ನೆಲಮಂಗಲ/ದಾಬಸ್‍ಪೇಟೆ : ನೆಲಮಂಗಲದ ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ''''''''ಅಕ್ಷರಾಭ್ಯಾಸ'''''''' ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ನರ್ಸರಿ ಹಾಗೂ ಎಲ್‌ಕೆಜಿ ತರಗತಿಗಳಿಗೆ ದಾಖಲಾದ ಮಕ್ಕಳು ತಮ್ಮ ಪೋಷಕರೊಂದಿಗೆ ಕುಳಿತು ವಿದ್ಯಾರ್ಜನೆಗೆ ಶುಭಾರಂಭ ಮಾಡಿದರು.

ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಅಕ್ಷರಾಭ್ಯಾಸಕ್ಕೆಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವ ಮೂಲಕ ಪ್ರತಿ ಮಕ್ಕಳಿಗೆ ವಿದ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ದೇವರ ಸಮಾನ. ಎಳೆಯ ವಯಸ್ಸಿನಲ್ಲಿಯೇ ಅವರಿಗೆ ನೀಡುವ ಅಕ್ಷರ ಜ್ಞಾನ ಭವಿಷ್ಯದ ಸುಂದರ ಬದುಕಿಗೆ ಭದ್ರ ಬುನಾದಿಯಾಗುತ್ತದೆ. ಕೇವಲ ಅಕ್ಷರ ಕಲಿಸುವುದಷ್ಟೇ ಅಲ್ಲದೇ, ಪೋಷಕರು ಮತ್ತು ಶಿಕ್ಷಕರು ಒಗ್ಗೂಡಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ಹೊರಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಮುಖ್ಯಶಿಕ್ಷಕಿ ನಿರ್ಮಲ ಮಾತನಾಡಿ, ಅಕ್ಷರ ಬಲ್ಲವನಿಗೆ ಇಡೀ ಜಗತ್ತಿನ ಜ್ಞಾನಭಂಡಾರವೇ ತೆರೆದ ಪುಸ್ತಕದಂತೆ, ಈ ನಿಟ್ಟಿನಲ್ಲಿ ಪಾಲಕರೂ ಮಕ್ಕಳಿಗೆ ಅಕ್ಷರದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಲಾವಣ್ಯ, ಲಕ್ಕಮ್ಮ, ಲಘು ಭಾಮಾಕ್ಷಿ, ನಂದಿನಿ, ಸುಮ ಮತ್ತು ಶಕುಲ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಪೋಟೋ 3 :


ನೆಲಮಂಗಲದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.