ಕನ್ನಡಪ್ರಭ ವಾರ್ತೆ ರಾಮನಗರ
ನಗರಸಭೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಗರಸಭೆಯ 2026-27ನೇ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಬನ್ನಿಮಹಂಕಾಳಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ₹10 ಲಕ್ಷ ರು.ಗಳ ಚೆಕ್ ಅನ್ನು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿತರಿಸಿದ ಕೆ.ಶೇಷಾದ್ರಿ, ನಾಗರಿಕರ ತೆರಿಗೆ ಹಣ ಇದಾಗಿದ್ದು, ಈ ಹಣವನ್ನು ಪೂರ್ಣವಾಗಿ ದೇಗುಲದ ಜೀರ್ಣೋದ್ಧಾರಕ್ಕೆ ವಿನಿಯೋಗ ಮಾಡುವಂತೆ ತಿಳಿಸಿದರು.
ನಗರದ ಪ್ರಧಾನ ದೇವತೆಯಾದ ಬನ್ನಿಮಹಂಕಾಳಿ ದೇವಿ ಇತಿಹಾಸ ಪ್ರಸಿದ್ಧಿಯಾಗಿದೆ. ಸಮಸ್ತ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಪುರಾತನ ದೇವಾಲಯ ಆಗಿರುವುದರಿಂದ ದೇಗುಲದ ಸಮಿತಿಯವರು ಜೀರ್ಣೋದ್ಧಾರಕ್ಕಾಗಿ ಮನವಿ ಮಾಡಿದ್ದರು.ಜನರ ಭಾವನೆಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ನಗರಸಭೆ ತನ್ನ ಆಯವ್ಯಯದಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಚಾಚುತ್ತಿದೆ. ಇದಕ್ಕೆ ನಗರಸಭೆಯ ಸರ್ವ ಸದಸ್ಯರು ಸಹಕರಿಸಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಮನಗರದ ಜನರು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದು, ಪ್ರತಿಯೊಂದು ವರ್ಗದವರು ಜನರ ಭಾವನೆಗಳಿಗೆ ಅನುಗುಮವಾಗಿ ನಡೆದುಕೊಳ್ಳಬೇಕು. ದೇವಾಲಯ, ಮಸೀದಿ, ದರ್ಗಾ, ಚರ್ಚ್ ಗಳು ಎಲ್ಲರಿಗೂ ಸೇರಿದ್ದು, ಅವುಗಳ ಅಭಿವೃದ್ಧಿಗೆ ಪರಸ್ಪರ ಸಹಕಾರ ಕೊಡಬೇಕು ಎಂದು ಕೆ.ಶೇಷಾದ್ರಿ ಹೇಳಿದರು.
ನಗರಸಭೆ ಸದಸ್ಯ ಮಂಜುನಾಥ್ ಮಾತನಾಡಿ, ನಗರಸಭೆಯಿಂದ ಜನರ ತೆರಿಗೆ ಹಣದಿಂದಲೇ ರಸ್ತೆ, ಚರಂಡಿ, ಬೀದಿ ದೀಪಗಳನ್ನು ಒದಗಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಧಾರ್ಮಿಕ ಕೇಂದ್ರಗಳು ನೆಮ್ಮದಿ ಕಲ್ಪಿಸುವ ಸ್ಥಳಗಳು. ಆಯವ್ಯಯದಲ್ಲಿ ಘೋಷಿಸಿದಂತೆ ಜನರ ತೆರಿಗೆ ಹಣವನ್ನು ಜನರ ಉಪಯೋಗಕ್ಕೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ನಿಜಾಮುದ್ದೀನ್ ಷರೀಫ್ ಮಾತನಾಡಿ, ತನ್ನ ವಾರ್ಡಿನ ವ್ಯಾಪ್ತಿಗೆ ಬರುವ ಬನ್ನಿಮಹಂಕಾಳಿ ದೇಗುಲದ ಜೀರ್ಣೋದ್ಧಾರಕ್ಕೆ ನಗರಸಭೆ ಆರ್ಥಿಕ ನೆರವು ಕಲ್ಪಿಸುತ್ತಿರುವುದು ಸಂತಸದ ವಿಷಯ. ಕರಗ ಮಹೋತ್ಸವದ ಸಂದರ್ಭದಲ್ಲಿ ದೇವಾಲಯ ಸಮಿತಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
ವರ್ತಕ ಉಮೇಶ್ ಮಾತನಾಡಿ, ರಾಮನಗರದಲ್ಲಿ ಅನೇಕ ರಾಜಕಾರಣಿಗಳು ಪಕ್ಷಪಾತ ಮಾಡದೆ ಸಹಾಯ ಹಸ್ತ ಚಾಚುತ್ತಾ ಬಂದಿದ್ದಾರೆ. ಅವರೆಲ್ಲರ ಪೈಕಿ ನಗರಸಭೆ ಅಧ್ಯಕ್ಷ ಶೇಷಾದ್ರಿ ಅಪರೂಪದಲ್ಲಿ ಅಪರೂಪದ ರಾಜಕಾರಣಿಯಾಗಿದ್ದಾರೆ. ರಾಮದೇವರ ತೇರಿನ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಿಕೊಟ್ಟರಲ್ಲದೆ, ತೇರಿಗಾಗಿ ₹1 ಲಕ್ಷ ಘೋಷಣೆ ಮಾಡಿದ್ದಾರೆ. ಸುಸಜ್ಜಿತ ರಸ್ತೆ, ಕುಡಿಯುವ ನೀರು, ಫುಡ್ ಸ್ಟ್ರೀಟ್ , ಗೋಡೆ ಗಡಿಯಾರ ನಿರ್ಮಾಣ ಸೇರಿದಂತೆ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.