ಕನ್ನಡಪ್ರಭ ವಾರ್ತೆ ಮಡಿಕೇರಿ
ಕಳೆದ ಚುನಾವಣೆಯ ಸಂದರ್ಭವೇ ಬಿಜೆಪಿ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಬೆಂಬಲಿಸಿದಲ್ಲಿ ಉಂಟಾಗುವ ಸಂಕಷ್ಟಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿತ್ತು. ಪಕ್ಷ ತಿಳಿಸಿರುವಂತೆಯೇ ಇಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರನನ್ನು ಓಲೈಸುವ ಯತ್ನವಾಗಿ ವಕ್ಫ್ ಕಾಯ್ದೆಯ ಮೂಲಕ ಬಡ ವರ್ಗದ ಜನರ ಆಸ್ತಿಯನ್ನು ಕಬಳಿಸುವ ಪ್ರಯತ್ನಗಳನ್ನು ಮಾಡುವ ಮೂಲಕ ತಾಲಿಬಾನ್ ಆಡಳಿತಕ್ಕೆ ಮುಂದಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.ವಕ್ಫ್ ಕಾಯ್ದೆಯ ಮೂಲಕ ಬಡ ರೈತಾಪಿ ವರ್ಗ ಸೇರಿದಂತೆ ಮಠ ಮಾನ್ಯಗಳ ಭೂಮಿ ಕಸಿಯುವ ಪ್ರಯತ್ನಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಇದೀಗ ವಕ್ಫ್ ಮೂಲಕ ತಲತಲಾಂತರಗಳಿಂದ ರೈತರು ಅನುಭವಿಸಿಕೊಂಡು ಬಂದ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವ ಮೂಲಕ ಜಾಗ ಕಬಳಿಸುವ ಪ್ರಯತ್ನಕ್ಕೆ ಇಳಿದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಹೋರಾಟ ರೂಪಿಸಿದ್ದು, ಪ್ರತಿ ಹಿಂದುವೂ ಸಂಘಟಿತರಾಗಬೇಕೆಂದು ಕರೆ ನೀಡಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವಕ್ಫ್ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಬೇಕು ಇಲ್ಲವೆ ಕಿತ್ತು ಹಾಕಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಜಮೀನನ್ನು ವಕ್ಫ್ ಮೂಲಕ ಕಸಿದು ಮತ್ತೊಂದು ಪಾಕಿಸ್ತಾನ ಮಾಡುವ ಸಂದೇಶ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಸೇರಿದಂತೆ ಸರಣಿ ಹಗರಣಗಳು ಕೇಳಿ ಬರುತ್ತಿದೆ. ತಾನು ಪ್ರಾಮಾಣಿಕ ಎನ್ನುವ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸಿಲುಕುವ ಮೂಲಕ ನಿಜಾಂಶ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.ವಕ್ಫ್ ಕಾಯ್ದೆ ತೆಗೆಯುವವರೆಗೆ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದು ಹೇಳಿದರು.ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ವಿದ್ಯಾನಿಧಿ ಯೋಜನೆ ರದ್ದುಗೊಳಿಸುವ ಕಾರ್ಯವಾಗಿದೆ. ಪಂಚ ಗ್ಯಾರಂಟಿಗಳಿಗಾಗಿ ಇದೀಗ ಬಡವರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಪ್ರಯತ್ನ ನಡೆದಿದೆ. ಹೀಗೆ ರೈತರ, ಕಾರ್ಮಿಕರ, ಪರಿಶಿಷ್ಟರ ನೆಮ್ಮದಿ ಕೆಡಿಸುವ ಪ್ರಯತ್ನ ನಡೆಸಿರುವ ಭಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಕೆಲಸವಾಗಬೇಕೆಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಎಂಎಲ್ಸಿ ಸುಜಾ ಕುಶಾಲಪ್ಪ ಮತ್ತಿತರರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು.ಹಲವಾರು ದಶಕಗಳಿಂದ ಕೃಷಿ ಮಾಡಿಕೊಂಡು ಬಂದ ಬಡ ರೈತರ ಜಮೀನು, ಸಹಸ್ರಾರು ಮಂದಿಗೆ ಶಿಕ್ಷಣ, ಅನ್ನ ದಾಸೋಹ ಕಲ್ಪಿಸುವ ಮಠದ ಆಸ್ತಿಗಳನ್ನು ‘ವಕ್ಫ್ ಕಾಯ್ದೆ’ ಮೂಲಕ ಕಬಳಿಸುವ ಹುನ್ನಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲೂ ಇಂತಹ ಕೆಲವೊಂದು ಪ್ರಕರಣಗಳು ನಡೆದಿದೆ. ಕೊಡಗಿನ ಜನತೆ ಶಾಂತಿ ಪ್ರಿಯರಾದರು, ವಕ್ಫ್ ಮೂಲಕ ಅವರ ಶಾಂತಿಗೆ ಭಂಗ ತಂದಲ್ಲಿ ಜನತೆ ಸಹಿಸಲಾರರು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಜಂಟಿ ಸಮಿತಿ ರಚಿಸಿದ್ದು, ಅದು ಸೂಚಿಸುವ ಬದಲಾವಣೆಗಳಿಗೆ ರಾಜ್ಯ ಒಪ್ಪಿಗೆ ನೀಡಬೇಕು. ಮಡಿಕೇರಿಯ ರಾಜರ ಗದ್ದುಗೆ ಆಸ್ತಿಯ ಅತಿಕ್ರಮಣವನ್ನು ತೆರವುಗೊಳಿಸಬೇಕು. ಜಿಲ್ಲೆಯ ಸಿ ಮತ್ತು ಡಿ ಜಮೀನನ್ನು ಅರಣ್ಯ ಎಂದು ಘೋಷಣೆ ಮಾಡುವ ಪ್ರಯತ್ನವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಮೆರವಣಿಗೆಯ ಬಳಿಕ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಸಂಜೆಯವರೆಗೆ ಧರಣಿ ಮುಷ್ಕರ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಪ್ರಮುಖರಾದ ಸುವಿನ್ ಗಣಪತಿ, ಮಹೇಶ್ ಜೈನಿ, ಮನು ಮುತ್ತಪ್ಪ, ರೀನಾ ಪ್ರಕಾಶ್, ಅರುಣ್ ಶೆಟ್ಟಿ, ಆರ್.ಕೆ.ಚಂದ್ರು, ನಾಗೇಶ್ ಕುಂದಲ್ಪಾಡಿ, ಸತೀಶ್ ಜೋಯಪ್ಪ, ನೆಲ್ಲೀರ ಚಲನ್, ಕೆ.ಎಂ.ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.