ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಾಥಮಿಕ ಸಹಕಾರ ಸಂಘಗಳಿಗೂ ತೆರಿಗೆ ಪಾವತಿಸುವಂತೆ ನೋಟಿಸ್ ಬಂದಿರುವುದು ನೆಹರು ಅವರ ವಿಚಾರ ಧಾರೆಗೆ ವಿರುದ್ಧವಾಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆದ ಶಿವಮೊಗ್ಗ ತಾಲೂಕು ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ತೆರಿಗೆ ವಿಧಿಸಬಾರದು ಎಂಬುದು ನೆಹರು ಅವರ ಅಪೇಕ್ಷೆಯಾಗಿತ್ತು. ಸಹಕಾರಿ ಕ್ಷೇತ್ರದಲ್ಲಿ ಜಾತಿ, ಪಕ್ಷ, ಲಿಂಗ ತಾರತಮ್ಯ ಇರಬಾರದು. ಆದರೆ, ಈ ತತ್ವಗಳನ್ನು ಇಂದು ಗಾಳಿಗೆ ತೂರಲಾಗುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸಹಕಾರ ಕ್ಷೇತ್ರದಿಂದ ಮಾತ್ರ ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯ. ಸಹಕಾರಿ ಕ್ಷೇತ್ರ ಜನರ ಚಳವಳಿಯಾಗಿ ಮುಂದುವರೆಯಬೇಕು. ಖಾಸಗಿ ಸಾಲಗಾರರ ಕೈಯಿಂದ ಸಣ್ಣ ರೈತರನ್ನು ಕಾಪಾಡಲು ಸಹಕಾರ ಸಂಸ್ಥೆಯನ್ನು ಸಿದ್ದನಗೌಡ ಪಾಟೀಲರು ಸ್ಥಾಪಿಸಿದರು. ನೆಹರು, ಗಾಂಧಿ, ಸಣ್ಣರಾಮನಗೌಡ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರ ಪ್ರತಿ ಕಾರ್ಯಕ್ರಮದಲ್ಲೂ ಇರಬೇಕು. ಪಾಟೀಲ್ ಅವರು ಕಂಡ ಕನಸುಗಳು ಇಂದು ನನಸಾಗುತ್ತಿವೆ ಎಂದು ತಿಳಿಸಿದರು.ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ ಕುರಿತು ಉಪನ್ಯಾಸ ನೀಡಿದ ಶಿವಮೊಗ್ಗ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಹಕಾರ ವಲಯ ಮುಂಚೂಣಿಯಲ್ಲಿದೆ. ದೇಶದ ಅಭಿವೃದ್ಧಿಗೆ ಸಹಕಾರಿ ವಲಯ ಅತ್ಯಮೂಲ್ಯ ಕೊಡುಗೆ ನೀಡಿದೆ. ಜನರು ಇರುವಲ್ಲಿಯೇ ಎಲ್ಲ ಸೌಕರ್ಯ, ಸರಕುಗಳು ದೊರೆಯುವಂತೆ ಸಹಕಾರ ಸಂಘಗಳು ಮಾಡಬೇಕು. ಮನೆಗಳಿಗೆ ಹೋಗಿ ಸಹಕಾರ ಸಂಘದಲ್ಲಿ ಖಾತೆ ತೆರೆಯುವಂತೆ ಮನವಿ ಮಾಡಬೇಕು. ಇದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬಹುದು ಎಂದರು.
ಸಂಘದಲ್ಲಿ ಕುಳಿತು ಕೆಲಸ ಮಾಡುವುದು ಮಾತ್ರವಲ್ಲ. ಸಂಘದ ಸದಸ್ಯರ ಮನೆಗಳಿಗೂ ಭೇಟಿ ನೀಡಬೇಕು. ಆಗ ಉತ್ತಮ ಬೆಳವಣಿಗೆ ಕಾಣಬಹುದು. ಮಾಡುವ ಕೆಲಸಗಳು ಸದಸ್ಯರ ಮನೆ ಬಾಗಿಲಿಗೆ ತಲುಪಬೇಕು. ಸಹಕಾರಿಯ ಬಗ್ಗೆ ತಿಳಿದುಕೊಂಡಿರುವ ತಾಂತ್ರಿಕ ಕೆಲಸಗಾರರನ್ನು ನೇಮಿಸಿಕೊಳ್ಳಬೇಕು. ಮಾರಾಟ ಸಹಕಾರ ಸಂಘಗಳು ಹೆಚ್ವಿವೆ. ಉತ್ತಮ ಕಟ್ಟಡಗಳನ್ನು ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದರು.ವರ್ಗವಾರು ಸದಸ್ಯರ ಅವಶ್ಯಕತೆಗಳನ್ನು ಗಮನಿಸಿ, ಯೋಜನೆ ರೂಪಿಸಿ, ಕಾರ್ಯಗತ ಮಾಡಬೇಕು. ಆಡಳಿತ ಮಂಡಳಿ ಸಭೆಯಲ್ಲಿ ಜಮಾ ಖರ್ಚುಗಳನ್ನು ಮಾತ್ರ ಅವಲೋಕಿಸದೆ, ಲಾಭ ತರುವ ದೃಷ್ಟಿಯಿಂದ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು. ಸರಿಯಾಗಿ ಕೆಲಸ ಮಾಡದಿದ್ದರೆ ಖಾಸಗಿ ವಲಯ ಇಲ್ಲಿಯೂ ಆಗಮಿಸಿ, ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿಗಳಿಗೆ ಸನ್ಮಾನ ಮಾಡಲಾಯಿತು. ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಮುಖರಾದ ಪಿ. ವೀರಮ್ಮ, ಸಂಜೀವ್ ಕುಮಾರ್, ಮಹಾಲಿಂಗಶಾಸ್ತ್ರಿ, ಪಿ. ಕರಿಯಪ್ಪ, ದುರ್ಗಪ್ಪಗೌಡ, ದಿನೇಶ್, ಕೆ.ಎಲ್. ಜಗದೀಶ್, ಎಸ್. ಎಲ್.ನಿಖಿಲ್, ಆರ್. ವಿಜಯ್ಕುಮಾರ್ ಮತ್ತಿತರರಿದ್ದರು.