ಶಿಕ್ಷಕರಿಗೆ 200 ಕೋಟಿ ವಂಚನೆ: ದೂರು ಪಡೆಯಲು ಪೊಲೀಸರು ಹಿಂದೇಟು!

KannadaprabhaNewsNetwork |  
Published : May 28, 2026, 02:15 AM IST
ಶಿಕ್ಷಕರಿಗೆ ವಂಚನೆ ಮಾಡಿರುವ ಕುರಿತು ವರದಿ ಪ್ರಕಟಿಸಿದ್ದ ಕನ್ನಡಪ್ರಭ | Kannada Prabha

ಸಾರಾಂಶ

ಸಾವಿರಾರು ಕೋಟಿ ಹಗರಣದ ರೂವಾರಿ ಶಿವಾನಂದ ನೀಲಣ್ಣವರ ಎಂಬುವನನ್ನು ಬೆಳಗಾವಿ ಪೊಲೀಸರು ಬರೀ ವಿಡಿಯೋ ಆಧಾರದಲ್ಲಿ ಬಂಧಿಸಿ ಜೈಲಿಗಟ್ಟಿದ್ದರೆ, ಹುಬ್ಬಳ್ಳಿ ಪೊಲೀಸರು ವಂಚನೆಗೆ ಒಳಗಾದ ನಾಲ್ಕಾರು ಶಿಕ್ಷಕಿಯರು ದಾಖಲೆ ಸಮೇತ ದೂರು ನೀಡಲು ಬಂದರೂ ಕ್ಯಾರೇ ಎನ್ನುತ್ತಿಲ್ಲ.

ಹುಬ್ಬಳ್ಳಿ:

ಶಿಕ್ಷಕರಿಗೆ ₹200 ಕೋಟಿ ವಂಚನೆಯ ಕೇಸ್‌ ದಾಖಲಿಸಿಕೊಳ್ಳಲು ಇಲ್ಲಿನ ಕಸಬಾಪೇಟೆ ಠಾಣೆಯ ಪೊಲೀಸರು ಮೀನಾಮೇಷ ಎಣಿಸುತ್ತಿದ್ದು, ನೂರಾರು ಪುಟಗಳ ದಾಖಲೆ ಹಿಡಿದುಕೊಂಡು ಸಂತ್ರಸ್ತ ಶಿಕ್ಷಕಿಯರು ಬುಧವಾರ ಪೊಲೀಸ್‌ ಕಮಿಷನ್‌ರೇಟ್‌-ಕಸಬಾಪೇಟೆ ಠಾಣೆಯ ಮಧ್ಯೆ ಇಡೀ ದಿನ ಓಡಾಡಿದ ಘಟನೆ ನಡೆಯಿತು.

ಸಾವಿರಾರು ಕೋಟಿ ಹಗರಣದ ರೂವಾರಿ ಶಿವಾನಂದ ನೀಲಣ್ಣವರ ಎಂಬುವನನ್ನು ಬೆಳಗಾವಿ ಪೊಲೀಸರು ಬರೀ ವಿಡಿಯೋ ಆಧಾರದಲ್ಲಿ ಬಂಧಿಸಿ ಜೈಲಿಗಟ್ಟಿದ್ದರೆ, ಹುಬ್ಬಳ್ಳಿ ಪೊಲೀಸರು ವಂಚನೆಗೆ ಒಳಗಾದ ನಾಲ್ಕಾರು ಶಿಕ್ಷಕಿಯರು ದಾಖಲೆ ಸಮೇತ ದೂರು ನೀಡಲು ಬಂದರೂ ಕ್ಯಾರೇ ಎನ್ನುತ್ತಿಲ್ಲ.

ಈ ಹಗರಣ ಬೆಳಕಿಗೆ ಬಂದೊಡನೆಯೇ ಬೆಳಗಾವಿ ಪೊಲೀಸರಂತೆ ಹುಬ್ಬಳ್ಳಿಯವರೂ ಸ್ವಯಂ ಪ್ರೇರಿತರಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕಿತ್ತು. ದಾಖಲೆ ಸಮೇತ ದೂರು ನೀಡಲು ಬಂದರೂ ಮೀಣಾಮೇಷ ಎನಿಸುತ್ತಿರುವ ಕಸಬಾಪೇಟೆ ಪೊಲೀಸರ ಬಗ್ಗೆ ನಗರದಲ್ಲಿ ಆಕ್ರೋಶ ಕೇಳಿ ಬರುತ್ತಿದೆ.

ಆಗಿರುವುದೇನು?:

ಹೆಚ್ಚಿನ ಬಡ್ಡಿ ಕೊಡುವುದಾಗಿ ಶಿಕ್ಷಕರನ್ನು ನಂಬಿಸಿ, ಇಲ್ಲಿನ ಮೂವರು ಶಿಕ್ಷಕರು ಏಜೆಂಟರಂತೆ ಕೆಲಸ ಮಾಡಿ ₹ 200ಕ್ಕೂ ಅಧಿಕ ಕೋಟಿ ಹೂಡಿಕೆ ಮಾಡಿಸಿದ ಪ್ರಕರಣವಿದು. ಮೂವರು ಶಿಕ್ಷಕರು 2021ರಿಂದ ಅಕ್ಷರಶಃ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಶಿಕ್ಷಕರಿಗೆ ಬಣ್ಣ-ಬಣ್ಣದ ಮಾತುಗಳಿಂದ ನಂಬಿಸಿ ಹೂಡಿಕೆ ಮಾಡಿಸುವ ಕೆಲಸದಲ್ಲೇ ನಿರತರಾಗಿದ್ದರು.

ಹುಬ್ಬಳ್ಳಿ ಕೇಂದ್ರವನ್ನಾಗಿಟ್ಟುಕೊಂಡು ಉತ್ತರ ಕರ್ನಾಟಕದ ಜಿಲ್ಲೆಗಳಷ್ಟೇ ಅಲ್ಲ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಶಿಕ್ಷಕರಿಂದ ಹೂಡಿಕೆ ಮಾಡಿಸಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತೇವೆ. 3 ವರ್ಷದಲ್ಲೇ ದುಪ್ಪಟ್ಟು ಹಣ ಪಡೆಯಬಹುದು ಎಂದು ನಂಬಿಸಿದ್ದರು. ಚಿಕ್ಕೋಡಿ ಮೂಲದ ವ್ಯಕ್ತಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ವ್ಯಕ್ತಿಗಳಿಗೆ ಈ ದುಡ್ಡು ಹಾಕಿಸಲಾಗಿತ್ತು.

ದಾಖಲೆಗಳ ಪ್ರಕಾರ 185ಕ್ಕೂ ಹೆಚ್ಚು ಜನ ಶಿಕ್ಷಕರು ಇದರಲ್ಲಿ ಹಣ ತೊಡಗಿಸಿದ್ದು, ಒಬ್ಬೊಬ್ಬರು ₹ 10, ₹ 15, ₹ 30, ₹ 50 ಲಕ್ಷ ವರೆಗೂ ಹೂಡಿದ್ದಾರೆ. ಆರಂಭದಲ್ಲಿ ಬೆರಳೆಣಿಕೆಯಷ್ಟು ಶಿಕ್ಷಕರಿಗೆ ಹೆಚ್ಚಿನ ಬಡ್ಡಿ ನೀಡಿದಂತೆ ಮಾಡಿ, ಆಮೇಲೆ ಕೈ ಎತ್ತಿದ್ದಾರೆ. ಶಿಕ್ಷಕರೇ ಸಾಕಷ್ಟು ಸಲ ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಇತ್ತೀಚಿಗೆ ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ಪ್ರಕರಣ ಹೊರಬೀಳುತ್ತಿದ್ದಂತೆ ಶಿಕ್ಷಕ ವಲಯಕ್ಕೆ ವಂಚಿಸಿದ ಪ್ರಕರಣ ಕೂಡ ಮತ್ತೆ ಚರ್ಚೆಗೆ ಬಂದಿತ್ತು. ಕನ್ನಡಪ್ರಭಕ್ಕೆ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ದೋಖಾ ಎಂಬ ವರದಿಯನ್ನೂ ಪ್ರಕಟಿಸಿತ್ತು. ಇದೀಗ ಶಿಕ್ಷಕರು ಧೈರ್ಯ ಮಾಡಿ ಬೇರೆ ಬೇರೆ ಊರುಗಳಿಂದ ದಾಖಲೆಗಳ ಮೂಟೆಯನ್ನು ಹೊತ್ತುಕೊಂಡು ಹುಬ್ಬಳ್ಳಿ ಕಸಬಾಪೇಟೆ ಠಾಣೆಗೆ ಪ್ರಕರಣ ದಾಖಲಿಸಲು ಬುಧವಾರ ಬಂದಿದ್ದರು.

ಪೊಲೀಸರ ಮೀನಾಮೇಷ:

ಈ ಶಿಕ್ಷಕಿಯರು ಮೊದಲು ವಿದ್ಯಾನಗರ ಠಾಣೆಗೆ ಹೋಗಿದ್ದಾರೆ. ಅವರು ಉಪನಗರ ಠಾಣೆಗೆ ಕಳಿಸಿದ್ದಾರೆ. ಅಲ್ಲಿ ಹೋದರೆ ಇದು ದೊಡ್ಡ ಹಗರಣ ನೀವು ಕಮೀಶ್ನರೇಟ್‌ಗೆ ಹೋಗಿ ಎಂದು ಕಳಿಸಿದ್ದಾರೆ. ಕಮೀಶ್ನರೇಟ್‌ ಸಿಬ್ಬಂದಿ ಕಸಬಾಪೇಟೇ ಠಾಣೆಗೆ ಕಳಿಸಿದ್ದಾರೆ.

ಕಸಬಾಪೇಟೆ ಠಾಣೆಗೆ ಬೆಳಗ್ಗೆ ಹೋದರೆ, ಅಲ್ಲಿನ ಪೊಲೀಸರು ಸಂಜೆ ಬನ್ನಿ ಎಂದು ಇಡೀ ದಿನ ಸತಾಯಿಸಿದ್ದಾರೆ. ಅಲ್ಲದೇ, ನಾಳೆ ಬಕ್ರೀದ್‌ ಇದೆ, ಈಗ ಬೇಡ. ಮುಂದಿನ ವಾರ ಬನ್ನಿ ಎಂದು ಸಾಗ ಹಾಕುವ ಪ್ರಯತ್ನ ಮಾಡಿದ್ದಾರೆ.

ಕೋಟಿಗಟ್ಟಲೇ ಅವ್ಯವಹಾರ ನಡೆದರೂ ಹಿಡಿದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಾದ ಪೊಲೀಸರೇ ಮೀನಾಮೇಷ ಎಣಿಸುತ್ತಿರುವುದು ಶಿಕ್ಷಕ ವಲಯದಲ್ಲಿ ಆಕ್ರೋಶವನ್ನುಂಟು ಮಾಡಿದೆ. ಇದೀಗ ಪೊಲೀಸರ ವಿರುದ್ಧವೇ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಶಿಕ್ಷಕರು ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ: ಶಾಸಕ ಗವಿಯಪ್ಪ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಿ