ದಾಬಸ್ಪೇಟೆ: ನೆಲಮಂಗಲ ತಾಲೂಕಿನ ಕೆರೆಗಳಿಗೆ ಸಂಸ್ಕರಿಸಿದ ವೃಷಭಾವತಿ ನೀರನ್ನು ಹರಿಸುವ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ನೀರು ಬಿಡಬಾರದು ಎಂದು ಹೋರಾಟ ಮಾಡುತ್ತಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಸಂಸ್ಕರಿಸಿದ ನೀರಿನಿಂದ ಯಾವುದೇ ಅಪಾಯಗಳಿಲ್ಲ ಎಂದು ವಾದ ಮಾಡುತ್ತಿದ್ದು, ವೃಷಭಾವತಿಯ ಯೋಜನೆಯ ಪರ-ವಿರೋಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ದಾಬಸ್ಪೇಟೆ: ನೆಲಮಂಗಲ ತಾಲೂಕಿನ ಕೆರೆಗಳಿಗೆ ಸಂಸ್ಕರಿಸಿದ ವೃಷಭಾವತಿ ನೀರನ್ನು ಹರಿಸುವ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ನೀರು ಬಿಡಬಾರದು ಎಂದು ಹೋರಾಟ ಮಾಡುತ್ತಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಸಂಸ್ಕರಿಸಿದ ನೀರಿನಿಂದ ಯಾವುದೇ ಅಪಾಯಗಳಿಲ್ಲ ಎಂದು ವಾದ ಮಾಡುತ್ತಿದ್ದು, ವೃಷಭಾವತಿಯ ಯೋಜನೆಯ ಪರ-ವಿರೋಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿ ಅವರು ವೃಷಭಾವತಿ ಕೊಳಚೆ ನೀರನ್ನು ಶುದ್ಧೀಕರಿಸಿ ಮೂರು ಜಿಲ್ಲೆಯ 97 ಕೆರೆಗಳಿಗೆ ಹರಿಸಲು 865 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದರು. ಆದರೆ ಸರ್ಕಾರದ ಐದು ವರ್ಷದ ಆಡಳಿತ ಮುಗಿದು ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಮುಂದುವರಿಸಿ ಈಗಾಗಲೇ ನೆಲಮಂಗಲದ 47 ಕೆರೆಗಳಿಗೆ ಸಂಸ್ಕರಿಸಿದ ವೃಷಭಾವತಿ ನೀರನ್ನು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ಬಿಜೆಪಿ ಮುಖಂಡರ ಹೋರಾಟ: ನೆಲಮಂಗಲ ತಾಲೂಕಿನ ಕೆಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈ ಯೋಜನೆಯನ್ನು ವಿರೋಧಿಸಿ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಪರಿಣಾಮ ರಾಜ್ಯಮಟ್ಟದ ಬಿಜೆಪಿ ನಾಯಕರಿಗೆ ಇರಿಸುಮುರಿಸನ್ನುಂಟು ಮಾಡಿದೆ.
ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿತ್ತು. ಆದರೆ ಈ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಬೇಕಾದ ಬಿಜೆಪಿ ಮುಖಂಡರೇ ಯೋಜನೆಗೆ ವಿರೋಧ ಮಾಡುತ್ತಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿಡಿಯೋ, ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ರಾಜ್ಯ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ದಾರೆ.
ಸಾಮಾಜಿಕ ಜಾಲತಾಲಗಳಲ್ಲಿ ವೈರಲ್:
2023ರ ಜನವರಿ 14ರಂದು ರಾಜ್ಯ ಬಿಜೆಪಿ ಘಟಕ ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಈ ಯೋಜನೆ ಬಗ್ಗೆ ಪೋಸ್ಟ್ ಮಾಡಿತ್ತು. ಅದಲ್ಲದೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಈ ಯೋಜನೆ ನಮ್ಮ ಪಕ್ಷದ ಕೊಡುಗೆ, ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯೇ ವರದಿ ನೀಡಿದ್ದರೂ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಕೇಸ್ ಹಾಕಿ ಎಂದು ಅಧಿವೇಶನದಲ್ಲಿ ಹೇಳಿದ ವಿಡಿಯೋ ವೈರಲ್ ಆಗುತ್ತಿದೆ.
ಕೇಂದ್ರ ಸಚಿವರ ಮನವಿ:
ಶುದ್ಧೀಕರಿಸಿದ ವೃಷಭಾವತಿ ನೀರನ್ನು ತುಮಕೂರು ಗ್ರಾಮಾಂತರ ಕೆರೆಗಳಿಗೆ ಹರಿಸುವಂತೆ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಪತ್ರ ವೈರಲ್ ಆಗುತ್ತಿದ್ದರೆ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಶುದ್ಧೀಕರಿಸಿದ ವೃಷಭಾವತಿ ನೀರಿನಿಂದ ಯಾವುದೇ ತೊಂದರೆಯಿಲ್ಲ, ನನ್ನ ಕ್ಷೇತ್ರದ ಕೆರೆಗಳಿಗೆ ಹರಿದಿರುವ ನೀರಿನಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಹೇಳಿರುವುದು ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಮುಖಂಡರಿಗೆ ನುಂಗಲಾಗರ ತುತ್ತಾಗಿ ಪರಿಣಮಿಸಿದೆ.
------------
ಪೋಟೋ 1 * 2 * 3 : ವೃಷಭಾವತಿ ಯೋಜನೆಯ ಪರ ವಿರೋಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.