ಅಕಾಲಿಕ ಮಳೆಗೆ ಅನಾವರಣಗೊಂಡ ಹತ್ತಾರು ಸಮಸ್ಯೆ

KannadaprabhaNewsNetwork |  
Published : Jan 13, 2024, 01:35 AM IST
ಚಿತ್ರ : 12ಎಂಡಿಕೆ4 : ಕಾಫಿ, ಭತ್ತ ಬೆಳೆಗಾರರೊಂದಿಗೆ ಪತ್ರಕರ್ತರ ಸಂವಾದ ಕಾರ್ಯಕ್ರಮ.  | Kannada Prabha

ಸಾರಾಂಶ

ಕಂಬಿಬಾಣೆಯ ಪ್ರಗತಿಪರ ಕೃಷಿಕ ಟಿ.ಕೆ. ಸಾಯಿಕುಮಾರ್ ಅವರ ಕಾಫಿ ತೋಟದಲ್ಲಿ ‘ಪತ್ರಕರ್ತರ ನಡಿಗೆ ಕೃಷಿಕರ ಕಡೆಗೆ’ ಎಂಬ ಸಂವಾದ ಕಾರ್ಯಕ್ರಮ ನಡೆಯಿತು. ಈ ವೇಳೆ ಕೃಷಿಕರಿಗೆ ವನ್ಯ ಜೀವಿ, ಅಕಾಲಿಕ ಮಳೆಯಿಂದಾಗಿ ಉಂಟಾದ ಸಮಸ್ಯೆಗಳ ಬಗ್ಗೆ ಸಂವಾದ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೃಷಿಕರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ ನಡುವೆ ಅಕಾಲಿಕ ಮಳೆ ಕೃಷಿಕರನ್ನು ತಲ್ಲಣಗೊಳಿಸಿದೆ. ಮಾತ್ರವಲ್ಲದೆ ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯನ್ನು ಕೂಡ ಹುಟ್ಟು ಹಾಕಿದೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಸ್ಪಂದಿಸುವಂತೆ ಹಕ್ಕೊತ್ತಾಯ ಕೇಳಿಬಂದಿದೆ.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಶುಕ್ರವಾರ ಕಂಬಿಬಾಣೆಯ ಪ್ರಗತಿಪರ ಕೃಷಿಕ ಟಿ.ಕೆ. ಸಾಯಿಕುಮಾರ್ ಅವರ ಕಾಫಿ ತೋಟದಲ್ಲಿ ‘ಪತ್ರಕರ್ತರ ನಡಿಗೆ ಕೃಷಿಕರ ಕಡೆಗೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಬೆಳೆಗಾರರು ತಮ್ಮ ಸಮಸ್ಯೆ ಹಾಗೂ ಅಕಾಲಿಕ ಮಳೆಯಿಂದ ತಾವು ಎದುರಿಸುತ್ತಿರುವ ಸವಾಲುಗಳನ್ನು ಮುಂದಿಟ್ಟರು.

ಸಂವಾದದಲ್ಲಿ ಮಾತನಾಡಿದ ಬೆಳೆಗಾರ ಟಿ.ಕೆ ಸಾಯಿಕುಮಾರ್, ಈಗಾಗಲೇ ಕೃಷಿಯ ಬೆಲೆಯ ಏರಿಳಿತ, ಸಾಲದ ಹೊರೆ, ಕಾರ್ಮಿಕರ ಕೊರತೆ, ಕಾಡಾನೆ ಸೇರಿದಂತೆ ವನ್ಯ ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿದ್ದಾರೆ. ಅದರ ಜೊತೆಗೆ ನಮ್ಮ ಅನುಭವದಲ್ಲೇ ಇಲ್ಲದ ಜನವರಿ ತಿಂಗಳ ಅಕಾಲಿಕ ಮಳೆಯಿಂದ ಕಾಫಿ ಹಣ್ಣಾಗಿ ಗಿಡದಲ್ಲಿ ಇರುವಂತೆ ಕಾಫಿ ಹೂವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಕೂಡಲೇ ಬರಬೇಕಿದೆ. ದೊಡ್ಡ ಉದ್ಯಮಿಗಳಿಗೆ ಸಾಲ ಮನ್ನಾ ಮಾಡುವ ಯಾವುದೇ ಉದ್ಯಮ ಹೂಡಿಕೆಗೆ ಕೋಟಿ ಲೆಕ್ಕದಲ್ಲಿ ಸಾಲ ನೀಡುವುದು ಮಾತ್ರವಲ್ಲದೆ ಎಲ್ಲ ರೀತಿಯ ಮೂಲ ಸೌಕರ್ಯವನ್ನು ಕಲ್ಪಿಸುತ್ತಿರುವ ಸರ್ಕಾರಿ ವ್ಯವಸ್ಥೆ ರೈತರನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಕಾಫಿ ಫಸಲಿಗೆ ಅತ್ಯುತ್ತಮ ಬೆಲೆ ಬಂದಿದ್ದರೂ ಕೂಡ ಶೇ.40ರಷ್ಟು ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಸಾಲದ ಬಡ್ಡಿ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ನಾಕೂರು ಶಿರಂಗಾಲದ ಸಮಗ್ರ ಕೃಷಿಕ ಪಿ.ಎಂ. ಬಿಜು ಮಾತನಾಡಿ ಅರಣ್ಯ ಇಲಾಖೆಯವರು ಕಾಫಿ ತೋಟಗಳಲ್ಲಿ ಮರ ಕಪಾತು ಮಾಡುವುದನ್ನು ನಿಷೇಧಿಸುತ್ತಾ ಮೊಕ್ಕದ್ದಮೆ ದಾಖಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರೋಬೆಸ್ಟಾ ಕಾಫಿ ಬೆಳೆಗೆ ನೆರಳನ್ನು ತೆಗೆಯುವ ಅಗತ್ಯತೆ ಇದ್ದು, ನೆರಳಿದ್ದಲ್ಲಿ ಇಳುವರಿ ಕಡಿಮೆಯಾಗುವ ಹಿನ್ನೆಲೆ ಮರ ಕಪಾತು ಮಾಡುವ ಅನಿವಾರ್ಯತೆ ಇದೆ ಎಂದರು.

ಕೃಷಿಕರ ಅಹವಾಲುಗಳನ್ನು ಕೇಳಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಬೆಳೆಗಾರರೊಂದಿಗೆ ಸಂವಾದ ನಡೆಸಬೇಕೆಂದು ಆಗ್ರಹಿಸಿದರು.

ಸುಂಟಿಕೊಪ್ಪ ಹೋಬಳಿಯ ಭತ್ತ ಕೃಷಿಕ ಪಟ್ಟೆಮನೆ ಉದಯ ಕುಮಾರ್ ಮಾತನಾಡಿ, ತಾನು ಮೂರು ತಳಿಯ ಭತ್ತ ಬೆಳೆಯುತ್ತಿದ್ದು, ಕಾಡು ಹಂದಿ, ಮುಳ್ಳು ಹಂದಿ ಮತ್ತು ನವಿಲುಗಳ ಕಾಟದದಿಂದಾಗಿ ಕೈಗೆ ಬಂದ ಫಸಲು ಮನೆಗೆ ಬರುತ್ತಿಲ್ಲ. ಜೊತೆಗೆ ಸುಂಟಿಕೊಪ್ಪ ನಗರ ವ್ಯಾಪ್ತಿಯ ಕೊಳಚೆ ನೀರು ಗದ್ದೆಗಳಿಗೆ ಬರುತ್ತಿದ್ದು, ಅಸಹ್ಯಕರ ವಾಸನೆಯ ಹಿನ್ನೆಲೆಯಲ್ಲಿ ಭತ್ತ ಬೆಳೆಯಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿಕರು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ಅಕಾಲಿಕ ಮಳೆಯಿಂದ ಕಷ್ಟ ನಷ್ಟ ಉಂಟಾದ ಸಂದರ್ಭದಲ್ಲಿ ಕೃಷಿಕರ ನೋವು ಆಲಿಸಲು ಯಾರೋಬ್ಬರು ಕೂಡ ಬಂದಿಲ್ಲ ಎಂದು ಬೇಸರದಿಂದ ನುಡಿದರು.ನಷ್ಟ ಪರಿಶೀಲನೆ ನಡೆದಿಲ್ಲ: ಗುಡ್ಡೆಹೊಸೂರಿನ ಪ್ರಗತಿಪರ ಭತ್ತದ ಕೃಷಿಕ ಚಂದ್ರಶೇಖರ್ ಮಾತನಾಡಿ ಐದು ಎಕರೆ ಜಾಗದಲ್ಲಿ ಭತ್ತದ ಕೃಷಿಯನ್ನು ಮಾಡುತ್ತಿದ್ದೇನೆ. ಅಕಾಲಿಕ ಮಳೆಯಿಂದ ಭತ್ತ ಹಾಗೂ ಹುಲ್ಲು ನೀರಿನಲ್ಲಿ ನೆನೆದ ಹಿನ್ನೆಲೆ ಅಪಾರ ನಷ್ಟ ಉಂಟಾಗಿದೆ. ಈ ವರೆಗೆ ಸಂಬಂಧಿಸಿದ ಇಲಾಖೆಯ ಯಾವುದೇ ಅಧಿಕಾರಿಗಳು ಬಂದಿಲ್ಲ. ಇನ್ನಾದರೂ ಅಕಾಲಿಕ ಮಳೆಯಿಂದ ಉಂಟಾದ ನಷ್ಟಕ್ಕೆ ಎಕರೆವಾರು ಕನಿಷ್ಠ ರು. 30 ಸಾವಿರ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.

ಭತ್ತ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ವಿಂಟಾಲ್ ಗೆ ರು.4 ಸಾವಿರ ನಿಗದಿಗೊಳಿಸಿದಲ್ಲಿ ಭತ್ತದ ಕೃಷಿಯತ್ತ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ, ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ಕಾಫಿ ಮತ್ತು ಭತ್ತ ಆರ್ಥಿಕ ವ್ಯವಸ್ಥೆ ಬೆನ್ನೆಲುಬಾಗಿದ್ದು, ಅದರ ಪರಿಸ್ಥಿತಿ ಹೇಗಿದೆ ಎಂಬ ಪ್ರತ್ಯಕ್ಷ ಮಾಹಿತಿಯನ್ನು ಸಂಬಂಧಿಸಿದವರಿಗೆ ತಲುಪಿಸುವ ನಿಟ್ಟಿನಲ್ಲಿ ಸಂವಾದ ಆಯೋಜಿಸಲಾಗಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಉಪಾಧ್ಯಕ್ಷ ಬಿ.ಸಿ. ದಿನೇಶ್, ಖಜಾಂಚಿ ವಿ.ಸಿ. ನವೀನ್, ನಿರ್ದೇಶಕರಾದ ಶಿವಣ್ಣ, ಗುಡ್ಡೆಮನೆ ವಿಶುಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಕಾಫಿ ತೋಟದಲ್ಲಿ ಅಕಾಲಿಕ ಮಳೆಯಿಂದ ಉಂಟಾದ ನಷ್ಟ, ಅರಳಿರುವ ಕಾಫಿ ಹೂವು, ನೆಲಕಚ್ಚಿರುವ ಕಾಫಿ, ಆನೆ ಹಾವಳಿಯಿಂದ ಉಂಟಾಗಿರುವ ನಷ್ಟದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಬೆಳೆಗಾರರೊಂದಿಗೆ ಪತ್ರಕರ್ತರು ಮಾಹಿತಿ ಪಡೆದರು. ಆತ್ಮರಕ್ಷಣೆಗೆ ಕೋವಿ ಕೊಡಿ!

ಬೆಳೆಗಾರ ಪಿ.ಎಂ. ಬಿಜು ಮಾತನಾಡಿ, ವನ್ಯ ಜೀವಿಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಬಂದೂಕು ಪರವಾನಗಿ ಹೊಂದಲು ಅರ್ಜಿ ಸಲ್ಲಿಸಿದರೆ ಪೊಲೀಸ್ ವತಿಯಿಂದ ನಿರಾಪೇಕ್ಷಣಾ ಪತ್ರ ಸಿಗುತ್ತಿಲ್ಲ. ನಾನಾ ರೀತಿಯ ದಾಖಲೆಗಳನ್ನು ಕೇಳುತ್ತಾ ಸತಾಯಿಸುತ್ತಿದ್ದಾರೆ. ಇನ್ನಾದರೂ ಬೆಳೆಗಾರರಿಗೆ ಆತ್ಮರಕ್ಷಣೆಗಾಗಿ ಕೋವಿ ಹೊಂದಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.ವನ್ಯ ಪ್ರಾಣಿಗಳು ತಿಂದು ಉಳಿಸಿದ್ದು ನಮಗೆ!

ಸಂವಾದದಲ್ಲಿ ಮಾತನಾಡಿದ ಬೆಳೆಗಾರರು, ಆನೆ, ಮಂಗ, ನವಿಲು, ಕಾಡುಹಂದಿ, ಕಾಡುಕೋಣ, ಪಕ್ಷಿಗಳು ತಿಂದು ಅವುಗಳು ಉಳಿಸಿದ ಫಸಲಿನಲ್ಲಿ ನಾವು ಜೀವನ ನಿರ್ವಹಣೆ ಮಾಡಬೇಕೆಂದು ಅಳಲು ತೋಡಿಕೊಂಡರು. ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವ ನಾಟಕೀಯ ವಿದ್ಯಾಮಾನ ನಡೆಸುತ್ತಿದ್ದು, ಅದರಿಂದ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿ ಜಾರಿ ಎಂಬ ತೂಗುಗತ್ತಿ ನಮ್ಮೆಲ್ಲರ ಮೇಲಿದ್ದು, ಮುಂದೊಂದು ದಿನ ನಾವು ಬೆಳೆಸಿದ ಫಸಲನ್ನು ಕೊಯ್ಲು ಮಾಡಲು ವಿವಿಧ ಇಲಾಖೆಗಳ ಅನುಮತಿ ಬೇಕಾಕಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು