ಶಿಕ್ಷಣದ ಜತೆಗೆ ದೇಶಭಕ್ತಿಯ ಪಾಠ ಕಲಿಸಿ

KannadaprabhaNewsNetwork | Published : May 31, 2025 1:45 AM
ನಮ್ಮ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಮಕ್ಕಳಲ್ಲಿ ಶಿಕ್ಷಣದ ಜತೆಗೆ ಮನೋಬಲ ಆತ್ಮಸ್ಥೈರ್ಯ ತುಂಬುವ ಮೂಲಕ ಶಿಕ್ಷಣ ನೀಡಬೇಕು

ಕುಷ್ಟಗಿ: ಶಿಕ್ಷಕರು ಮಕ್ಕಳಲ್ಲಿ ಶಿಕ್ಷಣ ಕಲಿಸುವ ಜತೆಗೆ ದೇಶಭಕ್ತಿಯ ಪಾಠ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ವಿದ್ಯಾನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ವರ್ಷ ಹತ್ತನೇಯ ತರಗತಿ ಫಲಿತಾಂಶ ಉತ್ತಮವಾಗಿ ಬಂದಿರಬಹುದು, ಆದರೆ ಮುಂದಿನ ವರ್ಷ ಇದಕ್ಕಿಂತ ಉತ್ತಮವಾಗಿ ಬರುವಂತೆ ಮಾಡಬೇಕು ಎಂದರು.

ನಮ್ಮ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಮಕ್ಕಳಲ್ಲಿ ಶಿಕ್ಷಣದ ಜತೆಗೆ ಮನೋಬಲ ಆತ್ಮಸ್ಥೈರ್ಯ ತುಂಬುವ ಮೂಲಕ ಶಿಕ್ಷಣ ನೀಡಬೇಕು ಎಂದರು.

ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕುಕ್ಕಾಗಿದೆ. ಎಲ್ಲರು ಶಿಕ್ಷಣವಂತರಾಗಬೇಕೆಂಬ ಉದ್ದೇಶದಿಂದ ಸರ್ಕಾರವೂ ಕಡ್ಡಾಯ ಶಿಕ್ಷಣ ಕಾಯಿದೆ ಜಾರಿಗೆ ತರಲಾಗಿದೆ.ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಡಲು ಮುಂದಾಗಬೇಕು ಎಂದರು.

ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಘೋಷವಾಕ್ಯದೊಂದಿಗೆ ಈ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಸಮುದಾಯದ ಸಹಕಾರದೊಂದಿಗೆ ತಾಲೂಕಿನಾದ್ಯಂತ ವಿಶೇಷ ದಾಖಲಾತಿ ಆಂದೋಲನ ಹಮ್ಮಿಕೊಳ್ಳುವ ಮೂಲಕ ಹೆಚ್ಚು ದಾಖಲಾತಿ ಮಾಡಲು ಪ್ರಯತ್ನಿಸಲಾಗುತ್ತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

ಮಕ್ಕಳ ಕಲಿಕಾ ಮಟ್ಟದ ಅಭಿವೃದ್ಧಿಗಾಗಿ ಸರ್ಕಾರವೂ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಶೂ ಸಾಕ್ಸ್‌, ಬಿಸಿಯೂಟ, ಮೊಟ್ಟೆ, ಶಿಷ್ಯವೇತನ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಮಹಾಂತೇಶ ಕಲಭಾವಿ, ಅಕ್ಷರದಾಸೋಹ ಅಧಿಕಾರಿ ಸೋಮನಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಕಟ್ಟಿಹೊಲ, ಪ್ರಸನ್ನ ಹಿರೇಮಠ, ಸುವರ್ಣ,ಮಂಜುಳಾ, ರೂಪಾ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಭರಮಪ್ಪ ಪರಸಾಪುರ, ಸುಭಾನ್ ನದಾಫ್, ಶರಣಪ್ಪ ತೆಮ್ಮಿನಾಳ, ಡಾ.ಜೀವನ್ ಸಾಬ್ ವಾಲಿಕಾರ್, , ದಂಡಪ್ಪ ಹೊಸಮನಿ, ಮುಖ್ಯಶಿಕ್ಷಕಿ ಮರಿಯವ್ವ ಎಚ್,ಪವಾಡೆಪ್ಪ ಚೌಡ್ಕಿ ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿಗಳು ಅನೇಕರು ಉಪಸ್ಥಿತರಿದ್ದರು.

ಶ್ರೀನಿವಾಸ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.ಇದೆ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ,ಸಮವಸ್ತ್ರ ನೀಡಲಾಯಿತು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ರಾಜ್ಯಮಟ್ಟದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.