ಚನ್ನಪಟ್ಟಣ: ಈ ಚುನಾವಣೆ ನನ್ನ ರಾಜಕೀಯ ಜೀವನದ ಅಗ್ನಿ ಪರೀಕ್ಷೆ : ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Updated : Nov 12 2024, 11:20 AM IST

ಸಾರಾಂಶ

ಚನ್ನಪಟ್ಟಣ: ಈ ಚುನಾವಣೆ ನನ್ನ ರಾಜಕೀಯ ಜೀವನದ ಅಗ್ನಿ ಪರೀಕ್ಷೆ. ಯಾವ ಪಾತ್ರ ಮಾಡುತ್ತೀಯಾ ಅಂತ ಜನ ಕೇಳುತ್ತಾರೆ. ನನಗೆ ಜಾತಿ ಮುಖ್ಯ ಅಲ್ಲ. ನನಗೆ ಗೊತ್ತಿರೋದು ಮನುಷ್ಯತ್ವ ಒಂದೇ ಎಂದು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ: ಈ ಚುನಾವಣೆ ನನ್ನ ರಾಜಕೀಯ ಜೀವನದ ಅಗ್ನಿ ಪರೀಕ್ಷೆ. ಯಾವ ಪಾತ್ರ ಮಾಡುತ್ತೀಯಾ ಅಂತ ಜನ ಕೇಳುತ್ತಾರೆ. ನನಗೆ ಜಾತಿ ಮುಖ್ಯ ಅಲ್ಲ. ನನಗೆ ಗೊತ್ತಿರೋದು ಮನುಷ್ಯತ್ವ ಒಂದೇ ಎಂದು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಎನ್‌ಡಿಎ ಬಹಿರಂಗ ಸಮಾವೇಶದಲ್ಲಿ ಅಜ್ಜ, ಮಾಜಿ ಪ್ರಧಾನಿ ದೇವೇಗೌಡ, ತಂದೆ, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ದೀರ್ಘದಂಡ ನಮಸ್ಕರಿಸಿ ಭಾಷಣ ಮಾಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದು ಪ್ರಾದೇಶಿಕ ಪಕ್ಷ ಹಾಗೂ ಎನ್ ಡಿಎ ಕುಟುಂಬದ ಗೌರವದ ಪ್ರಶ್ನೆ. ಭೂಮಿಗೆ ಬಂದ ಮೇಲೆ ಯೋಗ್ಯತೆ ಸಂಪಾದನೆ ಮಾತ್ರ ಮುಖ್ಯ. ನನ್ನ ಪಾಲಿಗೆ ಈ ಚುನಾವಣೆ ನಿರ್ಣಾಯಕ. ಎರಡು ಸೋಲಿಗೆ ಎದೆಗುಂದಿಲ್ಲ, ಜನಾಭಿಪ್ರಾಯ ನನ್ನ ಮೇಲೆ ಇತ್ತು. ಕಾಂಗ್ರೆಸ್ ಕುತಂತ್ರದಿಂದ ನಾನು ಸೋತೀರಬಹುದು. ಆದರೆ, ಫಲಿತಾಂಶ ಬೇರೆ ಆಗಿರಬಹುದು ಎಂದು ತಿಳಿಸಿದರು.

ಕಾರ್ಯಕರ್ತರ ಬಯಕೆಯಂತೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದ್ದೇನೆ. ಯಾವ ಕಾರಣಕ್ಕೂ ಕ್ಷೇತ್ರದ ಜನ ಕೂಪನ್, ಆಮಿಷಗಳಿಗೆ ಬಲಿಯಾಗಲ್ಲವೆಂದು ನಂಬಿದ್ದೇನೆ. ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದಾಗ ಭಾವನಾತ್ಮಕವಾಗಿ ಮಾತಾಡಿದೆ. ನಾನು ಭಾವನೆಗಳುಳ್ಳ ವ್ಯಕ್ತಿ. ಕಳೆದ 16 ದಿನಗಳಲ್ಲಿ ಬಹಳ ಆಶೀರ್ವಾದ ಪಡೆದಿದ್ದೇನೆ. ಒಂದು ಪರೀಕ್ಷೆ ಮಾಡಿ. ಆನಂತರ ನನ್ನ ಕೆಲಸ ನೋಡಿ ನಿಮ್ಮ ಪರೀಕ್ಷೆಯಲ್ಲಿ ನಾನು ಗೆದ್ದನೊ ಇಲ್ಲವೋ ತೀರ್ಮಾನಿಸಿ ಎಂದು ನಿಖಿಲ್ ಮತದಾರರಲ್ಲಿ ಮನವಿ ಮಾಡಿದರು. 

Share this article