ಕನ್ನಡಪ್ರಭ ವಾರ್ತೆ ನಾಪೋಕ್ಲು
ಶುಕ್ರವಾರ ಮಧ್ಯಾಹ್ನ ಪೈಂಗುತ್ತಿ ಹಾಗೂ ಸಂಜೆ ಶ್ರೀ ಮುತ್ತಪ್ಪ ದೇವರ ಕಳಸ ನಡೆಯಿತು.ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡೆಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ಆಗಮನವಾಯಿತು. ಈ ಸಂದರ್ಭ ಸಿಡಿಮದ್ದು ಪ್ರದರ್ಶನ, ಕೇರಳದ ನೃತ್ಯ , ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆದು ಜನಮನ ಆಕರ್ಷಿಸಿದವು, ರಾತ್ರಿ ವೆಳ್ಳಾಟಂ ಬಳಿಕ ಕುಟ್ಟಿಚಾತ ಮತ್ತು ಗುಳಿಗ ದೇವರ ವೆಳ್ಳಾಟಂ ನಡೆದವು.
ಉತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಗಣಪತಿ ಹೋಮ ಮತ್ತು ಶುದ್ಧ ಕಳಸವನ್ನು ಕೇರಳ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರಿಂದ ನಡೆಸಲಾಯಿತು. ರಾತ್ರಿ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಿತು. ಶನಿವಾರ ಗುಳಿಗ ಕೋಲ , ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪ ಮುತ್ತಪ್ಪ ತೆರೆ ಜರುಗಿದವು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದಪಡೆದುಕೊಂಡು ಧನ್ಯತಾಭಾವ ಹೊಂದಿದರು.