‍ಪುಸ್ತಕೋದ್ಯಮ ಹೆಸರಿಗೆ ಮಾತ್ರವೇ ಉದ್ಯಮವಾಗಿದೆ: ವೀರಕಪುತ್ರ ಶ್ರೀನಿವಾಸ

KannadaprabhaNewsNetwork |  
Published : Jul 15, 2025, 01:00 AM IST
34 | Kannada Prabha

ಸಾರಾಂಶ

ಜನಸಾಮಾನ್ಯರ ಕಣ್ಣಲ್ಲಿ ಬರಹಗಾರ ಬಡವನಾಗಿರುತ್ತಾನೆ. ಜೋಳಿಗೆ, ಜುಬ್ಬ ಧರಿಸಿರುತ್ತಾನೆ ಎಂಬ ಕಲ್ಪನೆಗಳೇ ಇವೆ. ಅವನ ಸೃಜನಶೀಲತೆಗೆ ತಕ್ಕ ಮನ್ನಣೆ, ಹಣ, ಆದಾಯವು ಸಿಗಬೇಕು. ಸಾಹಿತ್ಯ ಲೋಕದ ಹೊಸ ಪುಸ್ತಕಗಳು ಪ್ರತಿಯೊಬ್ಬ ಓದುಗನಿಗೂ ತಲುಪಬೇಕು. ಹುಡುಕಿಕೊಂಡು ಅಲೆಯುವಂತಾಗಬಾರದು. ಎಲ್ಲಾ ರೀತಿಯ ಬರಹಗಳು ಕನ್ನಡಿಗನಿಗೆ ಸಿಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಎಲ್ಲಾ ಉದ್ಯಮಗಳು ದೊಡ್ಡದಾಗಿ ಬೆಳೆಯುತ್ತಿವೆ. ಆದರೆ, ‍ಪುಸ್ತಕೋದ್ಯಮ ಹೆಸರಿಗೆ ಮಾತ್ರವೇ ಉದ್ಯಮವಾಗಿದೆ ಎಂದು ವೀರಲೋಕ ಬುಕ್ಸ್ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ತಿಳಿಸಿದರು.

ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಚಾರು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಅನುಭೂತಿ ಮೈಸೂರು ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ವೀರಲೋಕ ಪ್ರಕಾಶನದ 6 ಪುಸ್ತಕಗಳನ್ನು ಮರುಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಸಾಮಾನ್ಯರ ಕಣ್ಣಲ್ಲಿ ಬರಹಗಾರ ಬಡವನಾಗಿರುತ್ತಾನೆ. ಜೋಳಿಗೆ, ಜುಬ್ಬ ಧರಿಸಿರುತ್ತಾನೆ ಎಂಬ ಕಲ್ಪನೆಗಳೇ ಇವೆ. ಅವನ ಸೃಜನಶೀಲತೆಗೆ ತಕ್ಕ ಮನ್ನಣೆ, ಹಣ, ಆದಾಯವು ಸಿಗಬೇಕು. ಸಾಹಿತ್ಯ ಲೋಕದ ಹೊಸ ಪುಸ್ತಕಗಳು ಪ್ರತಿಯೊಬ್ಬ ಓದುಗನಿಗೂ ತಲುಪಬೇಕು. ಹುಡುಕಿಕೊಂಡು ಅಲೆಯುವಂತಾಗಬಾರದು. ಎಲ್ಲಾ ರೀತಿಯ ಬರಹಗಳು ಕನ್ನಡಿಗನಿಗೆ ಸಿಗಬೇಕು ಎಂದರು.

ಯುವ ಜನತೆಗೆ ಮನರಂಜನೆ ವಿಪುಲವಾಗಿ ಸಿಗುತ್ತಿದೆ. ಸಾಹಿತ್ಯ ರುಚಿ, ಓದಿನ ಸುಖವು ಮರೆತು ಹೋಗಿದೆ. ರೀಲ್ಸ್‌, ವಿಡಿಯೊಗಳ ಹಿಂದೆ ಬಿದ್ದಿದ್ದಾರೆ. ಜ್ಞಾನವು ಪುಸ್ತಕಗಳಿಂದ ಮಾತ್ರವೇ ಸಿಗುತ್ತದೆ. ಮಕ್ಕಳಿಗೆ ಓದುವ ಅಭ್ಯಾಸವನ್ನು ಪೋಷಕರು ಮಾಡಿಸಬೇಕು ಎಂದರು.

ಲಕ್ಷ್ಮಣ ಕೊಡಸೆ ಅವರ ‘ಪತ್ರಕರ್ತನ ಪಯಣ’ ಅನುಭವ ಕಥನ, ರಾಗಂ- ಸುಪಾರಿ ಸ್ವಾಮಿ ಮತ್ತು ಸಕೀನಾ- ಕಥಾ ಸಂಕಲನ, ಡಾ. ಸಂತೋಷ್‌ ಹಾನಗಲ್ ಸಂಪಾದಕತ್ವದ- ‘ಭಾಷೆ- ಬದುಕು’, ಗಿರಿಜಾ ರೆಕ್ವ- ‘ದೇವ ಸನ್ನಿಧಿ’, ಅಕ್ಷತಾ ಪಾಂಡವಪುರ– ’ರುಚಿಗೆ ತಕ್ಕಷ್ಟು...?’ ಮತ್ತು ಆರ್‌.ಬಿ. ಗುರುಬಸವರಾಜ್ ಅವರ ‘ಏನಾಗುತ್ತೆ ಗುರು?’ ಕೃತಿಗಳನ್ನು ಮರು ಬಿಡುಗಡೆ ಮಾಡಲಾಯಿತು. ಈ ಕೃತಿಗಳ ಕುರಿತು ಡಾ. ವಿನೋದ, ಜಿ. ಸೀತಾರಾಂ, ಎಚ್.ಎಸ್. ಮಧುರಾಣಿ, ಡಾ. ತ್ರಿವೇಣಿ, ಕುಸುಮಾ ಆಯರಹಳ್ಳಿ, ದಿವಿಜ ಭಾರದ್ವಾಜ್ ಮಾತನಾಡಿದರು.

ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಡಿ. ಶೀಲಾಕುಮಾರಿ, ರಂಗಕರ್ಮಿ ಎಸ್. ರಾಮನಾಥ, ಶ್ರೀವಿದ್ಯಾ ಕಾಮತ್, ಕೃತಿಗಳ ಲೇಖಕರು ಇದ್ದರು.

ಬ್ಯಾಂಕಿಂಗ್‌ ಪರೀಕ್ಷೆಗಳ ಉಚಿತ ಪರಿಚಯ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೃಷಿಕ್‌ ಸರ್ವೋದಯ ಫೌಂಡೇಷನ್‌ ಬ್ಯಾಂಕಿಂಗ್‌ ಪರೀಕ್ಷೆಗಳ ಉಚಿತ ಪರಿಚಯ ಕಾರ್ಯಾಗಾರವನ್ನು ವಿಜಯನಗರ 2ನೇ ಹಂತದ ಕೃಷಿಕ್‌ ಸರ್ವೋದಯ ಭವನದಲ್ಲಿ ಆಯೋಜಿಸಿತ್ತು.

ಸಂಸ್ಥೆ ಕಾರ್ಯದರ್ಶಿ ಎಚ್‌. ಕಿಶೋರ್‌ ಚಂದ್ರ ಸ್ವಾಗತಿಸಿ, ಸಂಸ್ಥೆಯ ಸ್ಥಾಪನೆಯ ಉದ್ದೇಶ ವಿವರಿಸಿದರು. ಬಹುತೇಕ ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಘಲ ತರಬೇತಿ ನೀಡುತ್ತಿರುವುದಾಗಿ ಹೇಳಿದರು.

ಡಾ.ಎಸ್‌.ಟಿ. ರಾಮಚಂದ್ರ ಅವರು, ಬ್ಯಾಂಕ್‌ಉದ್ಯೋಗದ ಅವಕಾಶಗಳು, ಪರೀಕ್ಷಾ ತಯಾರಿಯ ಮಾರ್ಗಸೂಚಿ ಮತ್ತು ಯಶಸ್ಸಿಗೆ ಅಗತ್ಯವಿರುವ ತಂತ್ರಗಳನ್ನು ವಿವರಿಸಿದರು.

ಪ್ರೊ.ಎನ್‌.ಎಸ್‌. ರಾಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ಕೆ.ಎಸ್‌.ಎಫ್‌ ನ ಬಿಕಾಂ ಹಾಗೂ ಬಿಸಿಎ ಕೋರ್ಸ್‌ ಗಳಿಗೆ ಸಮನ್ವಿತ ತರಬೇತಿ ಸೌಲಭ್ಯವನ್ನು ಪೂರ್ತಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಯೂನಿಯನ್‌ ಬ್ಯಾಂಕ್‌ಆಫ್‌ಇಂಡಿಯಾದ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದ ಎಸ್‌. ಜೀವಿತಾ ಅವರನ್ನು ಗೌರವಿಸಲಾಯಿತು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನ ಪ್ರೊಬೇಷನರಿ ಅಧಿಕಾರಿ ಎಸ್‌.ಡಿ. ಸೋಮಶೇಖರ್‌ಅವರು ಇದ್ದರು.

ಪ್ರೊ.ಬಿ. ಶಂಕರ್‌, ವೈ.ಕೆ. ಕೆಂಚೇಗೌಡ, ಎಸ್‌.ವಿ. ಗೌಡಪ್ಪ, ಎಸ್‌.ವಿ. ಚಂದ್ರೇಗೌಡ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ