ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಡಾ. ಕೆ.ಎ. ಅಶೋಕ ಪೈ ಅವರು ನೀಡಿದ ಕಟೀಲು ಅಪ್ಪು ಪೈ ಮತ್ತು ವಿನೋಧಿನಿ ಪೈ ದತ್ತಿ ಕಾರ್ಯಕ್ರಮದಲ್ಲಿ ‘ಮಾನಸಿಕ ಆರೋಗ್ಯ-ಶಿಕ್ಷಕರ ಪಾತ್ರ’ ವಿಷಯ ಕುರಿತು ಅವರು ಮಾತನಾಡಿದರು.
ಹಿಂದಿನಂತೆ ಮಕ್ಕಳು ನಿತ್ಯ ಮನೆಯಲ್ಲಿರುವ ಸಮಯಕ್ಕಿಂತ ಶಾಲೆಯಲ್ಲಿರುವ ಸಮಯ ಹೆಚ್ಚು. ಮಕ್ಕಳ ಕುರಿತು ತಂದೆ- ತಾಯಿಗಳಿಗೆ ತಿಳಿಯದ ಅನೇಕ ವರ್ತನೆಗಳು ಶಿಕ್ಷಕರಿಗೆ ಅರಿವಾಗಿರುತ್ತದೆ. ಪೋಷಕರ ಗಮನಕ್ಕೆ ಬರುವಾಗ ಮಗು ತೊಂದರೆಗೆ ಸಿಲುಕಿ ಬಿಟ್ಟಿರುತ್ತದೆ. ಅಂತಹ ಅನಾಹುತಗಳನ್ನು ತಡೆಯುವ ಶಕ್ತಿ ಶಿಕ್ಷಕರಿಗಿದೆ ಎಂದರು.ಶಿಕ್ಷಕ ವೃತ್ತಿ ಮಾನಸಿಕ ಒತ್ತಡದಿಂದ ಕೂಡಿದ್ದು, ಸಮರ್ಪಕವಾಗಿ ನಿರ್ವಹಿಸಿಕೊಳ್ಳಬೇಕಿದೆ. ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನ, ಫಲಿತಾಂಶ, ಓದು ಎಲ್ಲದರ ಕುರಿತಾಗಿ ಕಾಳಜಿ ಹೊಂದಿದ್ದಾರೆ. ಮಗುವನ್ನು ಹೀಗೆಯೆ ಬೆಳಸಬೇಕು ಎಂಬ ಮಾದರಿಗಳಿಲ್ಲ. ನಮ್ಮ ಪೋಷಕರು ನಮಗೆ ಬೆಳೆಸಿದ ಪರಿಯೇ ನಮಗೆ ನಿಜವಾದ ಮಾದರಿ ಎಂದು ಹೇಳಿದರು.
ಶಿಕ್ಷಕರು ತಮ್ಮ ಅರಿವನ್ನು ಬಂಡವಾಳ ಮಾಡಿಕೊಳ್ಳಬೇಕು. ಓದು ಮತ್ತು ತಿಳಿವಳಿಕೆಗಳನ್ನು ಪಡೆಯುವುದು ನಿಲ್ಲಿಸಬಾರದು. ಪಠ್ಯದ ವಿಷಯದ ಜೊತೆಗೆ ಇತರೇ ಪೂರಕ ಮಾಹಿತಿಯ ಅರಿವು ಅಗತ್ಯ. ಇದರಿಂದ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ವಿವರಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ಅದನ್ನು ಸರಿಯಾಗಿ ಕಲಿಯದೇ ಆತ್ಮವಂಚನೆ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲ ಹಂತಗಳಲ್ಲಿ ಕನ್ನಡ ಬಳಸುವ ಬದ್ಧತೆ ನಮ್ಮದಾಗಬೇಕು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ್ ಎನ್.ಎಚ್., ಕೋಶಾಧ್ಯಕ್ಷರಾದ ಟಿ.ಪಿ. ನಾಗರಾಜ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಜಿ.ಮಧು ಅಧ್ಯಕ್ಷತೆ ವಹಿಸಿದ್ದರು. ಪ್ರಶಿಕ್ಷಣಾರ್ಥಿಗಳು ವಿವಿಧ ಕನ್ನಡ ಭಾವಗೀತೆಗಳನ್ನು ಹಾಡಿದರು.- - - -ಫೋಟೋ:
ಕಟೀಲು ಅಪ್ಪು ಪೈ ಮತ್ತು ವಿನೋಧಿನಿ ಪೈ ದತ್ತಿ ಕಾರ್ಯಕ್ರಮದಲ್ಲಿ ‘ಮಾನಸಿಕ ಆರೋಗ್ಯ-ಶಿಕ್ಷಕರ ಪಾತ್ರ’ ವಿಷಯ ಕುರಿತು ಖ್ಯಾತ ಮನಶಾಸ್ತ್ರಜ್ಞೆ ಡಾ. ಪ್ರೀತಿ ಶಾನಭಾಗ ಮಾತನಾಡಿದರು.