ನರಗುಂದ: ವಿಶ್ವಗುರು ಬಸವಣ್ಣವರು 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಕೊಡುಗೆ ನೀಡಿದ್ದಾರೆ. ವಚನದ ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಅವಶ್ಯವಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾದರೆ ಮೊದಲು ಅವರಿಗೆ ಬಸವಣ್ಣನ ವಚನಗಳ ಬಗ್ಗೆ ತಿಳಿಸಬೇಕು. ಏಕೆಂದರೆ ಯಾವ ವ್ಯಕ್ತಿ ಬಸವಣ್ಣನ ವಚನಗಳನ್ನು ತಿಳಿದಿರುತ್ತಾನೋ ಅವನು ಸಂಪೂರ್ಣ ಸಂಸ್ಕಾರವಂತ ವ್ಯಕ್ತಿಯಾಗುತ್ತನೆ. ಅದಕ್ಕಾಗಿ ಮಕ್ಕಳಿಗೆ ಬಸವಣ್ಣನ ವಚನಗಳನ್ನು ಕಲಿಸಬೇಕು ಎಂದರು.
ಜಗತ್ತಿನ ಎಲ್ಲ ದೇಶಗಳು ಯುದ್ಧದಲ್ಲಿ ಮುಂದುವರಿದಿವೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಶಾಂತಿ ನೆಲೆಸಿದೆ. ಇದಕ್ಕೆ ಮುಖ್ಯ ಕಾರಣ ಇಂತಹ ಮಹಾನ್ ಪುರುಷರ ಆದರ್ಶಗಳು ಎಂದರು.ಇದೇ ಸಂದರ್ಭದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಿಂದ ಕಾಯಿಪಲ್ಲೆ ಮಾರ್ಕೆಟ್ ಮೂಲಕ ಬಸವೇಶ್ವರ ಸಮುದಾಯ ಭವನದವರೆಗೆ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಗದಗ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿದಿನ ನಡೆಯುವ ಉಚಿತ ಯೋಗ ಶಿಬಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಕಿಸಾನ್ ಸೇವಾ ಸಮಿತಿ, ಯುವ ಭಾರತ ಹಾಗೂ ಸೋಷಿಯಲ್ ಮೀಡಿಯಾ ಈ ಆರು ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳಿ ಮಾತನಾಡಿ, ಅನುಭವ ಮಂಟಪ ಸ್ಥಾಪನೆ ಮಾಡಿ ಎಲ್ಲ ದಾರ್ಶನಿಕರಿಗೆ ಮುಕ್ತ ಚರ್ಚೆಗೆ ಅವಕಾಶ ನೀಡಿ ಸಮಾಜದ ಏಳಿಗೆಗೆ ವಿಶ್ವಕ್ಕೆ ಸಂದೇಶ ನೀಡುತ್ತಾ ಜ್ಞಾನ ದಾಸೋಹ ಹರಿಸಿದ ಹಿರಿಮೆ ಬಸವಣ್ಣನವರದ್ದಾಗಿದೆ ಎಂದರು.ಪತಂಜಲಿ ಯೋಗ ಸಮಿತಿಯ ಗಿರಿಯಪ್ಪ ಮಡಿವಾಳರ, ಅತಿಥಿಗಳಾಗಿ ನಿವೃತ್ತ ಶಿಕ್ಷಕ ಎಸ್.ಎನ್. ಬಳ್ಳಾರಿ, ಕೆ.ಎಸ್. ಗುಗ್ಗರಿ, ಬಸವರಾಜ ಹಿರೇಮಠ, ಪ್ರಮೋದ ಬೇಲಿ, ವಿದ್ಯಾ ತಡಿ ಮುಂತಾದವರು ಇದ್ದರು. ಸುಜಾತಾ ಕಾಡಪ್ಪನವರು ಪ್ರಾರ್ಥಿಸಿದರು. ಹಿರಿಯ ಯೋಗ ಶಿಕ್ಷಕಿ ಶೋಭಾ ಬೆಂಗಳೂರು ಸ್ವಾಗತಿಸಿದರು. ಮುಕ್ತಾ ತಡಸದ ವಚನ ಗೀತೆ ಹಾಡಿದರು. ಅಕ್ಷಯ ತೃತೀಯದ ಮಹತ್ವವನ್ನು ತಿಳಿಸಿದರು. ನಾಗರತ್ನ ಬಡಿಗಣ್ಣವರ ನಿರೂಪಿಸಿದರು. ಹಿರಿಯ ಯೋಗ ಶಿಕ್ಷಕ ವೆಂಕಟೇಶ ಮೇರವಾಡೆ ವಂದಿಸಿದರು.