ಕನ್ನಡಪ್ರಭ ವಾರ್ತೆ ಮೇಲುಕೋಟೆ
2002ರಲ್ಲಿ ಹೋಬಳಿಯ ಅಂದಾನಿಗೌಡನ ಕೊಪ್ಪಲಿನ ಶಾಲೆಗೆ ಸೇರಿದ್ದ ಬೆಲೆಬಾಳುವ ಮರಗಳನ್ನೊಳಗೊಂಡ 31ಗುಂಟೆ ಜಮೀನನ್ನು ಕನಗೋನಹಳ್ಳಿಯ ಕೆಲಮಂದಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಲಪಟಾಯಿಸಲು ಪ್ರಯತ್ನಿಸಿದ್ದರು.
ಈ ವೇಳೆ ದಾಖಲೆ ಸಂಗ್ರಹಿಸಿ ಜಮೀನಿನ ರಕ್ಷಣೆಗೆ ಇಳಿದ ಶಿಕ್ಷಕ ಅಶ್ವಥ್ಗೆ ಹಲವು ಸಂಕಷ್ಟ ಎದರಿಸಿದರು. ಶಿಕ್ಷಕರ ಬೆಂಬಲಕ್ಕೆ ಯಾವ ಶಿಕ್ಷಕರೂ ಬರಲಿಲ್ಲ. ಮೇಲುಕೋಟೆ ಪೊಲೀಸ್ ಠಾಣೆಗೆ ಸುಳ್ಳುದೂರು ನೀಡಿ ಪ್ರಭಾವ ಬಳಸಿ ಎಫ್.ಐ.ಆರ್ ದಾಖಲಿಸುವ ಪ್ರಯತ್ನವೂ ನಡೆಯಿತು ಎಂದರು.ಈ ವೇಳೆ ಮೇಲುಕೋಟೆ ಶಿಕ್ಷಕ ಸಂತಾನರಾಮನ್ ಅಶ್ವಥ್ಗೆ ಜಮೀನು ಉಳಿಸುವ ಕಾರ್ಯದಲ್ಲಿ ನೆರವಾದರು. ಅಂದಿನ ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸುವರ್ಣಾ ದೇವಿ, ಉಪವಿಭಾಗಾಧಿಕಾರಿಗಳಾಗಿದ್ದ ಚಿಕ್ಕತಿಮ್ಮಯ್ಯ ಸ್ಥಳ ಪರಿಶೀಲನಾವರದಿ ತರಿಸಿಕೊಂಡು ಜಮೀನು ಸರ್ಕಾರಿ ಶಾಲೆಗೆ ಸೇರಬೇಕು ಎಂದು ವರದಿ ನೀಡಿದ ಪರಿಣಾಮ ಕಂದಾಯ ಇಲಾಖೆ ಕಾರ್ಯದರ್ಶಿಯವರು ವಿಶೇಷ ಆದೇಶ ಹೊರಡಿಸಿ ಜಮೀನು ಶಾಲಾ ಆಸ್ತಿ ಎಂದು ಆದೇಶಿಸಿ ಶಿಕ್ಷಣ ಇಲಾಖೆ ಹೆಸರಿಗೆ ಖಾತೆ ಮಾಡಿಸಿದ್ದಾರೆ ಎಂದರು.
ಶಾಲಾಕಟ್ಟಡ ಮತ್ತು ಬೆಲೆಬಾಳುವ ಮರಗಳಿರುವ ಜಮೀನಿನ ಮೇಲೆ ಮತ್ತೆ ಕಣ್ಣುಬೀಳಬಾರದು ಎಂಬ ಕಾರಣಕ್ಕೆ ಕ್ರಮವಹಿಸಿದ ಗ್ರಾಮಸ್ಥರು ಜಮೀನಿನ ಮುಂಭಾಗ ಶಾಲಾ ಮತ್ತು ಶಿಕ್ಷಣ ಇಲಾಖೆ ಆಸ್ತಿ ಎಂಬ ನಾಮಫಲಕ ಅಳವಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಜಮೀನಿಗೆ ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕೆಂದು ಮನವಿ ಮಾಡಿದರು.