ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನಿಂದ ಬಾಧಿತವಾಗುವ ತಾಲೂಕಿನ ತಮದಡ್ಡಿಯಲ್ಲಿ ಕೃಷ್ಣಾ ನದಿಯ ನೀರು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುವ ಮೂಲಕ ಗ್ರಾಮದ ಇಳಿಜಾರು ಪ್ರದೇಶವನ್ನು ಆವರಿಸಿದೆ. ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ರೈತರ ೫೦-೬೦ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.ಇದೆ ವೇಳೆ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ವಿಜಯಕುಮಾರ ಕಡಕೋಳ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ಹೆಸ್ಕಾಂ ತೇರದಾಳ ಶಾಖಾಧಿಕಾರಿ ಕಮ್ಮಾರ, ಠಾಣಾಧಿಕಾರಿ ಅಪ್ಪು ಐಗಳಿ, ಪಿಡಿಒ ಪ್ರಕಾಶ ಕನ್ನೋಳ್ಳಿ ಗ್ರಾಮದ ಮುಖಂಡರಾದ ಸುಕುಮಾರಗೌಡ ಪಾಟೀಲ, ಗಂಗಪ್ಪ ಶಿರಗಾರ ಸೇರಿದಂತೆ ಆರೋಗ್ಯ ಇಲಾಖೆ, ಪಶು ವೈದ್ಯಕೀಯ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.ಕೃಷ್ಣಾ ನದಿಯ ಪ್ರವಾಹದಿಂದ ಬಾಧಿತವಾಗುವ ತಾಲೂಕಿನ ಇನ್ನೊಂದು ಗ್ರಾಮ ಹಳಿಂಗಳ. ಅಲ್ಲಿನ ನದಿಪಾತ್ರದ ಇಳಿಜಾರು ಪ್ರದೇಶವಾಗಿರುವ ಗುಳ್ಳಿಮಳಿ ಜನವಸತಿ ಪ್ರದೇಶದಲ್ಲಿನ ಒಟ್ಟು ೪೦ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಅಲ್ಲದೇ, ನದಿಯ ನೀರು ಹೆಚ್ಚಾಗುತ್ತಿದ್ದಂತೆ ನೀರಿನ ಸರಬರಾಜಿಗೆ ಅಳವಡಿಸಿಕೊಂಡಿದ್ದ ಪಂಪ್ಸೆಟ್ಗಳನ್ನು ರೈತರು ತೆರವುಗೊಳಿಸುತ್ತಿದ್ದಾರೆ.
-----------------------------------------------ಬಾಕ್ಸ್.....
40 ಕುಟುಂಬಗಳ 175 ಜನರ ಸ್ಥಳಾಂತರಅಧಿಕಾರಿಗಳು ಅಲ್ಲಿನ ೪೦ ಕುಟುಂಬಗಳ ೧೭೫ ಸಂತ್ರಸ್ತರನ್ನು ಹಾಗೂ ೨೦೮ ಜಾನುವಾರುಗಳನ್ನು ಸ್ಥಳಾಂತರಿಸಿದ್ದು, ಅವುಗಳ ಪೈಕಿ ೧೫ ಕುಟುಂಬಗಳ ೭೨ ಸಂತ್ರಸ್ತರು ಗ್ರಾಮದ ಮಹಾವೀರ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದವರು ಗ್ರಾಮದ ಸುರಕ್ಷಿತ ಸ್ಥಳದ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಜಾನುವಾರುಗಳಿಗೂ ಮೇವಿನ ಪೂರೈಕೆ ಮಾಡಲಾಗಿದೆ. ನದಿಯಲ್ಲಿ ಕೇವಲ ಒಂದು ಅಡಿಯಷ್ಟು ನೀರು ಹೆಚ್ಚಳವಾಗಿದ್ದು, ಸದ್ಯ ಯಾವುದೇ ತೊಂದರೆಯಿಲ್ಲ ಎಂದು ಹಳಿಂಗಳಿ ಗ್ರಾಮ ನೋಡಲ್ ಅಧಿಕಾರಿ ಚೇತನ ಅಬ್ಬಿಗೇರಿ ಮಾಹಿತಿ ನೀಡಿದ್ದಾರೆ.