ತಂತ್ರಜ್ಞಾನದಿಂದ ಮಾರುಕಟ್ಟೆ ಕ್ಷೇತ್ರದಲ್ಲಿ ಭಾರೀ ಬದಲಾವಣೆ

KannadaprabhaNewsNetwork | Published : Apr 29, 2025 12:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಾಗತಿಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಅಮೂಲಾಗ್ರ ಸುಧಾರಣೆಗಳು ಕಂಡು ಬಂದಿವೆ. ಈ ಮೂಲಕ ನೇರವಾಗಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ವಸ್ತು, ಉತ್ತಮ ವಿತರಣಾ ವ್ಯವಸ್ಥೆ ಮತ್ತು ಗ್ರಾಹಕ ಸಂತೃಪ್ತಿಯೊಂದಿಗೆ ಮಾರಾಟ ಮಾಡಲು ಇ-ಕಾಮರ್ಸ್‌ ಪ್ರಯೋಜನಕಾರಿಯಾಗಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಖೊದ್ನಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಾಗತಿಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಅಮೂಲಾಗ್ರ ಸುಧಾರಣೆಗಳು ಕಂಡು ಬಂದಿವೆ. ಈ ಮೂಲಕ ನೇರವಾಗಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ವಸ್ತು, ಉತ್ತಮ ವಿತರಣಾ ವ್ಯವಸ್ಥೆ ಮತ್ತು ಗ್ರಾಹಕ ಸಂತೃಪ್ತಿಯೊಂದಿಗೆ ಮಾರಾಟ ಮಾಡಲು ಇ-ಕಾಮರ್ಸ್‌ ಪ್ರಯೋಜನಕಾರಿಯಾಗಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಖೊದ್ನಾಪೂರ ಹೇಳಿದರು.

ಇಂಡಿ ತಾಲೂಕಿನ ಝಳಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದಡಿ ಎಮರ್ಜಿಂಗ್ ಟ್ರೆಂಡ್ಸ್ ಇನ್ ಇ-ಕಾಮರ್ಸ್‌ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಸ್ಮಾರ್ಟ್‌ ಫೋನ್‌ಗಳ ಬಳಕೆಯಿಂದ ಇಡೀ ಜಗತ್ತು ಇಂದು ಬೆರಳ ತುದಿಯ ಮೇಲೆ ನಿಂತಿದೆ. ಇದು ವಿವಿಧ ಮಾಧ್ಯಮಗಳ ಮೂಲಕ ಡಿಜಿಟಲ್ ಜಾಹೀರಾತು, ಸಾಮಾಜಿಕ ಮಾಧ್ಯಮಗಳು, ವೈಯಕ್ತಿಕ ಮಾರ್ಕೆಟಿಂಗ್, ಸೃಜನಾತ್ಮಕ ತಂತ್ರಗಳು, ಶ್ರವಣ ಮತ್ತು ದೃಶ್ಯ ಜಾಹೀರಾತು ಮಾಧ್ಯಮಗಳನ್ನು ಬಳಸಿಕೊಂಡು ಗ್ರಾಹಕರಿಗೆ 24*7 ನಿರಂತರ ಸೇವೆ ನೀಡುತ್ತಿದೆ. ನವೀನ ತಂತ್ರಜ್ಞಾನ, ಸಂಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್‌ ಆಫ್ ಥಿಂಗ್ಸ್ ಮತ್ತು ದೊಡ್ಡ ಡೇಟಾ ವಿಶ್ಲೇಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನದಿಂದ ಇಡೀ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಡಿಜಿಟಲೀಕರಣದ ಪ್ರಭಾವದಿಂದಾಗಿ 2040 ರ ವೇಳೆಗೆ ಭಾರತದಲ್ಲಿ ಇ- ಕಾಮರ್ಸ್‌ ಸಂಸ್ಥೆಗಳ ಒಟ್ಟಾರೆ ವ್ಯವಹಾರದ ಪ್ರಮಾಣವು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ.95 ರಷ್ಟು ಆನಲೈನ್‌ನಲ್ಲಿ ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಿದ್ದಾರೆ ಎಂದರು.

ಇಂದು ಇ-ಕಾಮರ್ಸ್‌ ವಿಶ್ವದ್ಯಾದಂತ ನೇರ ಮತ್ತು ಪ್ರಥಮ ದರ್ಜೆಯ ವಿತರಣಾ ಚಾನೆಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಒಟ್ಟು ಖರೀದಿ ಮತ್ತು ಮಾರಾಟ ವ್ಯವಹಾರಗಳ ಪ್ರಮಾಣದಲ್ಲಿ ಶೇ.25 ರಷ್ಟು ಸಂಘಟಿತ ಚಿಲ್ಲರೆ ಮಾರುಕಟ್ಟೆಯಲ್ಲಿ ಇ-ಕಾಮರ್ಸ್ ಮೂಲಕ ವ್ಯವಹರಿಸಲಾಗುತ್ತಿದೆ. 2030 ರ ವೇಳೆಗೆ ಇದರ ವ್ಯವಹಾರ ಶೇ.37 ರಷ್ಟಾಗಲಿದೆ. 2040 ರ ವೇಳೆಗೆ ಅಮೇರಿಕಾ ದೇಶವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಎರಡನೇ ದೊಡ್ಡ ರಾಷ್ಟ್ರವಾಗಲಿದೆ ಎಂಬ ಅಂಶವನ್ನು ತಿಳಿಸಿದರು.

ಪ್ರಾಂಶುಪಾಲ ಡಾ.ವಿವೇಕಾನಂದ ಉಘಡೆ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಇ-ಕಾಮರ್ಸ್‌ ಕ್ಷೇತ್ರವು ಬಹುಬಗೆಯ ಬ್ರಾಂಡೆಂಡ್ ವಸ್ತಗಳನ್ನು ಗ್ರಾಹಕರಿಗೆ ಅವರ ಆಸಕ್ತಿ, ಅಭಿರುಚಿ, ಆಶೋತ್ತರ ಮತ್ತು ಬೇಡಿಕೆ ಮತ್ತು ಕೊಳ್ಳುವ ಸಾಮರ್ಥ್ಯಕ್ಕನುಗುಣವಾಗಿ ಪೂರಕ ಮಾರುಕಟ್ಟೆಯನ್ನು ಒದಗಿಸುತ್ತದೆ. ಆದರೆ, ತಂತ್ರಜ್ಞಾನದಲ್ಲಿರುವ ನ್ಯೂನ್ಯತೆಗಳಿಂದ ಹಣ ಪಾವತಿಯ ಸಂದರ್ಭದಲ್ಲಿ ಸೈಬರ್ ಸುರಕ್ಷತೆಯ ಯಕ್ಷ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ. ಇದರಿಂದ ಗ್ರಾಹಕರಲ್ಲಿ ಹಣ ಕಳೆದುಕೊಳ್ಳುವ ಭೀತಿಯಿಂದ ಗ್ರಾಹಕರು ವ್ಯವಹಾರಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಆಂತರಿಕ ಗುಣಮಟ್ಟ ಭರವಶಾ ಕೋಶ ಘಟಕದ ಸಂಚಾಲಕ ಡಾ.ಸಂತೋಷ ದಂಡ್ಯಾಗೋಳ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸಚಿನ ಮಂಚಲಕರ, ಪ್ರೊ.ತಾಜ್ ಬಾಬಾ, ಶಿವಾನಂದ ಸಿಂಹಾಸನಮಠ, ಶಿವಶಂಕರ.ಸಿ.ಕೆ ಇನ್ನಿತರರು ವೇದಿಕೆ ಮೇಲಿದ್ದರು. ಈ ವಿಶೇಷ ಉಪನ್ಯಾಸದಲ್ಲಿ ಬಿಕಾಂ ವಿಭಾಗದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article