದ್ಯೋಗ ಮಾಡಲು ಹೆಚ್ಚಿನ ಕೌಶಲ್ಯದ ಅಗತ್ಯವಿದ್ದು, ವಿಆರ್ಡಿಎಫ್ ಮಹಿಳೆಯರಿಗೆ ಬೇಕಾದ ತರಬೇತಿ ಹಾಗೂ ಬೆಂಬಲ ನೀಡಲು ಸದಾ ಸಿದ್ದವಿದೆ ಎಂದು ತಿಳಿಸಿದರು.ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ತರಬೇತಿ ನಂತರ ನಿಮ್ಮದೇ ಒಂದು ಬ್ರಾಂಡ್ ಹೆಸರಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಕರೆ ನೀಡಿದರು.ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಆಲ್ವಿನ್ ಪಿಂಟೋ, ಆಯೋಗ ಸಂಯೋಜಕ ಪಾವ್ಲ್ ಡಿಸೋಜ, ಬೆಥೆನಿ ಕಾನ್ವೆಂಟ್ ಸುಪೇರಿಯರ್ ಸಿಸ್ಟೆರ್ ರೀನಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಐವಿ ಕ್ರಾಸ್ತ ವೇದಿಕೆಯಲ್ಲಿದ್ದರು.ಸ್ತ್ರೀ ಸಂಘಟನೆಯ ಕಾರ್ಯದರ್ಶಿ ಶಾಂತಿ ಪಿಂಟೋ ಸ್ವಾಗತಿಸಿದರು. ಲೋನಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಲೀಜಾ ರೋಡ್ರಿಗಸ್ ವಂದಿಸಿದರು.