14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ದೂಡುವುದು ಶಿಕ್ಷಾರ್ಹ ಅಪರಾಧ: ನ್ಯಾಯಾಧೀಶ ಬಿ.ಸಿ. ಅರವಿಂದ್

KannadaprabhaNewsNetwork | Published : May 26, 2024 1:34 AM

ಸಾರಾಂಶ

ನಮ್ಮ ನ್ಯಾಯಾಲಯದಲ್ಲಿ 1,800 ಚೆಕ್ ಬೌನ್ಸ್ ಪ್ರಕರಣಗಳಿದ್ದು, ಆ ಪೈಕಿ ಅರ್ಧದಷ್ಟು ಸರ್ಕಾರಿ ನೌಕರರ ಪ್ರಕರಣಗಳೇ ಇದ್ದು ಸರ್ಕಾರಿ ನೌಕರರಿಗೆ ಸಾರ್ವಜನಿಕರು ಸಾಲ ನೀಡುವಾಗ ಅವರ ಸಂಬಳದ ಮೂರು ಪಟ್ಟಿನಷ್ಟು ನೀಡಿದರೆ ವಸೂಲಿಗೆ ತೊಂದರೆಯಾಗಲಿದ್ದು ಇಂತಹ ವಿಚಾರ ಬಂದಾಗ ಕಾನೂನಿನ ನೆರವು ಪಡೆಯಬೇಕು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ದೂಡುವುದು ಬಾಲ ಕಾರ್ಮಿಕ ಪದ್ಧತಿ ಅನ್ವಯ ಶಿಕ್ಷಾರ್ಹ ಅಪರಾಧ ಎಂದು ಪಟ್ಟಣದ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಸಿ. ಅರವಿಂದ್ ಹೇಳಿದರು.

ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕಾರ್ಮಿಕರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಮಿಕ ದಿನಾಚರಣೆ ಮತ್ತು ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರಗಳ ಪಾತ್ರ ಹಾಗೂ ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ನ್ಯಾಯಾಲಯದಲ್ಲಿ 1,800 ಚೆಕ್ ಬೌನ್ಸ್ ಪ್ರಕರಣಗಳಿದ್ದು, ಆ ಪೈಕಿ ಅರ್ಧದಷ್ಟು ಸರ್ಕಾರಿ ನೌಕರರ ಪ್ರಕರಣಗಳೇ ಇದ್ದು ಸರ್ಕಾರಿ ನೌಕರರಿಗೆ ಸಾರ್ವಜನಿಕರು ಸಾಲ ನೀಡುವಾಗ ಅವರ ಸಂಬಳದ ಮೂರು ಪಟ್ಟಿನಷ್ಟು ನೀಡಿದರೆ ವಸೂಲಿಗೆ ತೊಂದರೆಯಾಗಲಿದ್ದು ಇಂತಹ ವಿಚಾರ ಬಂದಾಗ ಕಾನೂನಿನ ನೆರವು ಪಡೆಯಬೇಕು ಎಂದರು.

ಸರ್ಕಾರಿ ನೌಕರರ ಸಂಬಳಕ್ಕಿಂತ ಮೂರು ಪಟ್ಟು ಹೆಚ್ಚು ಸಾಲ ನೀಡಿದರೆ ಅದನ್ನು ವಸೂಲಿ ಮಾಡಲು ತೊಂದರೆಯಾಗಲಿದ್ದು ಇದನ್ನು ಅರಿಯದೆ ಸಾಲ ಕೊಡುವವರು ಸಂಕಷ್ಟಕ್ಕೆ ಸಿಲುಕುವುದು ಖಚಿತವಾಗಿದ್ದು ಇಂತಹ ಪ್ರಕರಣದಲ್ಲಿ ಹಣ ಕೊಟ್ಟವರು ವಸೂಲಿ ಮಾಡಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಕಾರ್ಮಿಕ ನಿರೀಕ್ಷಕ ಕೆ. ಗೋವಿಂದರಾಜು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ. ಅಶೋಕ್, ಸಿಡಿಪಿಒ ಅಣ್ಣಯ್ಯ, ವಕೀಲರಾದ ಕೆ.ಪಿ. ಮಂಜುನಾಥ್, ಎ. ತಿಮ್ಮಪ್ಪ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಎಚ್.ಪಿ. ಮಲ್ಲಿಕಾರ್ಜುನ, ಕಾರ್ಮಿಕ ಇಲಾಖೆಯ ಸಿಬ್ಬಂದಿ ಚಂದ್ರಕಾಂತ್ ಇದ್ದರು.

Share this article