- ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ದಾವಣಗೆರೆ ಥಲಸ್ಸೆಮಿಯಾ ಒಂದು ಅನುವಂಶಿಕ ರಕ್ತದ ಕಾಯಿಲೆಯಾಗಿದ್ದು, ಇದು ಜಾಗತಿಕವಾಗಿ ಪ್ರತಿ 10 ಸಾವಿರ ಜೀವಂತ ಜನನಗಳಲ್ಲಿ ಸರಿಸುಮಾರು ಶೇ.4.4ರ ಮೇಲೆ ಪರಿಣಾಮ ಬೀರುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಬಿ. ಕೌಜಲಗಿ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ವಿಶ್ವ ಥಲಸೆಮಿಯಾ ದಿನ ಅಂಗವಾಗಿ ಥಲಸೆಮಿಯಾಗಾಗಿ ಒಗ್ಗೂಡುವುದು ಸಮುದಾಯಗಳನ್ನು ಒಂದುಗೂಡಿಸಿ ರೋಗಿಗಳಿಗೆ ಆದ್ಯತೆ ನೀಡುವುದು ವಿಷಯವಾಗಿ ಅವರು ಮಾತನಾಡಿದರು.ಥಲಸೆಮಿಯಾ ಜನಸಾಮಾನ್ಯರು ಅಂದುಕೊಂಡಷ್ಟು ಅಪರೂಪದ ಕಾಯಿಲೆ ಅಲ್ಲ. ಹಿಮೋಗ್ಲೋಬಿನ್ ಉತ್ಪಾದನೆ ಅಡ್ಡಿಪಡಿಸಿ, ಲಕ್ಷಾಂತರ ಮಕ್ಕಳು ಜೀವನ ಪರ್ಯಂತ ರಕ್ತ ವರ್ಗಾವಣೆ ಹಾಗೂ ದುಬಾರಿ ಚಿಕಿತ್ಸೆಗಳಿಗೇ ಅವಲಂಬಿತರಾಗುವಂತೆ ಮಾಡುವ ಕಾಯಿಲೆ ಇದಾಗಿದೆ. ಇದರ ವ್ಯಾಪಕ ಪರಿಣಾಮದ ಹೊರತಾಗಿಯೂ ಇದರ ಬಗ್ಗೆ ಜನರಿಗೆ ಅರಿವಿನ ಕೊರತೆ ಇದೆ. ಮೇ 8ರಂದು ವಿಶ್ವ ಥಲಸ್ಸೆಮಿಯಾ ದಿನ ಆಚರಿಸಲಾಗುತ್ತದೆ. ಟಿಐಎಫ್ ಸಂಸ್ಥಾಪಕರ ಮಗ ಜಾರ್ಜ್ ಎಂಗಲ್ಜೋಸ್ ಥಲಸ್ಸೆಮಿಯಾದಿಂದ ಬಳಲುತ್ತಿದ್ದು, ಮೇ 8ಕ್ಕೆ ಆತ ನಿಧನರಾದರು. ಈ ಹಿನ್ನೆಲೆಯಲ್ಲಿ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಥಲಸ್ಸೆಮಿಯಾ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ, ಹಿರಿಯ ಮಕ್ಕಳ ತಜ್ಞ ಡಾ.ಗುರುಪ್ರಸಾದ, ಮಕ್ಕಳ ತಜ್ಞರಾದ ಡಾ.ಬಾಣಾಪುರಮಠ, ಡಾ.ಶೋಭಾ ಬಾಣಾಪುರಮಠ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ಮೃತ್ಯುಂಜಯ, ಡಾ.ರೇವಪ್ಪ, ಆಸ್ಪತ್ರೆ ಸಿಬ್ಬಂದಿಯಾದ ರೊಳ್ಳಿ ಮಂಜುನಾಥ, ಅಂಜಲಿ ಸೇರಿದಂತೆ ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಇದ್ದರು.
- - --22ಕೆಡಿವಿಜಿ15: ಕಾರ್ಯಾಗಾರದಲ್ಲಿ ಡಾ. ಎಂ.ಬಿ. ಕೌಜಲಗಿ ಥೆಲಸ್ಸೆಮಿಯಾ ರೋಗದ ಕುರಿತು ಮಾತನಾಡಿದರು.