ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜೆಜೆ ಕಾಲೋನಿಯಲ್ಲಿ ಜೋಡಿ ಕೊಲೆ । ಗಂಡನಿಂದಲೇ ಪತ್ನಿ, ನಾದಿನಿ ಹತ್ಯೆ
ಕನ್ನಡಪ್ರಭ ವಾರ್ತೆ ಚಿಂತಾಮಣಿನಗರದ ಜೆಜೆ ಕಾಲೋನಿಯಲ್ಲಿ ಜೋಡಿ ಕೊಲೆಯಾಗಿದ್ದು, ಕೊಲೆಯಾದವರನ್ನು ರೇಷ್ಮಾ ಮತ್ತು ಶಮಾ ಎಂದು ಗುರುತಿಸಲಾಗಿದ್ದು ಶಮಾ ಗಂಡ ಏಜಾಜ್ ಕೊಲೆ ಮಾಡಿದ ಆರೋಪಿ ತಿಳಿದು ಬಂದಿದೆ.
ನಗರದ ಜೆಜೆ ಕಾಲೋನಿಯಲ್ಲಿ ತಾಯಿ ಮನೆಯಲ್ಲಿ ವಾಸವಾಗಿರುವ ಶಮಾ ಮತ್ತು ರೇಷ್ಮೆ ಮೃತ ದುದೈವಿಗಳಾಗಿದ್ದು, ಗಂಡ ಏಜಾಜ್ ಮತ್ತು ಹೆಂಡತಿ ಶಮಾ ನಡುವೆ ಆಗಾಗ್ಗೆ ಕೌಟುಂಬಿಕ ಕಲಹಗಳು ನಡೆಯುತ್ತಿದ್ದು, ಹಲವು ಬಾರಿ ಹಿರಿಯ ಸಮ್ಮುಖದಲ್ಲಿ ಇತ್ಯರ್ಥ ಪಡಿಸಿತ್ತು. ಆದರೆ ಶಮಾಳ ತಾಯಿ ನಿಧನ ನಂತರ ಶಮಾ ಗಂಡ ಏಜಾಜ್ ಮನೆಗೆ ಹೋಗದೇ ಇಲ್ಲಿಯೇ ಉಳಿದುಕೊಂಡಿದ್ದು, ಆಗಾಗೆ ಏಜಾಜ್ ಬಂದು ಮನೆಗೆ ಬರುವಂತೆ ಹೇಳಿದರೂ ಒಪ್ಪದ ಶಮಾ ಗಂಡನ ಕಿರುಕುಳದಿಂದ ಇಲ್ಲಿಯೇ ಉಳಿದುಕೊಂಡಿದ್ದಳು.ಭಾನುವಾರ ರಾತ್ರಿ ಬೈಕ್ನಲ್ಲಿ ಕೋಲಾರದಿಂದ ಚಿಂತಾಮಣಿಯ ಜೆ ಜೆ ಕಾಲೋನಿಗೆ ಬಂದ ಏಜಾಜ್ ಮನೆಯಲ್ಲಿದ್ದ ಶಮಾಳನ್ನು ಒಪ್ಪಿಸಿ ಮನೆಗೆ ಕರೆದುಕೊಂಡು ಹೋಗಲು ಮುಂದಾದನು. ಆದರೆ ಇದಕ್ಕೆ ಶಮಾ ಒಪ್ಪದಿದ್ದಾಗ ಅಲ್ಲಿಯೇ ಉಳಿದುಕೊಂಡು ತನ್ನ ಪೂರ್ವ ಸಂಚಿನಂತೆ ಹೆಂಡತಿ ಶಮಾ ಮತ್ತು ನಾದಿನಿ ರೇಷ್ಮಳನ್ನು ಮಾರಾಕಾಸ್ತ್ರದಿಂದ ಕೊಲೆಗೈದು ತನ್ನ ಮಕ್ಕಳೊಂದಿಗೆ ಕೋಲಾರದ ರಹಮತ್ ನಗರ ಗಲ್ಪೇಟೆ ಕರೆದುಕೊಂಡು ಹೋದನು. ನಂತರ 8.45ರ ಸುಮಾರಿನಲ್ಲಿ ಗಲ್ಪೇಟೆ ಪೊಲೀಸರಿಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.
ಬೆಳಗ್ಗೆ 8.45ರ ಸುಮಾರಿನಲ್ಲಿ ಕೋಲಾರದ ಗಲ್ಪೇಟೆಯ ಪೊಲೀಸ್ ಠಾಣೆಗೆ ತೆರಳಿದ್ದು ಕೊಲೆ ಮಾಡಲು ಬಳಸಿದ ಮಾರಾಕಾಸ್ತ್ರವನ್ನು ನೀಡಿ ಶರಣಾದ ಏಜಾಜ್ನನ್ನು ಚಿಂತಾಮಣಿ ಪೊಲೀಸರ ವಶಕ್ಕೆ ನೀಡಲಾಗಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಸೆ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆಗೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣವೆಂದು ತಿಳಿದುಬಂದಿದ್ದು, ಹಲವು ಆಯಾಮಗಳ ತನಿಖೆ ನಂತರ ನಿಖರ ಮಾಹಿತಿ ತಿಳಿಯಬಹುದಾಗಿದೆ ಎಂದರು.
ಮದ್ಯಪಾನ, ಕಾನೂನು ಬಾಹಿರ ಚಟುವಟಿಕೆ, ಜೂಜಾಟ ಸೇರಿದಂತೆ ಗಾಂಜಾ ಇತ್ಯಾದಿಗಳ ಕುರಿತು ಕೇಸ್ಗಳನ್ನು ದಾಖಲಿಸಲಾಗಿದ್ದು, ಗಾಂಜಾ ಸಾಗಾಣಿಕೆ ಮಾಡುವವರು, ಮಾರಾಟ ಮಾಡುವವರ ಮೇಲೂ ಕೇಸ್ ದಾಖಲಿಸಲಾಗಿದೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಗಲಾಟೆ ದೊಂಬಿಗಳು ನಡೆಯುತ್ತಿದ್ದು, ಆ ಗಲಾಟೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂದರು.ಹೂವಿನ ಅಂಗಡಿ ಮುಂಭಾಗ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಗಲಾಟೆ, ಕಾಲೇಜಿನ ಹುಡುಗಿಗೆ ಚುಡಾಯಿಸಿದ ವಿಚಾರದಲ್ಲಿ ಮನೆಗೆ ನುಗ್ಗಿ ಗಲಾಟೆ ಮಾಡಿದ ವಿಚಾರಗಳು ಬೇರೆ ಬೇರೆಯಾಗಿದ್ದು, ಈ ಜೋಡಿ ಕೊಲೆಗೂ ಇನ್ನಿತರೆ ಗಲಾಟೆಗಳಿಗೂ ಯಾವುದೇ ತಾಳೆಯಿಲ್ಲ. ಇವರು 8 ವರ್ಷದ ಹಿಂದೆ ಮದುವೆಯಾಗಿದ್ದು ನಿರಂತರವಾಗಿ ಗಂಡ ಕಿರುಕುಳದಿಂದ ಬೆಸತ್ತು ಗಂಡನ ಮನೆ ತೊರೆದು ಮಕ್ಕಳೊಂದಿಗೆ ಚಿಂತಾಮಣಿ ನಗರದ ತಾಯಿಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಎಸ್ಪಿ ಜಗನ್ನಾಥ್ ರೈ, ನಗರ ಠಾಣೆ ಇನ್ಸ್ಪೆಕ್ಟರ್ ವಿಜಿಕುಮಾರ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.