ತರೀಕೆರೆ: ಅಮೃತ್‌ 2.0 ಯೋಜನೆಯಡಿ ಕೆರೆಗಳ ಅಭಿವೃದ್ಧಿ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ತರೀಕೆರೆ, ಅಮೃತ್‌ 2.0 ಯೋಜನೆಯ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ರಾಜ್ಯಮಟ್ಟದ ಉನ್ನತ ಅಧಿಕಾರ ಸಮಿತಿ ಸಭೆಯಲ್ಲಿ ತಯಾರಿಸಿರುವ ಕ್ರಿಯಾ ಯೋಜನೆಯಂತೆ ಪುರಸಭೆ ವ್ಯಾಪ್ತಿಯ ಚಿಕ್ಕಕೆರೆ, ದೊಡ್ಡಕೆರೆ ಹಾಗೂ ದಳವಾಯಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

- ಚಿಕ್ಕಕೆರೆ, ದೊಡ್ಡಕೆರೆ, ದಳವಾಯಿ ಕೆರೆಗಳ ಅಭಿವೃದ್ಧಿ, ವಿಶೇಷ ಸಭೆಯಲ್ಲಿ ತೀರ್ಮಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಅಮೃತ್‌ 2.0 ಯೋಜನೆಯ ಜಲಮೂಲಗಳ ಪುನಶ್ಚೇತನ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ರಾಜ್ಯಮಟ್ಟದ ಉನ್ನತ ಅಧಿಕಾರ ಸಮಿತಿ ಸಭೆಯಲ್ಲಿ ತಯಾರಿಸಿರುವ ಕ್ರಿಯಾ ಯೋಜನೆಯಂತೆ ಪುರಸಭೆ ವ್ಯಾಪ್ತಿಯ ಚಿಕ್ಕಕೆರೆ, ದೊಡ್ಡಕೆರೆ ಹಾಗೂ ದಳವಾಯಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಉದ್ಯಾನವನಗಳ ಅಭಿವೃದ್ಧಿ ಪಡಿಸಲು ಪಾರ್ಕ್‌ಗಳ ಆಯ್ಕೆ ಕುರಿತಂತೆ ಪರಿಶೀಲಿಸಲು ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸೋಮವಾರ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆ ಮತ್ತು ಆಯವ್ಯಯ ಪೂರ್ವಬಾವಿ ಸಭೆ ಪ್ರಾರಂಭದಲ್ಲಿ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪುರಸಭಾ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಜಲ ಮೂಲಗಳ ಪುನಶ್ಚೇತನ ಹಾಗೂ ಹಸಿರು ಜಾಗ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು ಸಭೆಯಲ್ಲಿ ಠರಾವು ಮಾಡಿ ಮಾಹಿತಿ ಸಲ್ಲಿಸಲು ಕೋರಿರುವ ವಿಷಯ ಪ್ರಸ್ತಾಪಿಸಿ ಪಟ್ಟಣದಲ್ಲಿ ₹4 ಕೋಟಿ ಗಳಲ್ಲಿ ದಳವಾಯಿ ಕೆರೆ, ಚಿಕ್ಕೆರೆ ಮತ್ತು ದೊಡ್ಡಕೆರೆ ಈ ಮೂರು ಕೆರೆಗಳು ಹಾಗೂ ₹1 ಕೋಟಿನಲ್ಲಿ ಎರಡು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆ ಸದಸ್ಯ ಕುಮಾರಪ್ಪ ಮಾತನಾಡಿ ಕೆರೆಗಳು ಮತ್ತು ಉದ್ಯಾನವನಗಳ ಅಭಿವೃದ್ಧಿ ವಿಚಾರದಲ್ಲಿ ಈ ಮೊದಲು ಸಭೆ ಏರ್ಪಡಿಸಿ ಸದಸ್ಯರ ಅಭಿಪ್ರಾಯ ಕೇಳಬೇಕಿತ್ತು. ಹಳೆಯೂರು ರಸ್ತೆಯಲ್ಲಿರುವ ಉದ್ಯಾನವನ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಜನದಟ್ಟಣೆ ಇರುವ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ಊರಿನ ಅಭಿವೃದ್ಧಿ ವಿಚಾರದಲ್ಲಿ ಪುರಸಭಾ ಸದಸ್ಯರಾದ ನಾವೆಲ್ಲರೂ ಒಂದೇ ಎಂದು ತಿಳಿಸಿದ ಅವರು ಪುರಸಭೆಯಿಂದ ಇನ್ನೊಂದು ಮುಕ್ತಿವಾಹನ ಅಗತ್ಯವಿದೆ. ಸಾರ್ವಜನಿಕ ಆಸ್ಪತ್ರೆ ಶವಾಗಾರದಿಂದ ಶವವನ್ನು ಮನೆಗೆ ಸಾಗಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಬಡವರಿಗೆ ಅನುಕೂಲವಾಗುವಂತೆ ಪುರಸಭೆ ಮುಕ್ತಿ ವಾಹನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ವಿರೋಧ ಇಲ್ಲ. ಆದರೆ ಕೆರೆಗಳ ಮತ್ತು ಉದ್ಯಾನವನಗಳ ಆಯ್ಕೆ ಅವೈಜ್ಞಾನಿಕವಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳನ್ನು ಮರೆಮಾಚಿ ಕಾಮಗಾರಿಗಳನ್ನು ಮಾಡುವ ಹಾಗಿಲ್ಲ. ಸಂಘರ್ಷಕ್ಕೆ ಅವಕಾಶಕೊಡದಂತೆ ಇದನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಜಿ. ಅಶೋಕ್ ಕುಮಾರ್ ಮಾತನಾಡಿ ಕೆರೆ ಮತ್ತು ಉದ್ಯಾನವನಗಳ ಅಭಿವೃದ್ಧಿ ವಿಚಾರದಲ್ಲಿ ಅನುಮೋದನೆಗೆ ಮಾತ್ರ ನಮ್ಮನ್ನು ಕೇಳಿದ್ದಾರೆ. ಈ ವಿಚಾರದಲ್ಲಿ ಮೊದಲು ಸಭೆ ಕರೆಯಬೇಕಿತ್ತು, ಈಗಾಗಲೇ ಅಭಿವೃದ್ಧಿ ಗೊಂಡ ಪಾರ್ಕ್ ಗಳನ್ನು ಮತ್ತೆ ಅಭಿವೃದ್ಧಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಅಮೃತ್ 2.0 ಮಹತ್ವಾಕಾಂಕ್ಷಿ ಯೋಜನೆ. ಅಭಿವೃದ್ಧಿ ವಿಚಾರಕ್ಕೆ ನಮ್ಮ ಸಹಕಾರ ಖಂಡಿತ ಇದೆ. ನಮ್ಮೂರಿನ ಜಲಮೂಲಗಳ ಬಗ್ಗೆ ಉದ್ಯಾನವನಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಸಮಗ್ರವಾಗಿ ಅಧಿಕಾರಿಗಳು ಯೋಚಿಸಬೇಕಿತ್ತು. ಸದಸ್ಯರ ಅಭಿಪ್ರಾಯ ಕೇಳಬೇಕಿತ್ತು. ಎಲ್ಲರ ಸಲಹೆ ಪಡೆಯಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಅಮೃತ್ 2.0 ಯೋಜನೆಯಡಿ ತರೀಕೆರೆ ಪಟ್ಟಣಕ್ಕೆ 24X7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಪ್ರತಿ ಮನೆಗೂ 24 X7 ಕುಡಿಯುವ ನೀರು ಕೊಡಬೇಕು ಎನ್ನುವ ಉದ್ದೇಶ ಯೋಜನೆ ಹೊಂದಿದೆ ಎಂದು ತಿಳಿಸಿದರು.

ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಯೋಜನೆಗೆ ಪುರಸಭೆಯಿಂದಲೂ ಆರ್ಥಿಕ ನೆರವು ಒದಗಿಸಬೇಕು. ಆದರೆ ಪುರಸಭೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಹಣ ಇಲ್ಲ. ಸರ್ಕಾರವೇ ಅನುದಾನ ಕೊಡಬೇಕು ಎಂದು ಹೇಳಿದರು.

ನಂತರ ನೆಡೆದ ಅಯವ್ಯಯ ಪೂರ್ವಭಾವಿ ಸಭೆಯಲ್ಲಿ ಸದಸ್ಯ ಟಿ.ಎಂ.ಭೋಜರಾಜ್ ಪುರಸಭೆ ಅದಾಯ ಹೆಚ್ಚಿಸಿಕೊಳ್ಳುವ ಬಗ್ಗೆ ಮತ್ತು ಪಟ್ಟಣದ ಅಭಿವೃದ್ದಿ ಕುರಿತು ಅನೇಕ ಸಲಹೆಗಳನ್ನು ನೀಡಿದರು.

ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ ಮಾತನಾಡಿ ಕ್ರೀಡೆಗಳಿಗೆ ಪ್ರತ್ಯೇಕ ಅರ್ಥಿಕ ನೆರವನ್ನು ಆಯವ್ಯಯದಲ್ಲಿ ಮೀಸಲಿರಿಸಬೇಕು. ಪುರಸಭೆಗೆ ಮತ್ತೊಂದು ಮುಕ್ತಿವಾಹನ ಅಗತ್ಯವಿದೆ. ಪುರಸಭೆಯಿಂದ ಶೀಥಲ ಶವ ಪೆಟ್ಟಿಗಾಗಿ ಆಯವ್ಯಯದಲ್ಲಿ ಹಣ ಮೀಸಲಿಡಿ ಎಂದು ಹೇಳಿದರು.ಪುರಸಭೆ ಸದಸ್ಯರಾದ ಪರಮೇಶ್, ಬಸವರಾಜ್, ಗೀತಾ ಗಿರಿರಾಜ್, ಆಶಾ ಅರುಣ್ ಕುಮಾರ್, ನಾಮಿನಿ ಸದಸ್ಯರು ಟಿ.ಜಿ. ಮಂಜುನಾಥ್, ವ್ಯವಸ್ಥಾಪಕರಾದ ವಿಜಯಕುಮಾರ್, ಕಂದಾಯ ಅಧಿಕಾರಿ ಮಂಜುನಾಥ್, ಪುರಸಭೆ ಸದಸ್ಯರು, ನಾಮಿನಿ ಸದಸ್ಯರು, ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

9ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪುರಸಭೆಯಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ನಡೆಯಿತು. ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮ, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.

---------------------

Share this article