ಕನ್ನಡಪ್ರಭ ವಾರ್ತೆ ಮಂಡ್ಯ
ಸಮಾಜದಲ್ಲಿ ಎದುರಾಗುತ್ತಿರುವ ಸವಾಲುಗಳು, ಹೋರಾಟಗಳನ್ನು ಎದುರಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕ ಪಾಠ ಕಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಶೈಕ್ಷಣಿಕವಾಗಿ ಪಾಠ ಮಾಡುವುದು ಸಾಮಾನ್ಯ. ಆದರೆ, ವಿದ್ಯಾರ್ಥಿಗಳಿಗೆ ಜೀವನ ಹೇಗೆ ನಡೆಸಬೇಕು ಎಂಬ ಬದುಕಿನ ಪಾಠ ಹೇಳಿಕೊಡಬೇಕಿದೆ ಎಂದರು.
ಪ್ರತಿದಿನ ಅರ್ಧಗಂಟೆ ಕಾಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು, ಧೈರ್ಯ, ದೃಢತೆ, ನಾಯಕತ್ವ ಗುಣಗಳನ್ನು ಬೆಳಸಿ ಅವರನ್ನು ದೇಶದ ಸತ್ಪ್ರಜೆಗಳಾಗಿ ಸಜ್ಜುಗೊಳಿಸಬೇಕು ಎಂದರು.ಮಕ್ಕಳಿಗೆ ತಂದೆ, ತಾಯಿ ನಂತರ ಅವರ ತಪ್ಪುಗಳನ್ನು ತಿದ್ದಿ, ತಿಳಿ ಹೇಳುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ವಿದ್ಯಾರ್ಥಿಗಳು ಮಾಡುವ ಸಾಧನೆ ಹಿಂದೆ ಗುರುಗಳ ಪರಿಶ್ರಮವಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ. ಶಾಲೆಗಳು ಮುಚ್ಚಿದರೆ ಶಿಕ್ಷಕರಿಗೆ ಉದ್ಯೋಗವಿರುವುದಿಲ್ಲ. ದಯಮಾಡಿ ಶಿಕ್ಷಕ ವೃಂದ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಮಕ್ಕಳು ಶಾಲೆ ಬಿಡದಂತೆ ಗಮನ ಹರಿಸಬೇಕು ಎಂದರು.ಶಿಕ್ಷಕರ ಅನುಕೂಲಕ್ಕಾಗಿ ನಗರದ ಗುರುಭವನವನ್ನು ಅಭಿವೃದ್ಧಿ ಪಡಿಸಲು ಶಿಕ್ಷಣ ಸಚಿವರ ಸಹಕಾರದೊಂದಿಗೆ 50 ಲಕ್ಷ ರು. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. ಶೀಘ್ರ ಗುರು ಭವನ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕ ಕೆ.ವಿವೇಕಾನಂದ ಮಾತನಾಡಿ, ಅತಿಥಿ ಶಿಕ್ಷಕರಿಗೆ ಸರ್ಕಾರಿ ಹುದ್ದೆ ನೀಡುವಲ್ಲಿ ಸರ್ಕಾರ ಗಮನ ಹರಿಸಬೇಕು. ಇತರೆ ಸರ್ಕಾರಿ ನೌಕರರ ರೀತಿ ಪ್ರತಿ ಐದು ವರ್ಷಕ್ಕೊಮ್ಮೆ ಶಿಕ್ಷಕರಿಗೂ ಕಡ್ಡಾಯವಾಗಿ ಬಡ್ತಿ ನೀಡಿ, ಸಂಬಳ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಶಿಕ್ಷಕರಿಂದ ದೇಶ, ರಾಜ್ಯ ಬೆಳಗುತ್ತದೆ. ಮಕ್ಕಳಿಗೆ ತಂದೆ, ತಾಯಿ ನಂತರ ದೇವರ ರೂಪದಲ್ಲಿ ಕಾಣುವವರು ಶಿಕ್ಷಕರು. ಶಿಕ್ಷಕರಿಗೆ ಅನ್ಯಾಯವಾದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತೆ. ದಯಮಾಡಿ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶಿಕ್ಷಕರು ಲೋಕದ ಕಣ್ಣುಗಳಿದ್ದಂತೆ. ಅವರಿಂದ ವಿದ್ಯಾರ್ಥಿಗಳ ಬದುಕು, ಭವಿಷ್ಯ ಬೆಳಗುತ್ತದೆ. ಶಿಕ್ಷಕರ ಮಾರ್ಗದರ್ಶನವಿಲ್ಲದ ಮಕ್ಕಳ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂಕಗಳಿಸಲು, ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಹಾಗೂ ಪ್ರಥಮ ಸ್ಥಾನ ಗಳಿಸುವುದರ ಬಗ್ಗೆ ಹೇಗೆ ತರಬೇತಿ ನಿಡುತ್ತಿರೋ ಹಾಗೆಯೇ ಬದುಕಿನ ಏಳು - ಬೀಳುಗಳನ್ನ ದಾಟಿ ಭವಿಷ್ಯ ರೂಪಿಸಲು ಅಗತ್ಯವಾದ ಜೀವನ ಮೌಲ್ಯಗಳನ್ನು ಸಹ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಬೇಕು ಎಂದರು.ಶಿಕ್ಷಣ ಕ್ಷೇತ್ರ ಶ್ರೇಷ್ಠವಾದುದ್ದು. ಶಿಕ್ಷಕರ ವೃತ್ತಿ ಬಹಳ ಜವಾಬ್ದರಿಯುತ ವೃತ್ತಿ, ಪ್ರತಿಯೊಬ್ಬ ಶಿಕ್ಷಕರು ನೈತಿಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಉದ್ಧಾರಕ್ಕಾಗಿ ಶ್ರಮಿಸಿ ಮತ್ತು ಸಮಾಜಕ್ಕೆ ಮಾದರಿಯಾಗಿ ಎಂದರು.
ಇದೇ ವೇಳೆ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚಲುವಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ವಾಸುಕಿ ಪ್ರಸನ್ನ ಹಾಗೂ ಜಿಲ್ಲಾ ಪ್ರಾಥಮಿಕ ಸರ್ಕಾರಿ ಶಿಕ್ಷಣ ಸಂಘದ ಅಧ್ಯಕ್ಷ ಎಚ್.ಡಿ.ರಮೇಶ್ ಸೇರಿದಂತೆ ಹಲವು ಉಪಸ್ಥಿತರಿದ್ದರು.