ಹಾವೇರಿ:ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕುರ್ಚಿಯ ಗುದ್ದಾಟ ಬಜೆಟ್ ನಂತರ ತೀವ್ರವಾಗಿ ಅಂತಿಮ ಘಟಕ್ಕೆ ತಲುಪಲಿದೆ. ಅದು ಕಾದಾಟವೇ ಆಗಲಿದ್ದು, ಸಂಧಾನ ಆಗಲು ಸಾಧ್ಯವಿಲ್ಲ. ಅದು ಯಾವ ರೀತಿ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಮೇಲೆ ಜನರ ವಿಶ್ವಾಸ ಸಂಪೂರ್ಣ ಹೋಗಿದೆ. ಜನ ಈ ಸರ್ಕಾರ ಕಿತ್ತೊಗೆಯಲು ಕಾಯುತ್ತಿದ್ದಾರೆ. ಈಗ ಅದರ ಕಾವು ಶಾಸಕರಿಗೆ ಮುಟ್ಟುತ್ತಿದೆ. ಅನಿಶ್ಚಿತೆಯ ವಾತಾವರಣದಿಂದ ತಾವು ಮತ್ತೊಮ್ಮೆ ಆರಿಸಿ ಬರುವುದಿಲ್ಲ ಎನ್ನುವ ಆತಂಕ ಶಾಸಕರಿಗಿದೆ. ಕೆಲವರು ವಿದೇಶಕ್ಕೆ, ಕೆಲವರು ರೆಸಾರ್ಟ್ಗೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಸಲು ಯಾವುದೇ ಶಕ್ತಿ ಇಲ್ಲ. ಬರುವಂತಹ ದಿನಗಳಲ್ಲಿ ಇವರನ್ನು ಜನರು ವಿದೇಶಕ್ಕಾದರೂ, ದೆಹಲಿಗಾದರೂ ಕರ್ನಾಟಕದ ಚುಕ್ಕಾಣಿಯನ್ನು ಕೈಬಿಡಿಸಿ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.ಶಿವಮೊಗ್ಗದಲ್ಲಿ ನಡೆದ ಅಪ್ರಾಪ್ತ ಬಾಲಕನ ಕೊಲೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದ ಘಟನೆ ಮನಸ್ಸಿಗೆ ಅತ್ಯಂತ ನೋವಾಗುವಂತಹದ್ದು, ಸಣ್ಣ ವಯಸ್ಸಿನಲ್ಲಿ ಗಾಂಜಾ ಸೇದಿದ್ದಾರೆ ಎನ್ನುವ ಸಂಶಯ ಶುರುವಾಗಿದೆ. ಕರ್ನಾಟಕದಲ್ಲಿ ಗಾಂಜಾ ಬಳಕೆ ಶಾಲೆ ಮಟ್ಟಕ್ಕೆ ಹೋಗಿದೆ ಎಂದು ನಾವು ಹೇಳುತ್ತಿದ್ದೆವು ಅದು ಸತ್ಯವಾಗಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಣ್ಣ ಮಕ್ಕಳಲ್ಲಿ ಈ ರೀತಿಯ ಕೋಮು ಭಾವನೆ ಮೂಡಿದರೆ ಸಮಾಜ ಮುಂದೆ ಹೇಗೆ ಹೋಗುತ್ತದೆ. ಇವರು ಕೇವಲ ಕುರ್ಚಿ ಸಲುವಾಗಿ ಕಚ್ಚಾಡುತ್ತ ಕುಳಿತರೆ ಸಮಾಜ ಹೇಗೆ ನಡೆಯುತ್ತದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಅಷ್ಟೇ ಅಲ್ಲ, ಸಾಮಾಜಿಕ ಸಾಮರಸ್ಯ ಕಾಯ್ದುಕೊಂಡು ಹೋಗಲು ವಿಫಲವಾಗಿದೆ ಎಂದು ಆರೋಪಿಸಿದರು.ಬಿಎಸ್ವೈ ಮಾರ್ಗದರ್ಶನ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯ ಅತ್ಯಂತ ಹಿರಿಯ ನಾಯಕರು. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಧೀಮಂತ ನಾಯಕರು, ಬಿಜೆಪಿಯನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಅವರು ಯಾತಕ್ಕಾಗಿ ಹೋರಾಟ ಮಾಡಿದ್ದರು, ಅದನ್ನು ಅಧಿಕಾರದಲ್ಲಿದ್ದಾಗ ಮಾಡಿದ್ದಾರೆ. ಹೀಗಾಗಿ ಜನ ಮಾನಸದಲ್ಲಿ ಉಳಿಸಿದ್ದಾರೆ. ಅವರಲ್ಲಿರುವ ಛಲ, ಉತ್ಸಾಹ ನೋಡಿದರೆ ಅವರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಅವರೇ ಪಕ್ಷ ಕಟ್ಟಲು ಮತ್ತೆ ರಾಜ್ಯ ಸುತ್ತುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಅಂತ ಹೇಳಿದ್ದಾರೆ. ನಾವೆಲ್ಲರೂ ಸಂತೋಷದಿಂದ ಬಿಜೆಪಿ ಕಟ್ಟಲು ಅವರ ಆಶೀರ್ವಾದ ಮಾರ್ಗದರ್ಶನ ಪಡೆದುಕೊಳ್ಳುತ್ತೇವೆ. ಅವರೊಂದು ಆಸ್ತಿ ಮತ್ತು ಶಕ್ತಿ ಅದನ್ನು ಬಳಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದರು.
ಬಿಜೆಪಿ ತೊರೆದಿರುವ ನಾಯಕರನ್ನು ಘರ್ ವಾಪಸಿ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗುತ್ತದೆ. ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚಿಸಿ ಅಂತಿಮವಾಗಿ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರು ತೀರ್ಮಾನ ಮಾಡುತ್ತಾರೆ, 2028ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರಲು ಏನೆಲ್ಲ ಕ್ರಮ ಕೈಗೊಳ್ಳಬೇಕೊ ಅದನ್ನು ಪಕ್ಷ ಮಾಡುತ್ತದೆ ಎಂದು ಹೇಳಿದರು.