ಹೈದರಾಲಿಯಿಂದ ಕೋಟೆ ರಕ್ಷಿಸಿದ ವೀರ ಮಹಿಳೆ ಓಬವ್ವ: ತಹಸಿಲ್ದಾರ್ ನಂದಕುಮಾರ್

KannadaprabhaNewsNetwork | Published : Nov 13, 2024 12:46 AM

ಸಾರಾಂಶ

ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ದಾಳಿಯಿಂದ ತಪ್ಪಿಸಿದ ವೀರ ವನಿತೆ ಒನಕೆ ಓಬವ್ವ ಅವಳ ಸಾಹಸ ಮತ್ತು ಶೌರ್ಯದಿಂದ ಚಿತ್ರದುರ್ಗದ ಕೋಟೆ ಹೈದರಾಳಿಯ ಕೈ ವಶವಾಗುವುದನ್ನ ತಪ್ಪಿಸಿದರು ಎಂದು ತಹಸಿಲ್ದಾರ್ ಸಿ.ಪಿ.ನಂದಕುಮಾರ್ ತಿಳಿಸಿದರು. ಆಲೂರಿನಲ್ಲಿ ಓಬವ್ವ ಜಯಂತಿಯಲ್ಲಿ ಮಾತನಾಡಿದರು.

ವೀರ ವನಿತೆ ಓಬವ್ವ ಜಯಂತಿ । ಛಲವಾದಿ ಸಮುದಾಯ ಸಾಧನೆ ಮಾಡಿದವರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಆಲೂರು

ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ದಾಳಿಯಿಂದ ತಪ್ಪಿಸಿದ ವೀರ ವನಿತೆ ಒನಕೆ ಓಬವ್ವ ಅವಳ ಸಾಹಸ ಮತ್ತು ಶೌರ್ಯದಿಂದ ಚಿತ್ರದುರ್ಗದ ಕೋಟೆ ಹೈದರಾಳಿಯ ಕೈ ವಶವಾಗುವುದನ್ನ ತಪ್ಪಿಸಿದರು ಎಂದು ತಹಸಿಲ್ದಾರ್ ಸಿ.ಪಿ.ನಂದಕುಮಾರ್ ತಿಳಿಸಿದರು

ಛಲವಾದಿ ಮಹಾಸಭಾ ಒಕ್ಕೂಟ ಆಲೂರು ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ವೀರ ವನಿತೆ ವನಕೆ ಓಬವ್ವ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೈದರಾಲಿಯು ದುರ್ಗವನ್ನು ವಶಪಡಿಸಿಕೊಳ್ಳಲು ಸದಾ ತವಕಿಸುತ್ತಿದ್ದ. ಕ್ರಿ.ಶ. 1762, 1774, 1777 ಹೀಗೆ ಸತತವಾಗಿ ಮೂರು ಬಾರಿ ದಂಡೆತ್ತಿ ಬಂದು, ನಿರಾಶನಾಗಿ ಹಿಂದಿರುಗಿದ್ದ. 1779ರಲ್ಲಿ ನೇರವಾಗಿ ಕಾದಾಡುವ ಬದಲು ಕುಟಿಲೋಪಾಯದಿಂದ ಕೋಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿ ಗೂಢಚಾರರನ್ನು ನೇಮಿಸಿದ. ವಾಯವ್ಯ ದಿಕ್ಕಿನಲ್ಲಿ ಕೋಟೆಯ ಸಾಲಲ್ಲೊಂದು ಕಳ್ಳಗಿಂಡಿ ಕಂಡಾಗ ಸುಲಭವಾಗಿ ಒಳಗೆ ನುಸುಳುವ ಸಂಚು ರೂಪಿಸಿ ಸೇನೆಯನ್ನು ಕಳುಹಿಸಿದ ನರಿ ಬುದ್ಧಿಯವ ಎಂದು ಹೇಳಿದರು.

ಒಬ್ಬರು ಮಾತ್ರವೇ ನುಸುಳಬಹುದಾದ ಕಿಂಡಿಯ ಬಳಿಯೇ ಓಬವ್ವೆಯ ಮನೆ. ಮಧ್ಯಾಹ್ನದ ವೇಳೆ ಆಕೆಯ ಪತಿ ಕೋಟೆಯ ಕಾವಲಿನಲ್ಲಿ ನಿರತನಾಗಿದ್ದುದು ದೂರದ ಕಹಳೆ ಬತೇರಿಯ ಮೇಲೆ. ಇತ್ತ ಹೈದರಾಲಿಯ ಸೇನಾ ಪಡೆ ಹೊಂಚು ಹಾಕಿ ಕಿಂಡಿಯ ಮೂಲಕ ಕೋಟೆಯ ಒಳ ನುಸುಳಲು ಸಜ್ಜಾಯಿತು. ಮನೆಯಲ್ಲಿ ಅಡುಗೆ ಮಾಡಿಟ್ಟು ಗಂಡನ ಬರುವಿಕೆಗಾಗಿ ಕಾಯುತ್ತಿದ್ದ ಓಬವ್ವೆ, ಗಂಡ ಬರುವುದು ತಡವಾದ್ದರಿಂದ ಏನು ತುರ್ತು ಇದೆಯೋ ಎಂದು ಭಾವಿಸಿ ಮಗುವನ್ನು ಮಲಗಿಸಿ, ನೆರೆಯ ಮನೆಯವರಿಂದ ಕಾಳು ಕುಟ್ಟಲು ತಂದಿದ್ದ ಒನಕೆಯನ್ನು ಕೊಟ್ಟು ಬರಲು ಹೊರಟಳು. ಕಳ್ಳ ಕಿಂಡಿಯ ಮುಂದೆ ಹಾದು ಹೋಗುವಾಗ ಅಸ್ಪಷ್ಟ ಮಾತುಗಳು ಕೇಳಿ ಬಂದವಲ್ಲದೆ ಕತ್ತಿ ಗುರಾಣಿಗಳ ಶಬ್ದ, ಕುದುರೆಗಳ ಕಲರವ ಕೇಳಿ ಬಂದಾಗ ಜಾಗೃತವಾದಳು. ಕಳ್ಳಗಿಂಡಿಯತ್ತ ಬಾಗಿ ನೋಡಿದಾಗ ಒಬ್ಬ ನುಸುಳುತ್ತಿರುವುದು ಗೋಚರವಾಯಿತು. ಅವನ ಹಿಂದೆ ಹಲವರು ಕಂಡಾಗ ಇದು ಶತ್ರುಗಳ ಹುನ್ನಾರವೆಂದು ಯೋಚಿಸಿ, ಸಮಯ ವ್ಯರ್ಥ ಮಾಡದೆ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ, ವೀರಗಚ್ಚೆ ಹಾಕಿ ತನ್ನ ಕೈಯಲ್ಲಿದ್ದ ಒನಕೆಯಿಂದಲೇ ಶತ್ರುಗಳ ತಲೆ ಒಡೆಯಲು ಸನ್ನದ್ಧಳಾಗಿ ನಿಂತಳು. ಇವಳ ಕೆಚ್ಚೆದೆಯ ಶೌರ್ಯವು ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಮಾಹಿತಿ ನೀಡಿದರು.

ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಎ.ಟಿ.ಮಲ್ಲೇಶ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಹಲವಾರು ವೀರ ವನಿತೆಯರು ರಾಜ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅದರಲ್ಲಿ ಒನಕೆ ಓಬವ್ವ ಕೂಡ ಒಬ್ಬಳಾಗಿದ್ದು ಹೈದರಾಲಿಯ ಸೈನ್ಯವು ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಸುತ್ತುವರೆದಂಥ ಸಂದರ್ಭದಲ್ಲಿ ಕೋಟಿಯ ಕಾವಲುಗಾರನಾದ ಗಂಡನು ಊಟ ಮಾಡುವ ಸಂದರ್ಭದಲ್ಲಿ ಕಳ್ಳ ಕಿಂಡಿಯ ಮೂಲಕ ನುಸುಳುಕೋರರು ಬರುತ್ತಿರುವುದನ್ನು ನೋಡಿದ ಒನಕೆ ಓಬವ್ವ ಕಾಳಿಯ ಅವತಾರ ತಾಳಿ ಒನಕೆಯಿಂದ ಶತ್ರು ಸೈನ್ಯವನ್ನು ಸಾವಿರಾರು ಸೈನಿಕರನ್ನು ಸದೆಬಡಿದಂತಹ ವೀರ ಮಹಿಳೆ ಈಕೆ. ಎಸ್.ಸಿ ಜನಾಂಗದಲ್ಲಿ 101 ಜಾತಿಗಳಿದ್ದು ಅದರಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಮ್ಮ ಬಲಗೈ ಸಮುದಾಯವಾದ ಅಥವಾ ಚಲವಾದಿ ಸಮುದಾಯಕ್ಕೆ ಸೇರಿದ ವೀರ ವನಿತೆ ಒನಕೆ ಓಬವ್ವ ಎಂಬುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಛಲವಾದಿ ಸಮುದಾಯದ ಆಲೂರು ತಾಲೂಕಿನಲ್ಲಿ ಪ್ರಥಮ ಎಂಎ ಪದವಿ ಪಡೆದ ಕಾಟಿಹಳ್ಳಿಯ ಕೆ.ಆರ್ ತಿಮ್ಮಯ್ಯ, ಪ್ರಥಮ ಬಿ.ಇಡಿ ಪದವೀಧರ ಕರಡಿ ಬೆಟ್ಟದ ಕೆ.ಕೆ ರುದ್ರಯ್ಯ,105 ವರ್ಷದ ಶತಾಯುಷಿ ಮಾದೇನಹಳ್ಳಿ ಗ್ರಾಮದ ನಾಟಿ ವೈದ್ಯೆ ರುದ್ರಮ್ಮ, ತೊರಳಿ ಗ್ರಾಮದ ರಾಷ್ಟ್ರಮಟ್ಟದ ಕ್ರೀಡಾಪಟು ಪ್ರೀತಮ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು

ಪಪಂ ಅಧ್ಯಕ್ಷೆ ತಾಹೀರ ಬೇಗಂ, ಸದಸ್ಯ ತೌಪಿಕ್ ಅಹಮದ್, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಎ.ಟಿ ಮಲ್ಲೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್ ಶಿವಮೂರ್ತಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ, ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಚಾರ್, ಹಾಸನ ಹಾಲೂ ಒಕ್ಕೂಟ ನಿರ್ದೇಶಕ ಪಿ.ಎಲ್ ನಿಂಗರಾಜು, ಡಿಎಸ್ಎಸ್ ತಾಲೂಕು ಸಂಚಾಲಕ ಬಸವರಾಜು, ಮುಖಂಡರದ ಅಜ್ಜನಹಳ್ಳಿ ಲೋಕೇಶ್, ದೇವರಾಜು ಸೇರಿದಂತೆ ಇತರರು ಹಾಜರಿದ್ದರು.

Share this article