ನೀರು ಕೊಡದ ಪಕ್ಷಗಳಿಗೆ ಚುನಾವಣೆಯಲ್ಲಿ ಪಾಠ ಕಲಿಸಿ: ಆಂಜನೇಯರೆಡ್ಡಿ ಕಿಡಿ

ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ದಶಕಗಳಿಂದ ನೀರಿನ ಬವಣೆ ಎದುರಿಸುತ್ತಿವೆ. ಜೊತೆಗೆ ಅಂತರ್ಜಲ ಕುಸಿದು ಅಪಾಯಕಾರಿ ನೈಟ್ರೇಟ್, ಯುರೇನಿಯಂ ಅಂಶಗಳಿಂದ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ.

KannadaprabhaNewsNetwork | Published : Apr 25, 2024 7:15 PM IST

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಹನಿ ನೀರು ಹರಿಯದ ಎತ್ತಿನಹೊಳೆಗೆ 23 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ, ಶಾಶ್ವತ ನೀರಾವರಿ ಮೇಲೆ ಈ ಜಿಲ್ಲೆಗಳ ಅಳಿವು, ಉಳಿವು ನಿರ್ಧಾರವಾಗಲಿದೆ, ಆದಾಯ, ಆರೋಗ್ಯ, ಜಿಲ್ಲೆಯ ಭವಿಷ್ಯ ಎಲ್ಲವೂ ನೀರಾವರಿ ಮೇಲೆ ಅವಲಂಭಿತವಾಗಿವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಅರ್ಹತೆ, ಯೋಗ್ಯತೆ ಇರುವವರಿಗೆ ಜಿಲ್ಲೆಯ ಮತದಾರರು ಮತ ಚಲಾಯಿಸಬೇಕೆಂದರು.

ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ದಶಕಗಳಿಂದ ನೀರಿನ ಬವಣೆ ಎದುರಿಸುತ್ತಿವೆ. ಜೊತೆಗೆ ಅಂತರ್ಜಲ ಕುಸಿದು ಅಪಾಯಕಾರಿ ನೈಟ್ರೇಟ್, ಯುರೇನಿಯಂ ಅಂಶಗಳಿಂದ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಅವೈಜ್ಞಾನಿಕ ಎಚ್ಎನ್ ವ್ಯಾಲಿ ನೀರು ಮೂರನೇ ಹಂತದ ಶುದ್ಧೀಕರಣಕ್ಕೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಪ್ರತಿಯೊಬ್ಬ ನಾಗರಿಕನೂ ಕುಡಿಯುವ ನೀರಿಗಾಗಿ ಮತ ಚಲಾಯಿಸಬೇಕಿದೆ. ಕೃಷ್ಣ ನದಿ ನೀರು ಈ ಭಾಗಕ್ಕೆ ಹರಿಸುವ ಬಗ್ಗೆ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಿದೆ. ಚುನಾವಣೆ ಸಂದರ್ಭದಲ್ಲಿ ಜನ ಎಚ್ಚರ ತಪ್ಪಿದರೆ ಖಂಡಿತ ಈ ಭಾಗಕ್ಕೆ ನೀರು ಹರಿಯುವುದಿಲ್ಲ. ಆದ್ದರಿಂದ ನೀರಾವರಿ ವಿಚಾರದಲ್ಲಿ ಮತದಾರರು ತಮ್ಮ ಪ್ರಬುದ್ಧತೆ ಪ್ರದರ್ಶಿಸಬೇಕಿದೆ ಎಂದು ಆಂಜನೇಯರೆಡ್ಡಿ ಮನವಿ ಮಾಡಿದರು.

ಲಕ್ಷ್ಮಯ್ಯ, ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಮಹಿಳಾ ಹೋರಾಟಗಾರ್ತಿ ಸುಷ್ಮಾ ಶ್ರೀನಿವಾಸ್, ಆನೂರು ದೇವರಾಜ್, ಕರವೇ ಮುಖಂಡರಾದ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಯುವ ಸೇನೆ ಶ್ರೀರಾಮೇಗೌಡ, ವಿಕಲಚೇತನರ ಸಂಘಟನೆಯ ಮಮತಾ, ಕೃಷ್ಣಪ್ಪ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Share this article