ರೋಣ: ತಾಲೂಕಿನ ಹೊನ್ನಿಗನೂರು ಗ್ರಾಮದ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಂದರ್ಭದಲ್ಲಿ ಚಲಿಸುತ್ತಿದ್ದ ರಥದ ಇರಸು (ಗಾಲಿಗೆ ಜೋಡಿಸಿದ ಕಟ್ಟಿಗೆ) ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಪ್ರತಿವರ್ಷದಂತೆ ಈ ಬಾರಿಯೂ ಬುಧವಾರ ಹೊನ್ನಿಗನೂರು ಗ್ರಾಮದಲ್ಲಿ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು, ರಥ ಎಳೆಯಲು ಕಾಯುತ್ತಿದ್ದರು. ಸಕಲ ವಾದ್ಯಮೇಳಗಳು, ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ರಥೋತ್ಸವಕ್ಕೆ ಚಾಲನೆ ದೊರೆತು, ಭಕ್ತರು ಜಯಘೋಷಗಳೊಂದಿಗೆ ತೇರನ್ನು ಎಳೆಯುತ್ತಿದ್ದ ವೇಳೆ ದಿಢೀರ್ ರಥದ ಮುಂದಿನ ಗಾಲಿಗೆ ಜೋಡಿಸಿದ ಕಟ್ಟಿಗೆಯ ಇರಸು ತುಂಡಾಗಿದೆ. ಈ ವೇಳೆ ರಥದ ಮೇಲೆ ಐವರು ಪೂಜಾರಿಗಳು ಸೇರಿ ಜನರಿದ್ದರು. ರಥ ಎಳೆಯಲು ನೂರಾರು ಭಕ್ತರಿದ್ದರು.ಘಟನೆಗೆ ಕಾರಣ: ಪ್ರಾಥಮಿಕ ಮಾಹಿತಿ ಹಾಗೂ ಸ್ಥಳೀಯರ ಪ್ರಕಾರ, ರಥದ ಗಾಲಿಗೆ ಜೋಡಣೆ ಮಾಡಿದ ಕಟ್ಟಿಗೆಯ ಇರಸು ಹಳೆಯದಾಗಿದ್ದರಿಂದ ಭಾರವನ್ನು ತಡೆದುಕೊಳ್ಳಲಾರದೆ ತುಂಡಾಗಿದ ಎನ್ನಲಾಗಿದೆ. ಕಟ್ಟಿಗೆ ಇರಸು ತುಂಡಾಗುತ್ತಿದಂತೆ ಗಾಲಿಯು ಕಟ್ಟಿಗೆಗೆ ಸಿಲುಕಿ ವಾಲಿಕೊಂಡು ನಿಂತಿತು.