ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಮತ್ತು ನೈತಿಕ ಶಿಕ್ಷಣ ನೀಡಬೇಕು-ಹೊರಟ್ಟಿ

KannadaprabhaNewsNetwork | Published : May 31, 2025 12:06 AM
ಮಕ್ಕಳಿಗೆ ನೈತಿಕ ಮತ್ತು ಸಂಸ್ಕಾರದ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ಇಂದು ಅನೇಕ ಒತ್ತಡದಲ್ಲಿ ಮಕ್ಕಳಿಗೆ ಪಾಠ ಹೇಳಬೇಕಾದ ಸ್ಥಿತಿ ಇದೆ. ಒತ್ತಡ ಕಡಿಮೆ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಂತೆ ಶಿಕ್ಷಣ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಲಕ್ಷ್ಮೇಶ್ವರ: ಮಕ್ಕಳಿಗೆ ನೈತಿಕ ಮತ್ತು ಸಂಸ್ಕಾರದ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ಇಂದು ಅನೇಕ ಒತ್ತಡದಲ್ಲಿ ಮಕ್ಕಳಿಗೆ ಪಾಠ ಹೇಳಬೇಕಾದ ಸ್ಥಿತಿ ಇದೆ. ಒತ್ತಡ ಕಡಿಮೆ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಂತೆ ಶಿಕ್ಷಣ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಮೀಪದ ಅಡರಕಟ್ಟಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಗುವು ಶಿಕ್ಷಣ ಪಡೆಯುವುದು ಆತನ ಹಕ್ಕಾಗಿದ್ದು, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತಾಗಬೇಕು. ಪೋಷಕರು ಆಂಗ್ಲ ಮಾಧ್ಯಮದ ವ್ಯಾಮೋಹ ಬಿಟ್ಟು ಮಾತೃಭಾಷೆಯ ಮೇಲೆ ಅಭಿಮಾನವಿಟ್ಟು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು. ಪಾಲಕರು ಕೇವಲ ಬಡತನವನ್ನೇ ನೆಪ ಮಾಡಿಕೊಂಡು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದು ಅಕ್ಷಮ್ಯ ಅಪರಾಧ. ಆದ್ದರಿಂದ ಎಂತಹದ್ದೇ ಕಷ್ಟ-ನಷ್ಟಗಳಿರಲಿ ವಿದ್ಯೆಯೇ ಸಂಪತ್ತಾಗಿದ್ದು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಇದು ಕೇವಲ ಸರ್ಕಾರದ ಜವಾಬ್ದಾರಿ ಅಷ್ಟೆ ಆಗದೇ ಪಾಲಕರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಶಾಲೆ ಬಿಟ್ಟ ಮತ್ತು ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು ಮಕ್ಕಳು ಶಾಲೆ ತಪ್ಪಿಸದೆ ಶೃದ್ಧೆಯಿಂದ ಓದುವ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮುವಂತೆ ಹೇಳಿದರು. ಶಾಸಕ ಚಂದ್ರು ಲಮಾಣಿ ಮಕ್ಕಳಿಗೆ ಸಮವಸ್ತ್ರ ಪಠ್ಯಪುಸ್ತಕ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದರು. ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಗ್ರಾಪಂ ಅಧ್ಯಕ್ಷೆ ಪ್ರೇಮಕ್ಕ ಮಾನಪ್ಪ ಲಮಾಣಿ. ಉಪನಿರ್ದೇಶಕ ಆರ್.ಎಸ್. ಬುರುಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಣಕಿ ನಾಯಕ್ ಭಾಗವಹಿಸಿ ಮಕ್ಕಳಿಗೆ ಸಮವಸ್ತ್ರ ಪಠ್ಯಪುಸ್ತಕ ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ವೀರೇಶ ಭಂಗಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಕಾರ್ಯದರ್ಶಿ ಚಂದ್ರಕಾಂತ ನೇಕಾರ, ನಿ.ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ ಹವಳದ, ಬಿಆರ್‌ಪಿ ಈಶ್ವರ ಮೆಡ್ಲೇರಿ, ಇಸಿಓ ಉಮೇಶ ಹುಚ್ಚಯ್ಯನಮಠ, ಗೀತಾ ಹಳ್ಯಾಳ ಮತ್ತು ಶಿಕ್ಷಕರು ಸೇರಿ ಅನೇಕರಿದ್ದರು. ಸಿಆರ್‌ಪಿ ಸತೀಶ ಬೋಮಲೆ, ಉಮೇಶ ನೇಕಾರ, ಶಿವಾನಂದ ನಿರ್ವಹಿಸಿದರು. ಡಿ.ಡಿ. ಲಮಾಣಿ, ಪಿ.ಸಿ.ಕಾಳಶೆಟ್ಟಿ, ಸಾವಿತ್ರಿ ಉಮಚಗಿ ನಿರೂಪಿಸಿದರು.ಎರಡು ತಿಂಗಳ ರಜೆ ಬಳಿಕ ಬುಧವಾರ ಶಾಲೆಗಳು ವಿಶೇಷ ರೀತಿಯಲ್ಲಿ ಪ್ರಾರಂಭಗೊಂಡು ಶಾಲೆಯಲ್ಲಿ ಮತ್ತೇ ಮಕ್ಕಳ ಕಲರವ ಕೇಳಿ ಬಂದಿತು. ವಿಶೇಷ ರೀತಿಯ ಪ್ರಾರಂಭೋತ್ಸವಕ್ಕಾಗಿ ಶಾಲೆಗೆ ಬಣ್ಣ ಹಚ್ಚಿ, ತಳಿರು ತೋರಣ, ಬಲೂನ್ ಶೃಂಗರಿಸಲಾಗಿತ್ತು. ಮೊದಲ ದಿನ ಸರಸ್ವತಿ ಮತ್ತು ವಿನಾಯಕ ಪೂಜಾ ಕಾರ್ಯ ಕೈಗೊಳ್ಳಲಾಯಿತು. ಮಕ್ಕಳು ಬಣ್ಣ ಬಣ್ಣದ ಹೊಸ ಉಡುಗೆಯುಟ್ಟು ಬಂದಿದ್ದ ಮಕ್ಕಳಿಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ಮತ್ತು ಶಿಕ್ಷಕರು ಹೂವು, ಸಿಹಿ, ಚಾಕಲೇಟ್ ನೀಡಿ ಸ್ವಾಗತಿಸಿದ್ದು ಕಂಡು ಬಂದಿತು. ಶಾಲೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಬಿಸಿಯೂಟದಲ್ಲಿ ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಲಾಯಿತು.