ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ
ವಿದ್ಯಾರ್ಥಿಗಳು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಂದೆ-ತಾಯಿ, ಕಲಿಸಿದ ಗುರುಗಳನ್ನು ಮರೆಯಬಾರದು. ತಂದೆ-ತಾಯಿ ಹಾಗೂ ಗುರುಶಿಷ್ಯರ ಬಾಂಧವ್ಯ ಅನನ್ಯವಾದದ್ದು ಎಂದು ನಿವೃತ್ತ ಶಿಕ್ಷಕ ಕರಿಬಸವಯ್ಯ ಹೇಳಿದರು.
ಇಲ್ಲಿನ ಅಮ್ಮ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ೧೯೯೫-೯೬ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಆಧುನಿಕ ಜೀವನ ಶೈಲಿಯ ಕಾರಣಕ್ಕೆ ಸಂಬಂಧಗಳು ಕುಸಿಯಬಾರದು. ಮುಗ್ಧ ಮಗುವಾಗಿ ಈ ಶಾಲೆಗೆ ಬಂದು ಭವಿಷ್ಯ ರೂಪಿಸಿಕೊಂಡು ಸಮಾಜದ ಉನ್ನತ ಹುದ್ದೆ ಅಲಂಕರಿಸಿದ ಎಲ್ಲರ ಬಾಳು ಹಸನಾಗಲಿ. ಪರಿಪಕ್ವ ವ್ಯಕ್ತಿತ್ವ ನಿಮ್ಮದಾಗಲಿ. ಅಕ್ಷರ ದೀಪ ಬೆಳಗಿಸಿಕೊಂಡ ಮುಖದಲ್ಲಿ ಸದಾ ಮಂದಹಾಸ ಮೂಡಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಶಾಲೆ ಉಪ ಪ್ರಾಚಾರ್ಯ ಶರಣಪ್ಪ ಸೋಮಲಾಪುರ ಮಾತನಾಡಿದರು.
ಪಿಡಿಒ ರಾಮುನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಹೊಳಗುಂದಿ, ವೀರನಗೌಡ ಬೇವಿನಾಳ, ಹನುಮಂತಪ್ಪ ಐಲಿ, ಟಿ.ಶಿವಕುಮಾರ್, ವಾದಿರಾಜ್ ಕುಲಕರ್ಣಿ, ಸಿದ್ದಯ್ಯಸ್ವಾಮಿ, ಶರಣಪ್ಪ ಕಾಯಿಗಡ್ಡಿ, ಮಲ್ಲಿಕಾರ್ಜುನ ಡೈರಿ, ಮೌನೇಶ ಬಡಿಗೇರ್, ಪರಶುರಾಮ್ ಹುನುಗುಂದ, ಕೃಷ್ಣ ಜೂರಟಗಿ, ಉಮೇಶ ಚೆನ್ನಮ್ಮ ಹಿರೇಮಠ, ಶ್ರೀಲಕ್ಷ್ಮೀ ಸೇರಿದಂತೆ ಇತರರು ಇದ್ದರು. ಉಮಾದೇವಿ, ಚಂದ್ರಕಲಾ ನಿರ್ವಹಿಸಿದರು.