ಆತ್ಮವಿಶ್ವಾಸಕ್ಕೆ ವಿಕಲಚೇತನರೇ ಸ್ಫೂರ್ತಿದಾಯಕವಾಗುತ್ತಿರುವುದು ಶ್ಲಾಘನೀಯ, ನಿಮ್ಮ ನೋಡಿ ಇತರರು ಕಲಿಯುವುದು ಸಾಕಷ್ಟಿದೆ, ನಿಮ್ಮ ಒಗ್ಗಟ್ಟ ಎಲ್ಲರಿಗೂ ಮಾದರಿ, ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗುತ್ತದೆ, ಕ್ರೀಡಾ ಮನೋಭಾವದ ಸ್ಫರ್ಧೆಗಳು ಉತ್ತಮವಾಗಿ ನಡೆದಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಕಲಚೇತನರು ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡುತ್ತಿರುವುದು ಸ್ಫೂರ್ತಿದಾಯಕ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ಕುಮಾರ್ ಹೇಳಿದರು.
ನಗರದಲ್ಲಿರುವ ಸರ್.ಎಂ.ವಿ.ಕ್ರೀಡಾಂಗಣದಲ್ಲಿ ಕರ್ನಾಟಕ ಸ್ಫೋರ್ಟ್ಸ್ ಫೆಡರೇಷನ್ ಆಫ್ ದಿ ಡಿಯಾಫ್, ಜಿಲ್ಲಾ ಕಿವುಡರ ಸಂಘ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಕ್ಷೀರಸಾಗರ ಮಿತ್ರಕೂಟ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಕಿವುಡರ ಟಿ-೨೦ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಆತ್ಮವಿಶ್ವಾಸಕ್ಕೆ ವಿಕಲಚೇತನರೇ ಸ್ಫೂರ್ತಿದಾಯಕವಾಗುತ್ತಿರುವುದು ಶ್ಲಾಘನೀಯ, ನಿಮ್ಮ ನೋಡಿ ಇತರರು ಕಲಿಯುವುದು ಸಾಕಷ್ಟಿದೆ, ನಿಮ್ಮ ಒಗ್ಗಟ್ಟ ಎಲ್ಲರಿಗೂ ಮಾದರಿ, ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗುತ್ತದೆ, ಕ್ರೀಡಾ ಮನೋಭಾವದ ಸ್ಫರ್ಧೆಗಳು ಉತ್ತಮವಾಗಿ ನಡೆದಿವೆ ಎಂದರು.
ಎಲ್ಲಾ ಕ್ರೀಡೆಗಳು ಮನೋಲ್ಲಾಸ ನೀಡುತ್ತವೆ, ಆರೋಗ್ಯ ಹೆಚ್ಚಿಸುತ್ತವೆ, ದೈಹಿಕ ಸಾಮರ್ಥ್ಯ ಉತ್ತಮವಾಗಿರುವಂತೆ ಕಾಪಾಡುತ್ತವೆ, ಎಲ್ಲರಿಗೂ ಕ್ರೀಡೆ ಅತ್ಯವಶ್ಯಕ, ಅದರಲ್ಲೂ ವಿಶೇಷಚೇತನರಿಗೆ ಕ್ರೀಡೆಗಳು ವಿಶ್ವಮಾನ್ಯತೆ ತಂದುಕೊಟ್ಟಿವೆ ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್, ವಿಕಲಚೇತನರ ಸಾಮರ್ಥ್ಯ ವಿಶ್ವಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅವರಷ್ಟು ಅತ್ಮವಿಶ್ವಾಸ್ವಿಗಳು ಸಿಗಲು ಸಾಧ್ಯವಿಲ್ಲ, ಅವರಿಂದ ಕಲಿಯುವ ಪಾಠ ಬೇಕಾದಷ್ಟಿದೆ ಎಂದು ನುಡಿದರು.
ಮಂಡ್ಯದಲ್ಲಿ ೩ ದಿನಗಳ ಕಾಲ ನಡೆದ ವಿಶೇಷಚೇತನರಲ್ಲಿನ ಕಿವುಡರ ಕ್ರಿಕೆಟ್ ಪಂದ್ಯ ಯಾವುದೇ ಸದ್ದು, ಗದ್ದಲವಿಲ್ಲದೆ, ಅಬ್ಬರವಿಲ್ಲದೆ ಶಾಂತಿಯಾಗಿ ನಡೆದ ಮಾದರಿ ಕ್ರಿಕೆಟ್ ಆಟಗಾರರು ಲೋಕಾರ್ಪಣೆಗೊಂಡರು ಎಂದರು.
ಲಯನ್ಸ್ ಸಂಸ್ಥೆ ಪದಾಧಿಕಾರಿಗಳ ಸೇವೆಯಲ್ಲಿ ವಿಶೇಷಚೇತನರಿಗೂ ಸಂದಿದೆ, ಅನ್ನದಾಸೋಹ ಪರಬ್ರಹ್ಮಸೇವೆ ಎನ್ನುತ್ತಾರೆ, ಹಸಿದವರಿಗೆ ಆಹಾರ-ನೀರುನೀಡುವುದು ನಮ್ಮ ಸಂಪ್ರದಾಯ, ಇಂತಹ ಸೇವೆಯಲ್ಲಿ ಮಂಡ್ಯದವರು ಮುಂದಿರುತ್ತಾರೆ ಎಂದರು.
ಮೂರು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲ ೨೫ಕ್ಕೂ ಹೆಚ್ಚು ಜಿಲ್ಲೆಗಳಿಂದ ೪೦೦ ಮಂದಿ ಆಟಗಾರರು ಪಾಲ್ಗೊಂಡು, ಗೆಲುವಿಗಾಗಿ ಸೆಣಸಾಡಿ ಬಳ್ಳಾರಿ ತಂಡ ಪ್ರಥಮ, ಕೊಡಗು ತಂಡ ದ್ವಿತೀಯ, ಮೈಸೂರು ತಂಡ ತೃತೀಯ ಸ್ಥಾನಗಳನ್ನು ಪಡೆದು ಬಹುಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ಮಾಜಿ ರಾಜ್ಯಪಾಲ ಡಾ.ಜಿ.ಎ.ರಮೇಶ್, ಪಿಇಟಿ ಅಧ್ಯಕ್ಷ ವಿಜಯ ಆನಂದ್, ಕ್ಷೀರಸಾಗರ ಮಿತ್ರಕೂಟ ಪೋಷಕ ಡಿ.ಶಿವರಾಜು, ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಕೆ.ಎಸ್.ಎಫ್.ಡಿ. ಕಾರ್ಯದರ್ಶಿ ಜಿ.ಎಸ್.ನವೀನ್ಕುಮಾರ್, ಕಿವುಡರ ಕ್ರೀಡಾಕೂಟ ಉಪಾಧ್ಯಕ್ಷ ಕಡಪ ಬಿ.ಗುಡದಿನ್ನಿ, ಜಿಲ್ಲಾ ಕಿವುಡರ ಸಂಘದ ಗೌರವಾಧ್ಯಕ್ಷ ಎಂ.ಎಸ್.ಕುಮಾರ್, ಅಧ್ಯಕ್ಷ ಆರ್.ಯೋಗೇಶ್, ಉಪಾಧ್ಯಕ್ಷ ಬಿ.ವೆಂಕಟೇಶಪ್ರಸಾದ್, ಕಾರ್ಯದರ್ಶಿ ನಂದೀಶ್, ಚರಣ್, ಗೌತಮ್, ಮಹೇಶ್, ಅರವಿಂದ್, ಚೇತನ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.