ಮೇಕೆದಾಟು ವಿರುದ್ಧ ತಮಿಳುನಾಡು ನಿರ್ಣಯ

KannadaprabhaNewsNetwork |  
Published : Jun 20, 2026, 02:00 AM IST
ಅಡಕೆ | Kannada Prabha

ಸಾರಾಂಶ

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಕ್ರಮದ ವಿರುದ್ಧ ತಮಿಳುನಾಡು ವಿಧಾನಸಭೆ ಶುಕ್ರವಾರ ಪಕ್ಷಭೇದ ಮರೆತು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ ಹಾಗೂ ಯೋಜನೆಗೆ ಅನುಮತಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಪಿಟಿಐ ಚೆನ್ನೈ

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಕ್ರಮದ ವಿರುದ್ಧ ತಮಿಳುನಾಡು ವಿಧಾನಸಭೆ ಶುಕ್ರವಾರ ಪಕ್ಷಭೇದ ಮರೆತು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ ಹಾಗೂ ಯೋಜನೆಗೆ ಅನುಮತಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಇದಲ್ಲದೆ, ಮೇಕೆದಾಟು ವಿವಾದವನ್ನು ನಿಭಾಯಿಸಲು, ಈ ಹಿಂದೆ ಕಾವೇರಿ ನ್ಯಾಯಾಧಿಕರಣ ಇದ್ದಂತೆ ಪ್ರತ್ಯೇಕ ನ್ಯಾಯಮಂಡಳಿಯನ್ನು ರಚಿಸುವ ಕುರಿತು ವಿರೋಧ ಪಕ್ಷದ ನಾಯಕ ಡಿಎಂಕೆ ಉದಯನಿಧಿ ಸ್ಟಾಲಿನ್ ಅವರ ಸಲಹೆಯನ್ನು ಮುಖ್ಯಮಂತ್ರಿ ವಿಜಯ್‌ ಒಪ್ಪಿಕೊಂಡಿದ್ದು, ಅದನ್ನೂ ಗೊತ್ತುವಳಿಯಲ್ಲಿ ಸೇರಿಸಲಾಗಿದೆ. ಒಂದು ವೇಳೆ ನ್ಯಾಯಾಧಿಕಣ ರಚನೆ ಆದರೆ ಇದು ಕರ್ನಾಟಕದ ಪಾಲಿಗೆ ಸವಾಲಾಗಲಿದೆ.

ಬೆಳಗ್ಗೆ ಮುಖ್ಯಮಂತ್ರಿ ವಿಜಯ್‌ ಜೋಸೆಫ್ ಅವರು ಸರ್ಕಾರದ ನಿರ್ಣಯವನ್ನು ಮಂಡಿಸಿದರು ಮತ್ತು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಎಐಎಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ನಿರ್ಣಯವನ್ನು ಅನುಮೋದಿಸಿದರು.

ನಿರ್ಣಯದಲ್ಲೇನಿದೆ?:

2007ರ ಕಾವೇರಿ ಜಲ ನ್ಯಾಯಮಂಡಳಿಯ ಅಂತಿಮ ತೀರ್ಪು ಮತ್ತು 2018ರ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗೌರವಿಸದೆ, ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ನಡೆಸಿದ ಏಕಪಕ್ಷೀಯ ಪ್ರಯತ್ನ ಸರಿಯಲ್ಲ. ಇದಕ್ಕೆ ಸದನ ತನ್ನ ತೀವ್ರ ಆಕ್ಷೇಪಣೆಯನ್ನು ದಾಖಲಿಸುತ್ತದೆ’ ಎಂದು ನಿರ್ಣಯ ಹೇಳಿದೆ.

‘ಕರ್ನಾಟಕವು ಸಂಬಂಧಪಟ್ಟ ಜಲಾನಯನ ರಾಜ್ಯಗಳ ಒಪ್ಪಿಗೆಯನ್ನು ಪಡೆಯದೆ ಕಾರ್ಯನಿರ್ವಹಿಸಿದೆ ಮತ್ತು ಕೇಂದ್ರದಿಂದ ಯಾವುದೇ ಅನುಮೋದನೆಯನ್ನು ಪಡೆದಿಲ್ಲ. ಈ ಕ್ರಮವು ಸ್ವೀಕಾರಾರ್ಹವಲ್ಲ’ ಎಂದಿದೆ.‘ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ತಾಂತ್ರಿಕ ಮತ್ತು ಪರಿಸರ ಅನುಮತಿಗಳನ್ನು ಒಳಗೊಂಡಂತೆ ಯಾವುದೇ ರೀತಿಯ ಅನುಮೋದನೆಯನ್ನು ಕೇಂದ್ರ ಸರ್ಕಾರ ನೀಡಬಾರದು. ತನ್ನ ಅನುಮತಿ ಇಲ್ಲದೆ ಮೇಕೆದಾಟು ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಸ್ಥಳದಲ್ಲಿ ಅಣೆಕಟ್ಟು ಅಥವಾ ಯಾವುದೇ ಹೊಸ ನೀರು ಸಂಗ್ರಹ ಯೋಜನೆಯನ್ನು ಕೈಗೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸಲಹೆ ನೀಡಬೇಕು’ ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

‘ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಪರಿಶೀಲಿಸಬಾರದು ಮತ್ತು ಅನುಮೋದನೆ ನೀಡಬಾರದು’ ಎಂದು ಸದನವು ಕೇಂದ್ರ ಜಲ ಆಯೋಗವನ್ನೂ ಒತ್ತಾಯಿಸಿದೆ.‘ಕಾವೇರಿ ಜಲಾನಯನ ಪ್ರದೇಶವು ಕೊರತೆಯ ಜಲಾನಯನ ಪ್ರದೇಶವಾಗಿದ್ದು, ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಒಟ್ಟು ನೀರನ್ನು ಈಗಾಗಲೇ ಜಲಾನಯನ ರಾಜ್ಯಗಳ ನಡುವೆ ಹಂಚಲಾಗಿದೆ ಎಂದು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಹೇಳಿವೆ. ಆದ್ದರಿಂದ, ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೊಳ್ಳಲು ಅವಕಾಶವಿಲ್ಲ ಅಥವಾ ಯಾವುದೇ ಹೆಚ್ಚುವರಿ ಪ್ರಮಾಣದ ನೀರನ್ನು ಬಳಸುವಂತಿಲ್ಲ’ ಎಂದು ಅದು ಹೇಳಿದೆ.

‘ತಮಿಳುನಾಡಿನ ರೈತರ ಹಿತಾಸಕ್ತಿ ಕಾಪಾಡಲು ತಮಿಳುನಾಡು ಸರ್ಕಾರ ಕೈಗೊಂಡ ಎಲ್ಲಾ ಕ್ರಮಗಳಿಗೆ ಈ ಆಗಸ್ಟ್ ಸದನವು ಸರ್ವಾನುಮತದಿಂದ ಬೆಂಬಲ ವ್ಯಕ್ತಪಡಿಸುತ್ತದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಗೊತ್ತುವಳಿಗೆ ಕೊನೆಯಲ್ಲಿ ತಿದ್ದುಪಡಿ:

ಇದಲ್ಲದೆ, ಮೇಕೆದಾಟು ವಿವಾದವನ್ನು ನಿಭಾಯಿಸಲು ಪ್ರತ್ಯೇಕ ನ್ಯಾಯಮಂಡಳಿ ರಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಡಿಎಂಕೆ ಉದಯನಿಧಿ ಸ್ಟಾಲಿನ್ ಅವರ ಸಲಹೆ ನೀಡಿದರು. ಇದನ್ನು ಸಿಎಂ ವಿಜಯ್‌ ಒಪ್ಪಿದರು. ಕೊನೆಗೆ 4ನೇ ಪ್ಯಾರಾ ಆದ ಬಳಿಕ ಇದನ್ನು ಸೇರಿಸಲಾಯಿತು.

ಈ ಬಗ್ಗೆ ಮಾತನಾಡಿದ ವಿಜಯ್‌, ನ್ಯಾಯಮಂಡಳಿಯನ್ನು ಸ್ಥಾಪಿಸುವ ಬಗ್ಗೆ ಒತ್ತಾಯಿಸಲು ತಜ್ಞರೊಂದಿಗೆ ನಿರಂತರ ಸಮಾಲೋಚನೆ ನಡೆಯುತ್ತಿದೆ, ನೀರಿನ ವಿಚಾರದಲ್ಲಿ ರಾಜಕೀಯ ಮರೆತು ಹೋರಾಡೋಣ. ರಾಜಕೀಯವು ಜನರಿಗೆ ಸೇವೆ ಸಲ್ಲಿಸಬೇಕು, ಮತ್ತು ನೀರಿನ ಹಕ್ಕು ಪ್ರಮುಖ ಜೀವನೋಪಾಯದ ವಿಷಯವಾಗಿದೆ’ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಯ ಯಶಸ್ವಿ ಬದುಕಿಗೆ ಪಠ್ಯೇತರ ಚಟುವಟಿಕೆಗಳು ಪೂರಕ
ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ನಗರಸಭೆ ದಿಟ್ಟಕ್ರಮ